ಭಾರತೀಯ ಸಂವಿಧಾನ ಹಾಗೂ ಮನುಸ್ಮೃತಿ ಇವೆರಡರ ವ್ಯತ್ಯಾಸ ತಿಳಿಯದೆ ನವ ಯುವಕರ ತಲೆಯಲ್ಲಿ ಹಿಂದುತ್ವ ಎಂಬ ವಿಷದ ಗಾಳಿ ಬಿತ್ತವ ಸಮಾಜ….!!!?

Listen to this article

ಭಾರತೀಯ ಸಂವಿಧಾನ ಹಾಗೂ ಮನುಸ್ಮೃತಿ ಇವೆರಡರ ವ್ಯತ್ಯಾಸ ತಿಳಿಯದೆ ನವ ಯುವಕರ ತಲೆಯಲ್ಲಿ ಹಿಂದುತ್ವ ಎಂಬ ವಿಷದ ಗಾಳಿ ಬಿತ್ತವ ಸಮಾಜ….!!!?

1949 ರಲ್ಲಿ ಅಂದರೆ ನಮ್ಮ ದೇಶದ ಸಂವಿಧಾನ ಜಾರಿಯಾಗುವ ಒಂದು ವರ್ಷ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ತನ್ನ ಮುಖವಾಣಿ ಪತ್ರಿಕೆಯಲ್ಲಿ ಹೀಗೆ ಬರೆದಿತ್ತು.

ಡಾ.ಬಿ.ಆರ್‌.ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮ್ರತಿಯಿಂದ ಏನೂ ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ.
ಸಂಘಪರಿವಾರ ಗುರೂಜಿ ಎಂದು ಸಂಬೋಧಿಸುವ ಮಾ.ಸ.ಗೋಲ್ವಲ್ಕರ್ ಹೀಗೆಂದಿದ್ದ. ” ಹಿಂದುಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು. ಇಡೀ ಮನುಕುಲದ ಅತಿ ಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು. ಹಾಗೆಯೇ ಸಂಘಪರಿವಾರದ ಮತ್ತೊಬ್ಬ ಸಂಸ್ಥಾಪಕ, ಹಿಂದುತ್ವ ಪದ ಹುಟ್ಟುಹಾಕಿದವ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದ ಸಾವರ್ಕರ್ ಹೀಗೆ ಹೇಳಿದ್ದ. – ವೇದಗಳ ನಂತರ ಅತ್ಯಂತ ಪೂಜನೀಯ ಗ್ರಂಥ ಮನುಸ್ಮ್ರತಿ ಹಾಗೂ ದೇಶವನ್ನು ಅದರ ಆಧಾರದಲ್ಲಿ ನಡೆಸಬೇಕು.
1950 ರ ಜನವರಿ 25 ರಂದು ಅಂದರೆ ಭಾರತ ಗಣರಾಜ್ಯವಾಗುವ ಒಂದು ದಿನ ಮೊದಲು RSS ಪತ್ರಿಕೆ Organizer ನಲ್ಲಿ ” ಮನು ನಮ್ಮ ಹೃದಯವನ್ನಾಳುತ್ತಾನೆ” ಎಂಬ ಶೀರ್ಷಿಕೆಯಲ್ಲಿ ನಿವೃತ್ತ ನ್ಯಾಯಾಧೀಶ ಶಂಕರ ಸುಬ್ಬಾ ಐಯರ್ ಎಂಬಾತ ಆರೆಸ್ಸೆಸ್ ಪರವಾಗಿ ಲೇಖನ ಬರೆದು ಮನುಸ್ಮ್ರತಿಯನ್ನೇ ದೇಶದ ಸಂವಿಧಾನವಾಗಿ ಜಾರಿ ಮಾಡಬೇಕು ಎಂದು ಬರೆದಿದ್ದ.
ನಿಮಗೆ ತಿಳಿದಿರಬಹುದು. ಬಾಬಾಸಾಹೇಬ್ ಅಂಬೆಡ್ಕರ್ ಮಹಾಡ್ ಸಮ್ಮೇಳನದಲ್ಲಿ ಮನುಸ್ಮ್ರತಿಯನ್ಜು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು.
ಹಾಗಾದರೆ ಈ ಮನು ಸ್ಮೃತಿ ಯಲ್ಲಿ ಏನಿದೆ?
ಇದರಲ್ಲಿ ತಿಳಿಸಲಾದ ಕೆಲವು‌ ಸಂಗತಿಗಳು ಹೀಗೆವೆ. ಓದಿ ನಿಮ್ಮ ತೀರ್ಮಾನಗಳಿಗೆ ನೀವು ಬನ್ನಿ.

ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು ( ಅಧ್ಯಾಯ -1:31)

ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳವರ್ಣಗಳ ( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ (ಅ- 1:91)

ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು ಹುಟ್ಟಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ ಒಡೆಯನಾಗಿರುತ್ತಾನೆ (ಅ-1:99)

ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣ ನು ಶ್ರೇಷ್ಡವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ ಅರ್ಹನಾಗಿರುತ್ತಾನೆ (ಅ-1:100)

ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹಾಗೂ ವೈಶ್ಯನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು (ಅ-2:31)

ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ ಜೊತೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ ಪ್ರೀತಿಯುಂಟಾಗುತ್ತದೆ (ಅ-3:231)

ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ ( ಅ- 3:241)

ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ( ಅ-4:61)

ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅ- 4:80)

ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ ಮಾತ್ರಕ್ಕೆ ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅ- 4:165)
ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು ಇಪ್ಪತ್ತೊಂದು ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (ಅ-4:166)

ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ ಯಾಗಗಳಲ್ಲಿ, ಶಾಸ್ತ್ರ ಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿ‌ನೀಡಿ ಅವುಗಳ ಮಾಂಸದಿಂದ ಪುರೋಡಾಶನವನ್ನು ( ಹವಿಸ್ಸನ್ನು) ಮಾಡಿದ್ದರು ( ಅ-5:23)

ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ ಶ್ರಾದ್ಧದೂಟದಲ್ಲಿನ ಮಾಂಸವನ್ನು ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ ಉಂಟಾದಾಗ ಅನಿವಾರ್ಯವಾಗಿ ಮಾಂಸವನ್ನು ತಿನ್ನಬಹುದು (ಅ-5:27)

ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ ವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅ- 5:28)

ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ ಬ್ರಾಹ್ಮಣ ನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ ಗತಿಯನ್ನು ಉಂಟು ಮಾಡುತ್ತಾನೆ (ಅ- 5:42)

ಪತಿಯ‌ನಡತೆಯು ಚೆನ್ನಾಗಿಲ್ಲವಾದರೂ, ಅವನು‌ ಕಾಮಾತುರನಾಗಿ ಅನ್ಯ ಹೆಂಗಸಲ್ಲಿ ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು ದೇವರೆಂದೇ ಭಾವಿಸಿ ಅವನ ಸೇವೆ ಮಾಡಬೇಕು ( ಅ- 5:154)

ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು ಸತ್ಕರಿಸಬೇಕು. ವಿದ್ಯಾವಂತ‌ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು ಉಂಟುಮಾಡುತ್ತದೆ ( ಅ-7:82)

ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ ದೇಶವು ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು ನೋಡುತ್ತಿದ್ದಂತೆಯೇ ಕಷ್ಟ ಪಡುತ್ತಾನೆ (ಅ-8:21)

ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (ಅ-8:22)

ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ ಮನ್ನಿಸಬೇಕು. ಸಮಾನ ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ ಸಾಕ್ಷಿ‌ ಮನ್ನಿಸಬೇಕು. ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು‌ ಬ್ರಾಹ್ಮಣ ಶ್ರೇಷ್ಟನ ಸಾಕ್ಷಿ‌ನಂಬಬೇಕು (ಅ-8:73)

ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು ಅಥವಾ ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ ದಂಡನೆ) ವಿಧಿಸಬೇಕು. (ಅ- 8:627)

ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ ಕ್ಷತ್ರಿಯ ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ ಆ ಶೂದ್ರನ ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನು‌ಕೆಳ ಜಾತಿಯವನು ( ಅ-8:270)

ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂತ ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅ- 8:271)

ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿ‌ಹಾಗೂ ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅ-8:272)

ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ ಅಂಗದಿಂದ ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು ಇತ್ಯಾದಿಯನ್ನು ) ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅ-8:279)

ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು ಕತ್ತರಿಸಬೇಕು ( ಆಗ ಅವನು ಸಾಯಬಾರದು) (ಅ- 8:281)

ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ ಕತ್ತರಿಸಬೇಕು. ಮೂತ್ರ ಚೆಲ್ಲಿ ಅವಮಾಬಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ ಹೂಸು ಬಿಟ್ಟು ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅ-8:282)
ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. ತನಗಿಂತ ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ ಗೃಹಬಂಧನದಲ್ಲಿರಿಸಬೇಕು (ಅ-8:365)

ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ ಕಸಿದುಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅ-8:375)

ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅ-8:377)

ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ ಮಟ್ಟಿಗೆ ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ ಮರಣದಂಡನೆಯನ್ನೇ ವಿಧಿಸಬೇಕು (ಅ-8:379)

ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು. ಅವನ ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅ-8:380)

ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು (ಅ-9:17)

ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ. (ಅ: 9:19)

ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗಬೇಕು. ಇಲ್ಲವೇ ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ ಮಾಡಿಕೊಳ್ಳಬೇಕು. ಅದಕ್ಕಿಂತ ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅ: 9:94)

ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ ಕೋಪಗೊಳ್ಳಬಾರದು. ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ ನಷ್ಟವಾಗಿಬಿಡುವುದು ( ಅ-9:313)

ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನು ನೇಮಿಸಬಲ್ಲರು.‌ದೇವತೆಗಳ‌ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು ರೇಗಿಸಿ ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅ-9:315)

ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ ಮಾಡಿದರೆ ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅ-10:123)

ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅ-10:129)

ಇಂದು ಬಹಳಷ್ಟು ಶೂದ್ರ ಯುವಕರು ಕಂಕಣ ಬದ್ಧರಾಗಿ ಹಿಂದುತ್ವಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಅವರಿಗೆ ಮನುಧರ್ಮ ವನ್ನು ಆಧರಿಸಿದ ಹಿಂದುತ್ವ ಯಶಸ್ವಿಯಾದರೆ ಎಂತಹ ವ್ಯವಸ್ಥೆಯನ್ನುವ RSS/ BJP ತರಲಿವೆ ಎಂಬುದು ತಿಳಿಯಲಿ…

ವರದಿ.ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend