ವರದಿ. ಮಂಜುನಾಥ್, ಎಚ್
ಚಿತ್ರದುರ್ಗ: ನಾಯಕನಹಟ್ಟಿ / ಮಾರ್ಚ್ 29ರಂದು ನಿಗದಿಯಾಗಿರುವ ಜಿಲ್ಲೆಯ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆಯ ಅಂಗವಾಗಿ ರಥದ ಗಾಲಿ ಪೂಜಾ ಕಾರ್ಯ ಸೋಮವಾರ ನೆರವೇರಿತು.. ಮಾ. 29 ರಂದು ಜರುಗಲಿರುವ ಜಾತ್ರೆಯ ಮೊದಲ ಹಂತವಾಗಿ ರಥದ ಗಾಲಿಗಳ ಪೂಜೆ ನೆರವೇರಿಸಲಾಯಿತು. ಹೊರಮಠ ಹಾಗೂ ಒಳಮಠಗಳಲ್ಲಿ ಹುರುಳಿ ಕಾಳು (ಗುಗ್ಗುರಿ) ಬೇಯಿಸಲಾಯಿತು. ಹೊರಮಠದಲ್ಲಿ ಸುಮಾರು 2 ಕ್ವಿಂಟಲ್ ಹುರುಳಿಯನ್ನು ಬೆರಣಿ (ಒಣಗಿಸಿದ ಸಗಣಿ) ಬಳಸಿ ಬೇಯಿಸುವುದು ವಿಶೇಷ. ದೇವರ ಎತ್ತುಗಳಿರುವ ಬೊಮ್ಮದೇವರಹಟ್ಟಿ, ನಲಗೇತನಹಟ್ಟಿ ಸೇರಿದಂತೆ ನಾನಾ ಸ್ಥಳಗಳಿಂದ ಸುಮಾರು 20 ಕ್ವಿಂಟಲ್ ಬೆರಣಿ ತರಲಾಗಿತ್ತು. ಬೆರಣಿಯ ಬೆಂಕಿಯಿಂದ ಹುರುಳಿಯನ್ನು ಬೇಯಿಸಲಾಯಿತು. ಬೆರಣಿ ಸುಟ್ಟ ನಂತರ ದೊರೆಯುವ ಬೂದಿಯನ್ನು (ಭಸ್ಮ) ದೇವಾಲಯಕ್ಕೆ ಪ್ರತಿ ದಿನ ಆಗಮಿಸುವ ಭಕ್ತರಿಗೆ ನೀಡಲಾಗುವುದು. ಭಕ್ತಾದಿಗಳು ಈ ಭಸ್ಮವನ್ನು ತಮ್ಮ ಹೊಲಗಳಿಗೆ ಚಿಮುಕಿಸುವ ಸಂಪ್ರದಾಯವಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಇದೇ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಗಾಲಿ ಪೂಜೆಯ ದಿನ ತಯಾರಿಸಿದ ಈ ಭಸ್ಮವನ್ನು ಇಡೀ ವರ್ಷ ದೇವಾಲಯದಲ್ಲಿ ಬಳಸಲಾಗುತ್ತದೆ. ಸೋಮವಾರದ ವಾರೋತ್ಸವ ಹಾಗೂ ಗಾಲಿ ಪೂಜೆಯ ನಂತರ ಬೇಯಿಸಿದ ಹುರುಳಿಯನ್ನು ಪ್ರಸಾದವಾಗಿ ವಿತರಿಸಲಾಯಿತು. ಮಾ. 22 ರಿಂದ ಕಂಕಣ ಧಾರಣೆ ಕಾರ್ಯಕ್ರಮಗಳೊಂದಿಗೆ ಜಾತ್ರೆಯ ಧಾರ್ಮಿಕ ವಿ ಧಿಗಳು ಆರಂಭವಾಗಲಿವೆ. ದೇವಾಲಯದ ಇಒ ಮಂಜುನಾಥ ಬಿ. ವಾಲಿ, ಸಿಬ್ಬಂದಿ ಸತೀಶ, ಮುಖಂಡರಾದ ಕೆ. ತಿಪ್ಪೇರುದ್ರಪ್ಪ, ಜೆ.ಪಿ. ರವಿಶಂಕರ್, ದೊರೆ ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ, ಟಿ. ರುದ್ರಮುನಿ, ಡಿ. ಭೋಗೇಶ್, ಕಾಂತರಾಜ್, ದಳವಾಯಿ ರುದ್ರಮುನಿ ಇತರರು ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030