ಚಿತ್ರದುರ್ಗ: ಮೊಳಕಾಲ್ಮುರು: ಕೃಷಿ ಇಲಾಖೆ ವತಿಯಿಂದ ರೈತರಿಗೆ ಪಟ್ಟಣದಲ್ಲಿ ಉಚಿತವಾಗಿ ತೊಗರಿ ಹಾಗೂ ಶೇಂಗಾ ಬಿತ್ತನೆ ಬೀಜ ನೀಡಲಾಯಿತು. ಹಂಗಾಮಿನ ಬಿತ್ತನೆ ಪೂರಕವಾಗಿ ತಾಲೂಕಿನ ರೈತರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ರೈತರು ಇಲಾಖೆಯ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಟಿ.ಸುರೇಶ ಕುಮಾರ್ ಹೇಳಿದರು. ಪಟ್ಟಣದ ಇಲಾಖೆ ಆವರಣದಲ್ಲಿ ನಡೆದ ಜಿ.ಪಂ, ತಾ.ಪಂ, ಕೃಷಿ ಇಲಾಖೆ ಸಹಯೋಗದಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ಯಲ್ಲಿ ಆಯೋಜಿಸಲಾಗಿದ್ದ ತೊಗರಿ ಕಿಟ್ ವಿತರಣಾ ಕಾರ್ಯ ಕ್ರಮದಲ್ಲಿ ಮಾತನಾಡಿ, ಪ್ರಸ್ತುತ ದಿನ ಗಳಲ್ಲಿ ಸಮಾಜದಲ್ಲಿ ಸಿರಿ ಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿದೆ. ರೈತರು ಕೇವಲ ವಾಣಿಜ್ಯ ಶೇಂಗಾ ಬೆಳೆಯನ್ನೇ ನೆಚ್ಚಿಕೊಳ್ಳದೆ ಸಿರಿ ಧಾನ್ಯಗಳನ್ನು ಬೆಳೆಯಬೇಕು. ಏಕ ಬೆಳೆ ಪದ್ಧತಿಯಿಂದ ಇಳುವರಿ ಇಲ್ಲದೆ ಆರ್ಥಿಕವಾಗಿ ನಷ್ಟ ಅನುಭವಿ ಸುವಂತಾಗುತ್ತೆ. ಹಾಗಾಗಿ ರೈತರು ಒಂದೇ ಬೆಳೆಗೆ ಸೀಮಿತರಾಗಬಾರದು. ಈ ಬಾರಿ ತಾಲೂಕಿನಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಕೃಷಿ ಇಲಾಖೆ ಎಡಿವಿಸಿ ಉಮೇಶ್ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬೆಳೆಗಳಲ್ಲಿ ಅಕ್ಕಡಿ ಬೆಳೆ ಪದ್ಧತಿಯು ಇಲ್ಲವಾಗುತ್ತಿದೆ. ಇದರಿಂದ ರೈತರಲ್ಲಿ ದ್ವಿದಳ ಧಾನ್ಯಗಳ ಕೊರತೆಯಾಗಲು ಕಾರಣವಾಗುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ಯಾವುದೇ ಬೆಳೆ ಅಕ್ಕಡಿ ಬೆಳೆಯನ್ನು ಇರಲಿ ಬೆಳೆಯಬೇಕು. ಶೇಂಗಾ ಬೆಳೆಯಲ್ಲಿ ತೊಗರಿ ಅಥವಾ ಅಲಸಂದೆ ಬೆಳೆಯನ್ನು ಅಕ್ಕಡಿ ಸಾಲನ್ನಾಗಿ ಹಾಕಬೇಕು. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಒಟ್ಟು 33200 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ. ಅದರಲ್ಲಿ 200 ಹೆಕ್ಟೇರ್ ತೊಗರಿ ಬಿತ್ತನೆ ಬೀಜದ ಗುರಿ ಇದೆ ಎಂದರು. ಎಇಒ ಗಿರೀಶ್, ಆತ್ಮ ಯೋಜನೆಯ ಅಧಿಕಾರಿಯಾದ ನಿರಂಜನಮೂರ್ತಿ, ಅಂಜಿನಪ್ಪ ತಾಲ್ಲೂಕಿನ ರೈತರು ಉಪಸ್ಥಿತರಿದ್ದರು..
ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030