ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ, ಹೊಸೂರು, ಚೌಟಯ್ಯನಹಟ್ಟಿ, ಸುಟ್ಟಕನಾರಹಟ್ಟಿ, ನಡುವಲಹಟ್ಟಿ, ಗ್ರಾಮದಲ್ಲಿ ಇಂದು ಕೋವಿಡ್-19 ಸೋಂಕಿನ ಸಂಬಂಧ 18 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ ವ್ಯಾಕ್ಸಿನ್ ಪಡೆಯಲು ಹಳ್ಳಿಯಲ್ಲಿ ವೃದ್ಧರು ಹಿಂದೇಟು ಹಾಕುತ್ತಿದ್ದಾರೆ. ಹೌದು.. ಹೂಡೇಂ ಗ್ರಾಮ ಪಂಚಾಯಿತಿಯ 6 ಹಳ್ಳಿಯ 18 ವರ್ಷ ಮೇಲ್ಪಟ್ಟವರ ಸಂಖ್ಯೆ 3928 ಜನರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಈವರೆಗೆ 175 ಜನರು ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿಯವರು ತಾಯಕನಹಳ್ಳಿಯಲ್ಲಿ ಮನೆಮನೆಗೆ ತೆರಳಿ ಲಸಿಕೆಯಿಂದ ಯಾವುದೇ ರೀತಿ ಅಡ್ಡಪರಿಣಾಮ ಉಂಟಾಗುವುದಿಲ್ಲ ಎನ್ನುವುದನ್ನು ಹಲವಾರು ಬಾರಿ ಸ್ಪಷ್ಟಪಡಿಸಿದೆ. ಆದರೂ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುತ್ತಿರುವ ಸುಳ್ಳು ಸಂದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸುತ್ತಿಲ್ಲ. ಇದರ ಜತೆಗೆ ಲಸಿಕೆ ಪಡೆದ 45 ದಿನ ಮದ್ಯ ಸೇವಿಸಬಾರದು, ಜ್ವರ ಬರುತ್ತದೆ ಇತ್ಯಾದಿ ಅಸತ್ಯ ಮಾಹಿತಿಗಳು, ಅಪಪ್ರಚಾರ ಕೂಡಾ ಜನರು ಹಿಂಜರಿಯುವಂತೆ ಮಾಡಿದೆ. ಜನರನ್ನು ಲಸಿಕೆ ಹಾಕಿಸಿ ಎಂದು ಮನೆಮನೆಗೆ ತೆರಳಿ ಕೇಳಿದರೆ ನಾವು ಸತ್ತೋದ್ರು ಪರವಾಗಿಲ್ಲ ಲಸಿಕೆ ಹಾಕಲ್ಲ, ಮತ್ತೊಬ್ಬರು ಹಾಕಿಸುತ್ತೇವೆ ಎಂದು ಹೇಳುತ್ತಾರೆ. ಈ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಮಾರೇಶ್ ಅವರು, ಉಪಾಧ್ಯಕ್ಷರು ಕೆ.ಎನ್ ರಾಘವೇಂದ್ರ ಅವರು, ಹಾಗೂ ಹೂಡೇಂ ಗ್ರಾ.ಪಂ ಸದಸ್ಯರಾದ ಸುಂದರಮ್ಮ ಮಲ್ಲಿಕಾರ್ಜುನ್, ಗದ್ದಿ ಸ್ವಾಮಿ, ಆರೋಗ್ಯ ಸಹಾಯಕರು ಪ್ರೇಮ, ಫಾತಿಮಾ, ರಾಜಮ್ಮ, ಶಿವಪ್ರಕಾಶ್ ಹಾಗೂ ಆಶಾ ಕಾರ್ಯಕರ್ತರಾದ ಲಕ್ಷ್ಮೀದೇವಿ, ಚೌಡಮ್ಮ, ವಿನೋದ, ನಾಗವೇಣಿ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030