ಚಿತ್ರದುರ್ಗ, ಜುಲೈ: ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ವಿಭಾಗದ ಮುಖಂಡ ಸಿದ್ದೇಶ್ ಯಾದವ್ (49) ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಛೇರಿಯಲ್ಲಿ ಇಂದು ಮಧ್ಯಾಹ್ನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಇಂದು ಮಧ್ಯಾಹ್ನ ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ಪಕ್ಷದ ಸಭೆ ನಡೆಯುತ್ತಿರುವಾಗಲೇ ಹೃದಯಾಘಾತವಾಗಿದೆ.
ತಕ್ಷಣವೇ ಅವರನ್ನು ಹತ್ತಿರದ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಎಬಿವಿಪಿಯಲ್ಲಿ 1988ರಿಂದ ಕಾರ್ಯ ನಿರ್ವಹಿಸಿದ್ದು, ನಗರ ಕಾರ್ಯದರ್ಶಿ, ರಾಜ್ಯ ಕಾರ್ಯಕಾರಿಣಿ ಸದಸ್ಯರು, ಜಿಲ್ಲಾ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದು, ನಂತರ ಬಿಜೆಪಿಯನ್ನು ಸೇರಿದ ಅವರು ಇದರಲ್ಲಿ ಎನ್.ಜಿ.ಓ.ರಾಜ್ಯ ಸಹ ಸಂಚಾಲಕರಾಗಿ, ಚಿತ್ರದುರ್ಗ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ, 2008 ರಿಂದ 2011ರವರೆಗೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, 2013ರಲ್ಲಿ ಬಿಜೆಪಿಯಿಂದ ಹಿರಿಯೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ, ರಾಜ್ಯ ಓಬಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿ ಈಗ ಹಾಲಿ ಬಳ್ಳಾರಿ ವಿಭಾಗದ ಪ್ರಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತ ಸಿದ್ದೇಶ್ ಯಾದವ್ ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಎಂ.ಎ.ಪದವೀದರರರಾಗಿದ್ದರು. ಹಿರಿಯೂರು ತಾಲೂಕಿನ ಬಸಪ್ಪ ಮಾಳಿಗೆ ಇವರ ಹುಟ್ಟುರಾಗಿದೆ. ಇವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಆರ್ಎಸ್ಎಸ್ನ ರಾಷ್ಟ್ರೀಯ ಸಹಕಾರ್ಯವಾಹಕರಾಗಿದ್ದ ದತ್ತಾತ್ರೇಯ ಅವರ ಜೊತೆಯಲ್ಲಿ ಒಡನಾಡಿಯಾಗಿದ್ದರು.
ಸಿದ್ದೇಶ್ ಯಾದವ್ ಅವರ ಅಗಲಿಕೆಗೆ ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ದಾವಣಗೆರೆ ಸಂಸದರಾದ ಜಿ.ಎಂ ಸಿದ್ದೇಶ್ವರ, ಶಾಸಕರಾದ ಎಂ.ಚಂದ್ರಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ವೈ.ಎ.ನಾರಾಯಣಸ್ವಾಮಿ, ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಎ.ಮುರುಳಿ, ಮುಖಂಡರಾದ ಲಿಂಗಮೂರ್ತಿ, ಜಯಪಾಲಯ್ಯ, ಅನಿತ್ ಕುಮಾರ್ ಸೇರಿದಂತೆ ಇತರರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಜುಲೈ 4ರಂದು ಸ್ವಗ್ರಾಮವಾದ ಹಿರಿಯೂರಿನ ಬಸಪ್ಪ ಮಾಳಿಗೆಯಲ್ಲಿ ಸಿದ್ದೇಶ್ ಯಾದವ್ ಅವರ ಅಂತ್ಯಕ್ರಿಯೆ ನಡಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ..
ವರದಿ. ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030