ಹೆಚ್ಚುವರಿ ಅರ್ಜಿ ಶುಲ್ಕ ಪಡೆಯದಿರಲು ಸೂಚನೆ
ಚಿತ್ರದುರ್ಗ,ಜುಲೈ01:
ಕೋವಿಡ್-19 ಸಾಂಕ್ರಾಮಿಕ 2ನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 11 ವರ್ಗಗಳ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಮತ್ತು ಭಟ್ಟಿಕಾರ್ಮಿಕ ವೃತ್ತಿಯಲ್ಲಿ ತೊಡಗಿಕೊಂಡ ಕಾರ್ಮಿಕರಿಗೆ ತಲಾ ರೂ2000/- ಗಳ ಒಂದು ಬಾರಿಯ ನೆರವನ್ನು ಘೋಷಿಸಿದ್ದು, ಜುಲೈ 31ರ ವರೆಗೂ ಅರ್ಹ ಫಲಾನುಭವಿಗಳಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಥವಾ ನೇರವಾಗಿ/ಸಿಟಿಜನ್ ಲಾಗಿನ್ ಮುಖಾಂತರ ಅಗತ್ಯ ದಾಖಲೆಗಳೊಂದಿಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನಗರ ಪ್ರದೇಶದಲ್ಲಿ ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ)ಗಳು ಹಾಗೂ ಇನ್ನಿತರೆ ಕಂಪ್ಯೂಟರ್ ಕೇಂದ್ರಗಳಲ್ಲಿ ಸರ್ಕಾರದಿಂದ ನಿಗಧಿಪಡಿಸಿರುವ ಸೇವಾ ಶುಲ್ಕ ರೂ.25/-ಗಳನ್ನು ಪಾವತಿಸಿಕೊಂಡು ಅರ್ಜಿಯನ್ನು ತಂತ್ರಾಂಶದಲ್ಲಿ ನಮೂದಿಸಬೇಕಾಗಿರುತ್ತದೆ.
ಆದರೆ ಕೆಲವು ಸೇವಾ ಕೇಂದ್ರಗಳು ರೂ.100/- ರಿಂದ ರೂ.200/- ವರೆಗೆ ಸೇವಾ ಶುಲ್ಕವನ್ನು ಹೆಚ್ಚುವರಿಯಾಗಿ ಪಾವತಿಸಿಕೊಂಡು ಅರ್ಜಿಯನ್ನು ತಂತ್ರಾಂಶದಲ್ಲಿ ನಮೂದಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.
ಆದ್ದರಿಂದ ಗೌರವಾನ್ವಿತ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಯಾವುದೇ ಸೇವಾ ಕೇಂದ್ರಗಳು ಸರ್ಕಾರ ನಿಗಧಿಪಡಿಸಿರುವ ಸೇವಾ ಶುಲ್ಕವನ್ನು ಹೊರತುಪಡಿಸಿ, ಹೆಚ್ಚುವರಿಯಾಗಿ ಅರ್ಜಿ ಶುಲ್ಕ ಪಡೆಯಬಾರದೆಂದು ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ. ಒಂದು ವೇಳೆ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ಅರ್ಜಿ ಶುಲ್ಕ ಪಡೆಯುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಲ್ಲಿ ಅಂತಹ ಸೇವಾ ಕೇಂದ್ರಗಳ ಸಿ.ಎಸ್.ಸಿ ಐಡಿ ಹಾಗೂ ಸೇವಾಸಿಂದು ಕೆಐಒಎಸ್ಕೆ ಐಡಿಯನ್ನು ಡಿಯಾಕ್ಟಿವೇಟ್ ಮಾಡಿ ಅಂತಹ ಕೇಂದ್ರಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030