ಚಳ್ಳಕೆರೆ : ತಾಲೂಕಿನ ಹಾಲ ಗೊಂಡನಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬ ಸಹಜ ಸಾವನ್ನಪ್ಪಿದ್ದು,ಅವನ ಅಂತ್ಯಕ್ರಿಯೆ ನೆರವೇರಿಸಲು ಹೋದ ವೇಳೆ, ಸವರ್ಣೀಯ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರ ಮಾಡಲು ಬಿಡದೆ ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ. ನಿನ್ನೆ ಹಾಲಗೊಂಡನಹಳ್ಳಿ ಗ್ರಾಮದ ಸಣ್ಣ ತಿಪ್ಪಯ್ಯ ಎನ್ನುವ ವ್ಯಕ್ತಿ ಸಹಜ ಸಾವನ್ನಪ್ಪಿದ್ದಾನೆ.ಈ ಗ್ರಾಮದಲ್ಲಿ ಸ್ಮಶಾನವಿಲ್ಲದ ಕಾರಣ, ಗ್ರಾಮದ ಪಕ್ಕದಲ್ಲೇ ಇರುವ ವೇದಾವತಿ ನದಿ ದಂಡೆಯ ಬಳಿ, ಅಂತ್ಯಕ್ರಿಯೆ ನೆರವೇರಿಸಲು ಹೋದ ಸಂದರ್ಭದಲ್ಲಿ,ಮೇಲ್ವರ್ಗದ ವ್ಯಕ್ತಿಯೊಬ್ಬ ಶವಸಂಸ್ಕಾರ ನೆರವೇರಿಸುವ ಸರ್ಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡು,ಇದು ನನ್ನ ಸ್ವಂತ ಜಮೀನು ಇಲ್ಲಿ ಅಂತ್ಯಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಅಡ್ಡಿಪಡಿಸಿದ್ದಾನೆ.
ಈ ಬಗ್ಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ವಿಷಯ ತಿಳಿಯುತ್ತಿದ್ದಂತೆ,ಚಳ್ಳಕೆರೆ ತಹಶೀಲ್ದಾರ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಿದ್ದಾರೆ. ಕೂಡಲೇ, ತಹಶೀಲ್ದಾರ್ ಎನ್.ರಘುಮೂರ್ತಿ ಅವರು, ಪೊಲೀಸ್ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ, ಇದು ಕಂದಾಯ ಇಲಾಖೆಯ ಸ್ಥಳವಾಗಿದ್ದು, ಈ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸವರ್ಣಿಯ ವ್ಯಕ್ತಿ ಹಾಗೂ ಗ್ರಾಮಸ್ಥರಿಗೆ ತಿಳಿಹೇಳಿ, ನಂತರ,ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿಸಿದ್ದಾರೆ. ಹಲವಾರು ವರ್ಷಗಳಿಂದ ಸ್ಮಶಾನಕ್ಕೆ ಜಾಗವಿಲ್ಲದೆ, ವೇದಾವತಿ ನದಿ ದಂಡೆಯ ಮರಳಿನಲ್ಲೇ, ಶವಸಂಸ್ಕಾರ ನಡೆಸುತ್ತಿದ್ದ ದಲಿತ ಸಮುದಾಯಕ್ಕೆ ಮುಕ್ತಿ ದೊರಕಿದಂತಾಗಿದೆ.
ವರದಿ, ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030