ಲೋಕಸಭೆ ಚುನಾವಣೆ; ಮಾಧ್ಯಮ ಕಣ್ಗಾವಲು ಘಟಕದ ಸಭೆ
ಚುನಾವಣಾ ಪ್ರಚಾರ-ಮಾಧ್ಯಮಗಳ ಮೇಲೆ ನಿಗಾ: ಗುರುನಾಥ ಕಡಬೂರ
ಬೆಳಗಾವಿ,: ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ನಡೆಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲರೂ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಚುನಾವಣೆ ಪ್ರಕ್ರಿಯೆ ಯಶಸ್ವಿಗೆ ಶ್ರಮಿಸಬೇಕು ಎಂದು ವಾರ್ತಾ ಇಲಾಖೆ ಉಪ ನಿರ್ದೇಶಕ ಹಾಗೂ ಮಾಧ್ಯಮ ಕಣ್ಗಾವಲು ಘಟಕದ ನೋಡಲ್ ಅಧಿಕಾರಿ ಗುರುನಾಥ ಕಡಬೂರ ಅವರು ತಿಳಿಸಿದರು.
ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಗರದ ವಾರ್ತಾ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಾಧ್ಯಮ ಕಣ್ಗಾವಲು ಘಟಕದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಅಭ್ಯರ್ಥಿಗಳು ತಮ್ಮ ಸ್ವಂತ ಫೇಸ್ಬುಕ್ ಖಾತೆ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರ ಮಾನಹಾನಿ, ನಂಬಿಕೆ, ಗೌರವಕ್ಕೆ ಧಕ್ಕೆ ತರುವಂತಹ ವಿಷಯಗಳನ್ನು ಹಂಚಿಕೊಂಡರೆ ಅಂಥವುಗಳನ್ನು ಗಮನಿಸಿ ಚುನಾವಣಾಧಿಕಾರಿಗಳಿಗೆ ವರದಿ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಖಾತೆಗಳ ಮೂಲಕ ವೈಯಕ್ತಿಕ ಅನಿಸಿಕೆ, ಅಭಿಪ್ರಾಯವನ್ನು ಹಂಚಿಕೊಳ್ಳಲು ಸಾರ್ವಜನಿಕರು ಹಾಗೂ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಆದರೆ ಅಭ್ಯರ್ಥಿಗಳು ಏಕಕಾಲದಲ್ಲಿ ಲಕ್ಷಾಂತರ ಜನರನ್ನು ತಲುಪಲು ಗೂಗಲ್ ಅಥವಾ ಫೇಸಬುಕ್ ಮೂಲಕ ಕೈಗೊಳ್ಳುವ ಚುನಾವಣಾ ಪ್ರಚಾರದ ವಿಷಯವಸ್ತುವಿಗೆ ಕಡ್ಡಾಯವಾಗಿ ಪ್ರಮಾಣೀಕರಣ ಪಡೆಯಬೇಕು ಎಂದು ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ ಆಡಿಯೋ-ವಿಷುವಲ್ ಪ್ರಚಾರ ಕೈಗೊಳ್ಳುವುದಕ್ಕಿಂತ ಮೊದಲು ಅಭ್ಯರ್ಥಿಗಳು ಎಂಸಿಎಂಸಿ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯುವುದು ಅಗತ್ಯವಿರುವುದರಿಂದ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.
ಅಭ್ಯರ್ಥಿಗಳ ಚುನಾವಣಾ ಖರ್ಚು-ವೆಚ್ಚಗಳ ಮೇಲೆ ನಿಗಾ ವಹಿಸಲು ಅನುಕೂಲವಾಗುವಂತೆ ಮಾಧ್ಯಮ ಕಣ್ಗಾವಲು ಘಟಕ ಕಾರ್ಯ ನಿರ್ವಹಿಸಬೇಕು.
ಟಿವಿ, ಕೇಬಲ್ ಟಿವಿ, ಎಲ್.ಇ.ಡಿ. ವಾಹನಗಳ ಮೂಲಕ ಪ್ರಚಾರ, ಆಡಿಯೋ ಪ್ರಚಾರ, ಬಲ್ಕ್ ಎಸ್.ಎಂ.ಎಸ್, ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕಾಗಿ ಎಂಸಿಎಂಸಿ.ಯಿಂದ ಪೂರ್ವಾನುಮತಿ ಪಡೆಯಲು ಬರುವ ಅರ್ಜಿಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದು ಮಾಧ್ಯಮ ಕಣ್ಗಾವಲು ಘಟಕದ ನೋಡಲ್ ಅಧಿಕಾರಿ ಗುರುನಾಥ ಕಡಬೂರ ಅವರು ಹೇಳಿದರು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಮಾಧ್ಯಮ ಕಣ್ಗಾವಲು ಘಟಕದ ನೋಡಲ್ ಅಧಿಕಾರಿ ವಿಜಯಕುಮಾರ ಬೆಟಗೇರಿ,
ಸಣ್ಣ ಉಳಿತಾಯ ಖಾತೆ ಸಹಾಯಕ ನಿರ್ದೇಶಕ ಎಂ.ವಿ ಕಂಗ್ರಾಳಕಾರ, ಸಿಟಿಇ ಕಾಲೇಜಿನ ಉಪನ್ಯಾಸಕಿ ಪ್ರೊ. ಝಡ್.ಜಿ ಸಯ್ಯದ್, ವಾರ್ತಾ ಇಲಾಖೆ ಸಿಬ್ಬಂದಿಗಳಾದ ಅನಂತ ಪಪ್ಪು, ಎಂ.ಎಲ್ ಜಮಾದರ, ಶಿಕ್ಷಣ ಇಲಾಖೆಯ ಶ್ರೀಮತಿ ಎಂ.ಎಂ ಪಾಟೀಲ, ಎಸ್.ಎಸ್. ನಾಗನೂರ, ಮಹಾದೇವ ನಿಚ್ಚಣಕಿ ಮತ್ತು ಮಾಧ್ಯಮ ಕಣ್ಗಾವಲು ಘಟಕದ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು…
ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030