ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ಖಡಕ್ ಸೂಚನೆಗೆ ಎಚ್ಚೆತ್ತ ವಿಮ್ಸ್ ಆಡಳಿತಮಂಡಳಿ
ವಿಮ್ಸ್ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ
ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಭೇಟಿ ನೀಡಿ ವಿಮ್ಸ್ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದ ಬೆನ್ನಲ್ಲಿಯೇ ವಿಮ್ಸ್ ಆಡಳಿತ ಮಂಡಳಿ ಎಚ್ಚೆತ್ತಿದ್ದು, ಆಸ್ಪತ್ರೆಯ ಆವರಣದಾದ್ಯಂತ ಸ್ವಚ್ಛತಾ ಕಾರ್ಯವನ್ನು ಸೋಮವಾರ ಬೆಳಗ್ಗೆಯಿಂದಲೇ ಆರಂಭಿಸಿದೆ.
ಆಸ್ಪತ್ರೆಯ ಹೆರಿಗೆ ವಾರ್ಡ್ ಹತ್ತಿರ,ಹಳೆಯ ಡೆಂಟಲ್ ಕಾಲೇಜು ಸುತ್ತಮುತ್ತ ಸ್ವಚ್ಛತೆ ಸೇರಿದಂತೆ ಅಸ್ಪತ್ರೆಯ ಎಲ್ಲೆಡೆ ಸ್ವಚ್ಛತಾಕಾರ್ಯ ಮಾಡಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ವುನ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಶುಶ್ರೂಷಕ ಅಧೀಕ್ಷಕರುಗಳಿಗೆ ಪತ್ರ ಬರೆದು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದಾರೆ.
“ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಫೆ.5 ಮತ್ತು 6 ರಂದು ವಿಮ್ಸ್ ಆಸ್ಪತ್ರೆಯಗೆ ಭೇಟಿ ನೀಡಿ ಆಸ್ಪತ್ರೆಯ ವಾರ್ಡ್ಗಳು ಮತ್ತು ಆಸ್ಪತ್ರೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆಯನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿನಿತ್ಯ ಸ್ವಚ್ಚತೆಯನ್ನು ಕಾಪಾಡಲು ತಿಳಿಸಿದ್ದಾರೆ ಮತ್ತು ತಪ್ಪಿದ್ದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ದ ನಿಯಮಸಾರವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ’’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಆಸ್ಪತ್ರೆಯಲ್ಲಿ ಸ್ವಚ್ಚತೆಯನ್ನು ಕಾಪಾಡುವುದು ತಮ್ಮ ಜವಾಬ್ದಾರಿಯಾಗಿದ್ದು, ಸ್ವಚ್ಚತೆ ಮೇಲ್ವಿಚಾರಣೆ ಮಾಡಲು ತಮ್ಮ ಅಧೀನದಲ್ಲಿ 14 ಜನ ಶುಶ್ರೂಷ ಮೇಲ್ವಿಚಾರಕರನ್ನು ಮತ್ತು ಸ್ವಚ್ಚತೆ ಮಾಡಲು 370 ಜನ ಸ್ವಚ್ಚತಾ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದರೂ ಸಹ ವಾರ್ಡ್ಗಳು ಮತ್ತು ಆಸ್ಪತ್ರೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಇಲ್ಲದೇ ಇರುವುದು ಹಾಗೂ ತಾವುಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿರುವುದು ಮತ್ತು ಬೇಜವಾಬ್ದಾರಿಯಿಂದ ಇರುವುದು ಕಂಡು ಬಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ಮುಂದೆ ಪ್ರತಿನಿತ್ಯ ಶುಶ್ರೂಷ ಮೇಲ್ವಿಚಾರಕರು ಮತ್ತು ಸ್ವಚ್ಚತಾ ಕಾರ್ಯಕರ್ತರನ್ನು ಬಳಸಿಕೊಂಡು ಯಾವುದೇ ದೂರುಗಳು ಬರದ ಹಾಗೆಯೇ ವಾರ್ಡ್ಗಳು ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದು ಅವರು ಆದೇಶಿಸಿದ್ದಾರೆ.
ಸ್ವಚ್ಛತೆಗೆ ಸಂಬಂಧಿಸಿದ ದೂರುಗಳು ಪುನಃ ಕೇಳಿಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಮತ್ತು ಮೇಲಾಧಿಕಾರಿಗಳಿಗೂ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಆದೇಶ ಹೊರಡಿಸಿದ ನಂತರ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ಕೂಡ ಶುಶ್ರೂಷಕ ಅಧೀಕ್ಷಕರುಗಳು ಹಾಗೂ ಶುಶ್ರೂಷ ಮೇಲ್ವಿಚಾರಕರೊಂದಿಗೆ ವಿಮ್ಸ್ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವರದಿ. ವಿರೇಶ್, ಹಳೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030