ಚಿತ್ರದುರ್ಗ ಜಿಲ್ಲಾಧಿಕಾರಿ ಯವರ ಸಮಯ ಪ್ರಜ್ಞೆಗೆ
ಸಂಭವನೀಯ ಅನಾಹುತವೊಂದು ತಪ್ಪಿದಂತಾಗಿದೆ
ಚಿತ್ರದುರ್ಗ :
ಚಿತ್ರದುರ್ಗ: ಆಮ್ಲಜನಕ ಹೊತ್ತು ತರುತ್ತಿದ್ದ ಟ್ಯಾಂಕರ್ ಮಾರ್ಗಮಧ್ಯೆಯೇ ಕೆಟ್ಟುನಿಂತ ಪರಿಣಾಮ ಮಂಗಳವಾರ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಸುದ್ದಿ ತಿಳಿದ ತಕ್ಷಣ ಮಧ್ಯರಾತ್ರಿ ಸ್ಥಳಕ್ಕೆ ತೆರಳಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿಯವರು ಸ್ಥಳಕ್ಕೆ ಧಾವಿಸಿ ಬಂದು ಟ್ಯಾಂಕರ್ ಸರಿಪಡಿಸಿ ಚಿತ್ರದುರ್ಗಕ್ಕೆ ಆಮ್ಲಜನಕ ತರುತ್ತಿದ್ದಂತೆ ಆತಂಕದ ಕಾರ್ಮೋಡ ನಿಧಾನವಾಗಿ ಕರಗಿ ದುರ್ಗದ ಜನರಲ್ಲಿ ಸಮಾದಾನ ಮೂಡಿತು ಎನ್ನಲಾಗಿದೆ.
ಮಾನ್ಯ ಜಿಲ್ಲಾಧಿಕಾರಿಯವರ ಸಮಯ ಪ್ರಜ್ಞೆಗೆ ಸಂಭವನೀಯ ಅನಾಹುತವೊಂದು ತಪ್ಪಿದಂತಾಗಿದೆ. ಆಮ್ಲಜನಕ ಹೊಂದಿಸಲು, ಅದನ್ನು ಜೋಪಾನವಾಗಿ ತರಲು ಶ್ರಮಿಸಿದವರಿಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯ ವೈದ್ಯರುಗಳು ಸೇರಿದಂತೆ ಖಾಸಗಿ ಆಸ್ಪತ್ರೆಯ ವೈದ್ಯರುಗಳು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಬಳ್ಳಾರಿ ಜಿಲ್ಲೆಯ ತೋರಣಗಲ್ನಿಂದ ಆಮ್ಲಜನಕ ಪೂರೈಕೆ ಆಗುತ್ತದೆ. ಸುಮಾರು 9 ಸಾವಿರ ಲೀಟರ್ ಆಮ್ಲಜನಕ ಹೊತ್ತು ಬರುತ್ತಿದ್ದ ಟ್ಯಾಂಕರ್, ಚಿತ್ರದುರ್ಗ– ಹೊಸಪೇಟೆ ಮಾರ್ಗದ ದೊಣ್ಣೆಹಳ್ಳಿ ಬಳಿ ಕೆಟ್ಟು ನಿಂತಿದೆ. ಸಕಾಲಕ್ಕೆ ಚಿತ್ರದುರ್ಗ ತಲುಪುವುದು ಅನುಮಾನವಾಗಿದ್ದರಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಅವರು ಜಿಲ್ಲಾಧಿಕಾರಿಗೆ ಮಧ್ಯರಾತ್ರಿ 1.30ಕ್ಕೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಗೆ ಅಗತ್ಯವಿರುವ ಆಮ್ಲಜನಕ ಪೂರೈಕೆಗೆ ಪರ್ಯಾಯ ವ್ಯವಸ್ಥೆಯನ್ನು ರಾತ್ರಿಯೇ ಮಾಡಿಕೊಳ್ಳಲಾಯಿತು. ಜಂಬೂ ಸಿಲಿಂಡರ್ ಗಳನ್ನು ಹೊಂದಿಸಿ ಆಸ್ಪತ್ರೆಗಳಿಗೆ ನೀಡಲಾಯಿತು. ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಮೆಕ್ಯಾನಿಕ್ ಗಳೊಂದಿಗೆ ರಾತ್ರಿಯೇ ಸ್ಥಳಕ್ಕೆ ತೆರಳಿ ಟ್ಯಾಂಕರ್ ದುರಸ್ತಿ ಮಾಡಲಾಯಿತು’ಎಂಬುದಾಗಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಸುಮಾರು ರಾತ್ರಿ 2.30ಕ್ಕೆ ಅಲ್ಲಿಂದ ಹೊರಟ ಟ್ಯಾಂಕರ್ ಬೆಳಗಿನ ಜಾವ ಸುಮಾರು ನಸುಕಿನ 4 ಗಂಟೆಗೆ ಬಸವೇಶ್ವರ ಆಸ್ಪತ್ರೆ ತಲುಪಿದೆ. ನಾಲ್ಕು ಸಾವಿರ ಲೀಟರ್ ಆಮ್ಲಜನಕವನ್ನು ಪೂರೈಸಿ ಅನಂತರ ದಾವಣಗೆರೆಯತ್ತ ಸಾಗಿದೆ. ಇಡೀ ರಾತ್ರಿ ಜಿಲ್ಲೆಯ ಅಧಿಕಾರಿಗಳು ನಿದ್ದೆಗೆಟ್ಟು ಆಮ್ಲಜನಕಕ್ಕೆ ಪರದಾಡಿದ್ದಾರೆ ಏನ್ನಲಾಗಿದ್ದು ಈ ಬಗ್ಗೆ ಆಸ್ಪತ್ರೆಯ ವೈದ್ಯರು ಹಾಗೂ ದುರ್ಗದ ಜನರು ಈ ಅಧಿಕಾರಿಗಳಿಗೆ ತಮ್ಮ ಅಭಿಂನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ. ಶಿಲ್ಪಾ, ಬಿ. ಎಂ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030