ಅಯ್ಯಯ್ಯೋ…! ರಸ್ತೆಯೋ…! ಕೆಸರು ಗದ್ದೆಯೋ…!
ಸಾರಿಗೆ ಸಚಿವರ ಕ್ಷೇತ್ರದಲ್ಲಿ ಸಂಚಾರಕ್ಕೆ ಸಂಚಕಾರ..
ಚಳ್ಳಕೆರೆ : ತಾಲ್ಲೂಕಿನ ಮೊಳಕಾಲ್ಮೂರು ವಿಧಾನ ಸಭಾ ವ್ಯಾಪ್ತಿಯ ಗಡಿಗ್ರಾಮಗಳಲ್ಲಿ ಒಂದಾದ ಮೈಲನಹಳ್ಳಿಯಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಳ್ಳಕೆರೆ ಕಲ್ಯಾಣದುರ್ಗ ಮುಖ್ಯ ರಸ್ತೆ ಕೆಸರು ಗದ್ದೆಗಳಾಗಿ ಮಾರ್ಪಟ್ಟಿದೆ.
ಕಳೆದ ಐದಾರು ವರ್ಷಗಳ ಹಿಂದೆ ರಸ್ತೆ ನಿರ್ಮಾಣವಾಗಿದ್ದು, ಮೈಲನಹಳ್ಳಿಯ ಸಮೀಪ ಸರ್ಕಾರಿ ಪ್ರಾಯೋಜಿತ ಮರಳು ಗಣಿಗಾರಿಕೆ ನಡೆಯುತ್ತಿರುವುದರಿಂದ ರಸ್ತೆ ಸಾಂದ್ರತೆಗೂ ಮೀರಿದ ಮರಳು ತುಂಬಿದ ನೂರಾರು ಲಾರಿಗಳು ಪ್ರತಿನಿತ್ಯ ಸಂಚರಿಸುವ ಕಾರಣ ರಸ್ತೆ ಕಿತ್ತು ಹೋಗಿ ಕಂದಕಗಳು ನಿರ್ಮಾಣವಾಗಿತ್ತು. ಮರಳು ಲಾರಿಗಳ ಸುಮಗ ಸಂಚಾರಕ್ಕೆ ಅವಕಾಶ ಮಾಡುವ ನಿಟ್ಟಿನಲ್ಲಿ ಮರಳು ಗುತ್ತಿಗೆದಾರ ಚೆನ್ನಾಗಿದ್ದ ರಸ್ತೆಗೆ ಕೆರೆ ಮಣ್ಣು ಹಾಕಿಸಿ ಕೆಸರು ಗದ್ದೆ ಮಾಡಿದ್ರು ಅಂತ ಗ್ರಾಮಸ್ಥರು ದೂರಿದ್ದಾರೆ.
ಮಂಗಳವಾರ ಗೌರಸಮುದ್ರ ಮಾರಿ ಮಹೇಶ್ವರಿ ಜಾತ್ರೆ ನಡೆಯುತ್ತಿದ್ದು ನೂರಾರು ಎತ್ತಿದ ಬಂಡಿ, ಟ್ರಾಕ್ಟರ್ ಬೈಕ್ ಸವಾರರಿಗೆ ರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿದೆ.
ಸ್ಥಳೀಯ ನಿವಾಸಿಗಳು ಮಾತನಾಡಿ, ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಹಳ ಸಮಸ್ಯೆಯಾಗಿದೆ. ಪ್ರತಿ ನಿತ್ಯ ಶಾಲೆಗೆ ಹೋಗುವ ಮಕ್ಕಳು ಕೆಸರಿನಲ್ಲಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಮಳೆ ಬಂದರೂ ಇಡೀ ರಸ್ತೆ ಕೆಸರು ಗದ್ದೆಯಾಗುತ್ತದೆ. ರಾತ್ರಿ ವೇಳೆ ಬೀದಿದೀಪಗಳಿಲ್ಲ, ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ತಡಕಾಡಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಮುಖ್ಯ ರಸ್ತೆ ಮತ್ತು ಬೀದಿದೀಪಗಳನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಮುಖ್ಯ ರಸ್ತೆಗೆ ಕೆರೆ ಮಣ್ಣು ಹಾಕಿದ್ದು , ಅದನ್ನ ತಕ್ಷಣ ವಿಲೇವಾರಿ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು.
ನಾಗರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮೈಲನಹಳ್ಳಿ
ಕೆಸರಿನಂತಾದ ರಸ್ತೆಯಲ್ಲಿ ಬೈಕ್ ಸಂಚರಿಸುವುದೇ ದುಸ್ತರವಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹ ಮಾಡುತ್ತೇವೆಗ್ರಾಮಸ್ಥರು
ವರದಿ.ಚಕ್ರಿ ಬಸವರಾಜ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030