ಆನೆಗೊಂದಿ ಉತ್ಸವಕ್ಕೆ ಸಕಲ ಸಿದ್ಧತೆ: ಜಿ.ಜನಾರ್ಧನ ರೆಡ್ಡಿ
ಕೊಪ್ಪಳ : ಆನೆಗೊಂದಿ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಹೇಳಿದರು.
ಆನೆಗೊಂದಿ ಉತ್ಸವ-2024ರ ಹಿನ್ನೆಲೆಯಲ್ಲಿ ಮಾರ್ಚ್ 9ರಂದು ಆನೆಗೊಂದಿಯಲ್ಲಿ ವೇದಿಕೆ ಸೇರಿದಂತೆ ಇತರ ಸಿದ್ಧತೆಗಳನ್ನು ಪರಿಶೀಲಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ತೊಟ್ಟಿಲು, ಮೊದಲ ರಾಜಧಾನಿ ಆನೆಗೊಂದಿಯಲ್ಲಿ ಇದೇ ಮಾರ್ಚ್ 11 ಮತ್ತು 12ರಂದು ಐತಿಹಾಸಿಕ ಆನೆಗೊಂದಿ ಉತ್ಸವವು ನಡೆಯಲಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ಈ ಉತ್ಸವವು ನಡೆಯುವ ಮುಖ್ಯ ವೇದಿಕೆಗೆ ಆನೆಗೊಂದಿ ಸಂಸ್ಥಾನದ ರಾಜ ವಂಶಸ್ಥರಾದ ಶ್ರೀರಂಗದೇವರಾಯಲು ಅವರ ಹೆಸರಿಡಲಾಗಿದೆ. ಅದೇ ರೀತಿ ಎರಡನೇ ವೇದಿಕೆಗೆ ಶಬರಿ ಹೆಸರಿಡಲಾಗಿದೆ. ಉತ್ಸವದ ಉದ್ಘಾಟನೆಗೆ ಮುಖ್ಯ ಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಸಚಿವರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಆನೆಗೊಂದಿ ಉತ್ಸವವದ ಮೊದಲ ದಿನದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕರಾದ ಹಂಸಲೇಖ, ನಟ ದೃವ ಸರ್ಜಾ ಸೇರಿದಂತೆ ರಾಜ್ಯದ ಮತ್ತು ಸ್ಥಳೀಯ ಖ್ಯಾತ ಕಲಾವಿದರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡನೇ ದಿನ ನಟ ಶ್ರೀಮುರಳಿ, ಗಾಯಕ ಅರ್ಜುನ ಜನ್ಯಾ ಸೇರಿದಂತೆ ಇತರ ಕಲಾವಿದರು ಹಾಗೂ ಕಲಾ ತಂಡಗಳಿಂದ ಸಂಗೀತ, ನೃತ್ಯ, ಭರತನಾಟ್ಯ ಒಳಗೊಂಡಂತೆ ವಿಭಿನ್ನ ರೀತಿಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದಲ್ಲದೇ ಉತ್ಸವ ಅಂಗವಾಗಿ ಈಗಾಗಲೇ ಕ್ರೀಡಾಕೂಟ ನಡೆಯುತ್ತಿದ್ದು, ಹಗ್ಗ-ಜಗ್ಗಾಟದಂತಹ ಗ್ರಾಮೀಣ ಕ್ರೀಡೆಗಳು ಗಮನ ಸೆಳೆಯುತ್ತಿವೆ. ಎಲ್ಲಾ ಸಾರ್ವಜನಿಕರು ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಂಗಾವತಿ ತಹಶೀಲ್ದಾರರಾದ ಯು.ನಾಗರಾಜ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು…
ವರದಿ. ಮಂಜುನಾಥ್ ಉಪ್ಪಾರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030