ಕೂಡ್ಲಿಗಿ: ತಾಲೂಕಿನ ೭೪ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪಟ್ಟಣದ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಸೇರಿ ಸಾರ್ವಜನಿಕರು ಮಂಗಳವಾರ ಸಂಭ್ರಮಾಚರಿಸಿದರು.
ಬಿಜೆಪಿ ಹಿರಿಯ ಮುಖಂಡ ಕೆ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಕೂಡ್ಲಿಗಿ ತಾಲೂಕಿನ ೭೪ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳ್ಳಲು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಅಪಾರ ಜನಪರ ಕಾಳಜಿಯೇ ಕಾರಣವಾಗಿದೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರು ಎನ್.ವೈ.ಗೋಪಾಲಕೃಷ್ಣ ಅವರ ಪರವಾಗಿ ಪ್ರಚಾರದ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಗೋಪಾಲಕೃಷ್ಣ ಅವರನ್ನು ಗೆಲ್ಲಿಸಿ ಎಂದು ತಿಳಿಸಿದ್ದರು. ಆ ಮಾತು ಈಗ ಉಳಿಸಿಕೊಂಡಂತಾಗಿದೆ ಎಂದರು.
ಅಲ್ಲದೆ, ಕೂಡ್ಲಿಗಿ ತಾಲೂಕಿನ ಬರಗಾಲವನ್ನು ಮನಗಂಡ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಈ ಯೋಜನೆ ಜಾರಿಯಾಗುವವರೆಗೂ ಬಿಡದಂತೆ ಕೆಲಸ ಮಾಡಿದ್ದಾರೆ ಎಂದು ಶಾಸಕರ ಕಾರ್ಯವೈಖರಿಯನ್ನು ಕೊಂಡಾಡಿದರು.
ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ಧನಗೌಡ ಮಾತನಾಡಿ, ಕೂಡ್ಲಿಗಿ ತಾಲೂಕಿಗೆ ನೀರಾವರಿ ಸೌಲಭ್ಯ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ದಶಕಗಳ ಕಾಲ ಎಲ್ಲರೂ ಹೋರಾಟ ನಡೆಸಲಾಗಿತ್ತು. ಆ ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕರು ಈಗಿಲ್ಲ. ಇದೀಗ, ಕೂಡ್ಲಿಗಿ ತಾಲೂಕಲ್ಲಿ ನೀರಾವರಿ ಮೂಲವೇ ಇಲ್ಲದಿರುವುದನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ತಿಳಿಯುವುದರ ಜೊತೆಗೆ ತಾಲೂಕಿನ ರೈತರು ಸೇರಿ ಎಲ್ಲರ ಬವಣೆ, ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ತೊಂದರೆ ಮನಗಂಡು ಕಾಳಜಿಯನ್ನು ತೋರಿದ್ದಾರೆ. ಶಾಸಕರ ಕಾಳಜಿ ಇಲ್ಲದಿದ್ದರೆ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೇ ಜಾರಿಯಾಗುತ್ತಿರಲಿಲ್ಲ. ಕ್ಷೇತ್ರದ ಮೇಲೆ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಗಿರುವ ಕಾಳಜಿಗೆ ಧನ್ಯವಾದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೀರನಗೌಡ, ಬಂಗಾರು ಹನುಮಂತು, ಭೀಮೇಶ್, ಕಾಂಗ್ರೆಸ್ ಮುಖಂಡರಾದ ನಾಗಮಣಿ ಜಿಂಕಾಲ್, ಪಪಂ ಸದಸ್ಯರಾದ ಕೊತ್ಲಪ್ಪ, ಕಾವಲಿ ಶಿವಪ್ಪನಾಯಕ, ಕಾಲ್ಚೆಟ್ಟಿ ಈಶಪ್ಪ, ವೆಂಕಟೇಶ್, ಸಚಿನ್ ಕುಮಾರ್, ಶುಕುರ್, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಎಸ್.ಸುರೇಶ್, ರೈತ ಸಂಘದ ಅಧ್ಯಕ್ಷ ದೇವರಮನೆ ಮಹೇಶ್, ಕರವೇ ಮಂಜುನಾಥ, ಜೆಡಿಎಸ್ ಮುಖಂಡ ರಾಘವೇಂದ್ರ ನಾಯಕ, ವಾಲ್ಮೀಕಿ ಮಹಾಸಭಾ ಮಾಜಿ ಅಧ್ಯಕ್ಷ ಜಯರಾಂ ನಾಯಕ, ಪಪಂ ಮಾಜಿ ಸದಸ್ಯ ಎಸ್.ದುರುಗೇಶ್, ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಮಾಜಿ ಯೋಧ ಎಚ್.ರಮೇಶ್, ಡಿ.ಅಜ್ಜಯ್ಯ, ಗುರಿಕಾರ ರಾಘವೇಂದ್ರ, ಸಾಲುಮನಿ ರಾಘವೇಂದ್ರ, ವಕೀಲ ಡಿ.ಎಚ್.ದುರುಗೇಶ್, ಶಿಕ್ಷಕ ಕೊತ್ಲಪ್ಪ, ಗುನ್ನಳ್ಳಿ ನಾರಾಯಣ, ಪೆಟ್ರೋಲ್ ಬಂಕ್ ನಾಗರಾಜ, ರಾಘವೇಂದ್ರ ಹಾಗೂ ತಾಲೂಕಿನ ಸಾರ್ವಜನಿಕರು ಸಹ ಇದ್ದರು.
ವರದಿ, ಡಿ, ಎಂ, ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030