ಕೂಡ್ಲಿಗಿ: ಬಿ.ಶ್ರೀರಾಮುಲು, ಮೋದಿಯಿಂದ ಜನರಿಗೆ ಖಾಲಿ ಚಂಬು -ಮುಖ್ಯ ಮಂತ್ರಿ ಸಿದ್ದರಾಮಯ್ಯ-ವಿಜಯನಗರ ಜಿಲ್ಲೆಕೂಡ್ಲಿಗಿ: ಎ29ರಂದು ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಜರುಗಿದ, ಲೋಕಸಭಾ ಚುನಾವಣಾ ಪ್ರಚಾರ ಬಹಿರಂಗ ಸಮಾವೇಶದಲ್ಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ, ಹಾಗೂ ಮೋದಿ ಮತ್ತು ಶ್ರೀರಾಮುಲು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಮೋದಿ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಪರವಾದ ಕೆಲಸಗಳಾಗಿಲ್ಲ, 15 ಲಕ್ಷ ರೂಪಾಯಿ ಬಡವರ ಖಾತೆಗೆ ಬಂದಿಲ್ಲ, ಉದ್ಯೋಗ ಸೃಷ್ಟಿಯಾಗಲಿಲ್ಲ, ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಇಳಿಸ್ತಿವಿ ಎಂದರು ಇಳಿಸಲಿಲ್ಲ, ರಸ ಗೊಬ್ಬರ ಇಳಿಸ್ತಿವಿ ಎಂದು ಅಧಿಕಾರಕ್ಕೆ ಬಂದು ರಾಜ್ಯಕ್ಕೆ ಕೊಟ್ಟಿದ್ದು ಚೊಂಬು ಎಂದರು. ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರು, ಪರಿಹಾರ ಕೊಡಲು ಹಿಂದೇಟು ಹಾಕಿದರು. ನಾವು ಬರ ಪರಿಹಾರ ಕೇಳಿದ್ದು 18,172 ಕೋಟಿ ಆದರೆ ಕೋರ್ಟ್ ಛೀಮಾರಿ ಹಾಕಿದ ನಂತರ ಈಗ ಕೇವಲ 3454 ಕೋಟಿ ನೀಡಿ ಕೈತೊಳೆದು ಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಬಡವರಿಗೆ ಸೂರು ನೀಡಿದ್ದು, ಜನ, ಜಾನುವಾರುಗಳಿಗೆ ಮೇವಿನ ತೊಂದರೆ ಆಗಬಾರದು ಎಂದು ಮೇವು ನೀಡಿ, ಜನರಿಗೆ ಉದ್ಯೋಗ ನೀಡಿದ್ದೇವೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನುಡಿದಂತೆ 5 ಗ್ಯಾರಂಟಿಗಳನ್ನು ನೀಡಿ ರಾಜ್ಯದ ಜನತೆಯ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂದರು. ಬಿಜೆಪಿ ಲೋಕಸಭಾ ಅಭ್ಯರ್ಥಿ ಶ್ರೀರಾಮುಲು ಮಂತ್ರಿಯಾಗಿ ಸಂಪೂರ್ಣವಾಗಿ ವಿಫಲರಾಗಿದ್ದರು, ಭ್ರಷ್ಟಾಚಾರದಲ್ಲಿ ಮುಳುಗಿದವರು, ಬಳ್ಳಾರಿ ಸಂಸದರಾಗಿದ್ದಾಗ ಅವರ ಕೊಡುಗೆ ಶೂನ್ಯ, ಅವರು ಅಸಮರ್ಥರು ಅಂಥವರನ್ನು ಗೆಲ್ಲಿಸಬೇಕಾ ಎಂದು ಕಿಡಿಕಾರಿದರು. ಅದರಂತೆ ರಾಜ್ಯಕ್ಕೆ ಪ್ರಧಾನಿ ಮೋದಿ ಕೊಡುಗೆ ಕೂಡ ಶೂನ್ಯ, ತೆರಿಗೆ ಹಂಚಿಕೆಯಲ್ಲಿ ಅನ್ಯಾಯ, 15 ನೇ ಹಣಕಾಸು ಆಯೋಗದಲ್ಲಿ ಹಣ ನೀಡದೇ ಅನ್ಯಾಯ, ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣ ನೀಡುವೆ ಎಂದು ಬಜೆಟ್ ನಲ್ಲಿ ಹೇಳಿ ನೀಡದೇ ಅನ್ಯಾಯ ಮಾಡಿದ್ದಾರೆ.
ಹತ್ತು ವರ್ಷಗಳ ಕಾಲ ಸಾಮಾಜಿಕವಾಗಿ, ಆರ್ಥಿಕವಾಗಿ ದಿವಾಳಿ ಮಾಡಿ, ಸುಳ್ಳುಗಳೊಂದಿಗೆ ಆಡಳಿತ ನಡೆಸಿದ್ದಾರೆ. ಈಗ ಸೋಲಿನ ಭೀತಿ ಎದುರಾಗಿದೆ. ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿಲ್ಲ, ಅವರ ಸರ್ವೆ ಪ್ರಕಾರ ಕೇವಲ 200 ಕ್ಷೇತ್ರಗಳಲ್ಲಿ ಗೆಲ್ಲುವ ವರದಿ ಬಂದಿದೆ. ಕರ್ನಾಟಕದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಭಾವನಾತ್ಮಕ ಮಾತನಾಡಿ, ಸುಳ್ಳುಗಳನ್ನು ಹೇಳಿ ಗೆದ್ದರು. ಪುಲ್ವಾಮಾ ದಾಳಿಯ ವಿಷಯದಿಂದ ಗೆದ್ದರು.ಆದರೆ ಈ ಬಾರಿ ಆ ಸುಳ್ಳುಗಳ ಆಟ ನಡೆಯೋಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಯಾರೂ ಬಳ್ಳಾರಿ ಕ್ಷೇತ್ರದ ಬಗ್ಗೆ ದೆಹಲಿಯಲ್ಲಿ ಚಕಾರ ಎತ್ತಲಿಲ್ಲ, ಬಿಜೆಪಿ ಪಕ್ಷದ ಕೊಡುಗೆ ಬಿಜೆಪಿ ಸಂಸದರ ಕೊಡುಗೆ ಏನು ಇಲ್ಲ. ಶ್ರೀರಾಮುಲು ಮಂತ್ರಿಯಾದಗಲೂ ಬಳ್ಳಾರಿಗೆ,ರಾಜ್ಯಕ್ಕೆ ಏನು ಇಲ್ಲ, ಇಂಥಹ ಅಭ್ಯರ್ಥಿಯನ್ನ ಗೆಲ್ಲಿಸಬೇಕಾ ಎಂದು ನೆರೆದಿದ್ದ ಜನರನ್ನು ಕೇಳಿದರು. ಕೋವಿಡ್ ಸಂಧರ್ಭದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಪರಿಹಾರ ನೀಡಿ ಎಂದು ನಾವು ಕೇಳಿದರೆ ನೀಡಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಇತಿಹಾಸ ಇದೆ. ಬಡ ಜನರ ಕಷ್ಟ ಅರಿತು ಕೆಲಸ ಮಾಡಿದ್ದೇವೆ. 371 ಜೆ ನೀಡಿದ್ದು ಕಾಂಗ್ರೆಸ್ ಸರ್ಕಾರ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಈ ಭಾಗದ ಜನರ ಹಿತಾಸಕ್ತಿ ಅರಿತು ಮೀಸಲಾತಿ ನೀಡಿದ್ದು ಇತಿಹಾಸ, ಶಿಕ್ಷಣ, ಉದ್ಯೋಗ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮದಲ್ಲೂ ವಿಶೇಷ ಅನುದಾನ ನೀಡಿದ್ದೇವೆ. ಈ ಭಾಗದ ಜನರ ನೀರಾವರಿ ಯೋಜನೆಯಾದ 74 ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಕಾಮಗಾರಿ ಮುಗಿಯುವ ಹಂತದಲ್ಲಿ ಇದ್ದು,ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಸಚಿವರಾದ ರಾಮಲಿಂಗ ರೆಡ್ಡಿ, ಜಮೀರ್ ಅಹಮ್ಮದ್, ಅಭ್ಯರ್ಥಿ ಈ.ತುಕಾರಾಂ, ಶಾಸಕರಾದ ಎನ್.ವೈ.ಗೋಪಾಲ ಕೃಷ್ಣ, ಡಾ.ಎನ್.ಟಿ.ಶ್ರೀನಿವಾಸ್, ಎಚ್ ,ಆರ್, ಗವಿಯಪ್ಪ ಎಂ.ಪಿ. ಲತಾ ಮಲ್ಲಿಕಾರ್ಜುನ, ಭೀಮಾನಾಯ್ಕ್, ಪರಮೇಶ್ವರ ನಾಯ್ಕ್, ಗಣೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಬಿ.ವಿ.ಶಿವಯೋಗಿ, ಸಿರಾಜ್ ಶೇಖ್, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಎನ್.ಎಂ.ನಬಿ, ಪ ಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ ವಿವಿಧ ಜನಪ್ರತಿನಿಧಿಗಳು. ಕ್ಷೇತ್ರದ ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ ಮುಖಂಡರು , ಮಹಿಳೆಯರು ಯುವಕರು ಪಕ್ಷದ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು….
ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030