ಹಳ್ಳಿಯ ರೈತರ ಮನೆಯಲ್ಲಿ ‘ಕಾರ ಹುಣ್ಣಿಮೆ’ ಸಂಬ್ರಮ. ಏನಿದು ಕಾರ ಹುಣ್ಣಿಮೆ
ದೇಶಕ್ಕೆ ರೈತ ಬೆನ್ನೆಲುಬಾದರೆ, ರೈತರಿಗೆ ಮಾತ್ರ ಎತ್ತುಗಳೇ ಬೆನ್ನೆಲುಬು. ಎತ್ತುಗಳು ರೈತರ ಬೆನ್ನೆಲುಬಾಗಿ ಕೃಷಿ ಭೂಮಿಯಲ್ಲಿ ದುಡಿಯುತ್ತವೆ. ಯಂತ್ರಗಳು ಇರಲಿ. ಇರದಿರಲಿ ರೈತರ ಜಮೀನಿನಲ್ಲಿ ಅತಿ ಹೆಚ್ಚು ದುಡಿಯುವುದು ಎತ್ತುಗಳು. ಇತ್ತೀಚೆಗೆ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಿದೆ. ಆದರೂ ಕೂಡಾ ಗ್ರಾಮೀಣ ಭಾಗದಲ್ಲಿ ಇಂದಿಗೂ ಕೃಷಿಗೆ ಎತ್ತುಗಳೇ ಆಧಾರ. ಹೀಗಾಗಿ ರೈತರು ಎತ್ತುಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಪ್ರತಿ ವರ್ಷ ರೈತರು ಉಳುಮೆಗೆ ಎತ್ತುಗಳನ್ನು ಬಳಸುತ್ತಾರೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು, ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ತಮ್ಮ ಕೃತಜ್ಞತೆಯನ್ನು ಸಮರ್ಪಿಸುತ್ತಾರೆ.ಹುಣ್ಣಿಮೆಯ ದಿನದಂದು ಎತ್ತುಗಳ ಮೈತೊಳೆದು ಬಣ್ಣ ಹಚ್ಚುತ್ತಾರೆ. ಅವುಗಳ ಕೊರಳಲ್ಲಿ ಗೆಜ್ಜೆ ಸರ,ಕೋಡಣಸು, ಇನ್ನಿತರ ಅಲಂಕಾರಿಕ ವಸ್ತುಗಳನ್ನು ಎತ್ತಿಗೆ ಹಾಕಿ ಸಿಂಗರಿಸುತ್ತಾರೆ. ಎತ್ತುಗಳಿಗೆ ಕಂಬಳಿ ಹಾಸಿ ಅದರ ಮೇಲೆ ನಿಲ್ಲಿಸಿ ಪೂಜೆ ಮಾಡಿ, ಅವುಗಳ ಸೇವೆಯನ್ನು ಸ್ಮರಿಸುತ್ತಾ ಎತ್ತುಗಳಗಳಿಗೆ ನಮಸ್ಕರಿಸಿ ಎತ್ತಿನ ಪಾದಗಳಿಗೆ ಮುತೈದೆಯರ ಮೂಗುತಿಯನ್ನು ಸ್ವರ್ಶಿಸುತ್ತಾರೆ. ಹೋಳಿಗೆ ಸೇರಿದಂತೆ ವಿವಿಧ ರೀತಿಯ ಸಿಹಿ ಅಡುಗೆಯನ್ನು ಮನೆಯಲ್ಲಿ ಮಾಡುತ್ತಾರೆ. ತಮ್ಮ ಮನೆಯಲ್ಲಿರುವ ಎತ್ತುಗಳಿಗೆ ಹೋಳಿಗೆ ಮತ್ತು ಹೊನ್ನುಗ್ಗಿ (ಜೋಳದ ನುಚ್ಚಿಂದು) ಸೇರಿದಂತೆ ಸಿಹಿ ತಿನಿಸುಗಳನ್ನು ತಿನಿಸುತ್ತಾರೆ. ನಂತರ ದೇವಸ್ಥಾನಗಳಿಗೆ ಎತ್ತುಗಳನ್ನು ಓಯ್ದು, ಕರಿ ಹರಿದು, ಎತ್ತುಗಳಿಗೆ ಏನು ತೊಂದರೆಯಾಗದಂತೆ ದೇವರಲ್ಲಿ ಸ್ಮರಿಸಿ ಬರುತ್ತಾರೆ. ಕಾರ ಹುಣ್ಣಿಮೆಯ ದಿನ ಎತ್ತುಗಳನ್ನು ಪೂಜನೀಯ ಭಾವದಿಂದ ರೈತರು ಕಾಣುತ್ತಾರೆ. ಅನೇಕ ಕಡೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಅನೇಕ ಕಡೆ ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಎತ್ತಿನ ಬಂಡಿಯನ್ನು ಓಡಿಸಲಾಗುತ್ತದೆ. ಕೊಬ್ಬರಿ ಹೋರಿಯನ್ನು ಓಡಿಸುವ ಸಂಪ್ರದಾಯವಿದೆ. ರೈತರು ಎತ್ತುಗಳಿಗೆ ಪೂಜೆ ಮಾಡಿದ್ರೆ, ಕೆಲವರು ತಮ್ಮ ಜೀವನಕ್ಕೆ ಆಧಾರವಾಗಿರುವ ಎಮ್ಮೆ, ಹಸುಗಳನ್ನು ಪೂಜಿಸುತ್ತಾರೆ. ರೈತರು ಕೂಡಾ ಎತ್ತುಗಳ ಜೊತೆ ತಮ್ಮ ಮನೆಯಲ್ಲಿರುವ ಬೇರೆ ರಾಸುಗಳಿಗೆ ಕೂಡಾ ಪೂಜೆ ಮಾಡುತ್ತಾರೆ. ಸಿಹಿ ತಿನಿಸುಗಳನ್ನು ತಿನ್ನಿಸುತ್ತಾರೆ. ಮೂಕ ಪ್ರಾಣಿಗಳಲ್ಲಿ ದೇವರನ್ನು ಕಾಣುವ ವಿಶಿಷ್ಟ ಪರಂಪರೆಯ ದೇಶ ನಮ್ಮದು.ಆದರೆ ಆಧುನಿಕತೆಯ ಗೀಳಿಂದ ಇತ್ತೀಚಿಗೆ ಇಂತಹ ಆಚರಣೆಗಳು ಕಣ್ಮರೆಯಾಗುತ್ತಿವೆ ಎನ್ನುವುದೊಂದೆ ನಮಗೆ ಬೇಸರದ ಸಂಗತಿ. ಕಳೆದ ಅರ್ದ ದಶಕಗಳಿಂದಲೂ ಎತ್ತಿನ ಉಳುಮೆ ಆತಂಕ ಮಟ್ಟದಲ್ಲಿ ಕುಸಿದಿದೆ.ಇದರಿಂದ ಎತ್ತಿನ ಸಗಣಿ ಗೊಬ್ಬರದ ಬಳಕೆ ಕಡಿಮೆಯಾಗಿ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದ್ದು.ಇದರಿಂದ ಅಪಾರ ಪ್ರಮಾಣದ ರಾಸಾಯನಿಕಗಳು ಮಣ್ಣಿಗೆ ಸೇರಿ ಆ ಮಣ್ಣಿನಲ್ಲಿರುವ ರಾಸಾಯನಿಕಗಳು ಮಳೆನೀರಿನೊಂದಿಗೆ ಹಾಗೂ ಬೆಳೆಗಳೊಂದಿಗೆ ಮನುಷ್ಯನ ದೇಹ ಸೇರಿ ತೊಂದರೆ ಆಗೊಂದತು ಮುಂದೆ ನಮಗೆ ಕಟ್ಟಿಟ್ಟ ಬುತ್ತಿ.
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030