ಪುನೀತ್ ಎಂಬ ಚುಂಬಕ ವ್ಯಕ್ತಿತ್ವ’!

Listen to this article

‘ಪುನೀತ್ ಎಂಬ ಚುಂಬಕ ವ್ಯಕ್ತಿತ್ವ’!

ಆಗ 11.30..

‘ನಟನ’ದಲ್ಲಿ ಗೆಳೆಯ ಶಕೀಲರ ‘ಆಂಗಿಕಂ’ ಶಿಬಿರಕ್ಕೆ ಚಾಲನೆ ಕೊಡುತ್ತಾ “ನಟರು ಸಂದರ್ಭಗಳನ್ನು ನಿಭಾಯಿಸುವ” ಕುರಿತು ಆರಂಭದ ಮಾತುಗಳನ್ನಾಡಿ, ಆಗಷ್ಟೇ ಹೊರಬಂದಿದ್ದೆ! ಪತ್ನಿ ಸರೋಜ ಈ ಪ್ಲಂಬರ್ ಮಾಡಿದ ಎಡವಟ್ಟಿಗೆ ತೀರಾ ಉದ್ವೇಗಕ್ಕೆ ಒಳಗಾಗಿದ್ದಳು. ಸಮಾಧಾನಿಸಲು ಯತ್ನಿಸುತ್ತಿದ್ದೆ.

ಬೆಂಗಳೂರಿನಿಂದ ಮಗಳು “ಅಪ್ಪಾ, ಚಿತ್ರೀಕರಣ ನಿಲ್ಲಿಸಿದ್ದೇವೆ. ಕೆಟ್ಟ ಸುದ್ದಿ ಇದೆ ಸತ್ಯ ಹೇಳು” ಅಂದಳು. ಪೋನಾಯಿಸಿದೆ, ಮಾತನಾಡಿದವರೆಲ್ಲಾ ಖಚಿತಪಡಿಸಿದರು! ಸ್ತಂಭಿತನಾದೆ. ಮುಖ ನಿರ್ಭಾವದಿಂದ ಪೇಲವವಾಗಿದೆ. ಅರಿವಿಲ್ಲದೆ ಕಣ್ಣಿನಿಂದ ನೀರು ತನಗೆ ತಾನೇ ಹರಿಯುತ್ತಲೇ ಇದೆ. ಪತ್ನಿ ಸರೋಜಳಿಗೆ ವಿಷಯ ಹೇಳಿದೆ, ದಂಗಾದಳು. “ಅಯ್ಯೋ ಇದು ತೀರಾ ಅನ್ಯಾಯ” ಅಂದಳು. ಅವಳ ಟೆನ್ಶನ್ ಬದಲಿಸಿತು. ಈ ಆಘಾತದ ಮುಂದೆ ನಮ್ಮದು ಸಮಸ್ಯೆಯೇ ಅಲ್ಲ ಅನಿಸಿತು!

‘ಎರಡು ರೇಖೆ’ಗಳ ಕತೆ!

ಪೋನ್ ಕಾಲ್‍ಗಳು ಸುರುವಾದವು… ಸಾವಿನ ಸುದ್ದಿ ಪ್ರಕಟಿಸುವ ಹಾಗಿಲ್ಲ. ಒಳಗುದಿಯ ತಾಪ ಹೆಚ್ಚುತ್ತಾ ಹೋಯಿತು! ಕನ್ನಡ ನಾಡೇ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡಂತೆ ಆದರೇ ಭಾವವನ್ನು ಹೊರಗೆ ಚೆಲ್ಲದಂತೇ ಚಡಪಡಿಕೆಯಲ್ಲಿ ಧುಮುಗುಡುತ್ತಿತ್ತು! ನನಗೆ ಇನ್ನೂ ಆಸೆ “ಇಲ್ಲ, ಆತ ಸದೃಢ ಆರೋಗ್ಯದ ಮನುಷ್ಯ ಎದ್ದು ಬರುತ್ತಾನೆ” ಅಂತಲೇ ಮನ ತುಡಿಯುತ್ತಿತ್ತು! ಓಡಿ ಹೋಗಿ ಟಿ.ವಿ. ಹಾಕಿದೆ. ಅವರಿನ್ನೂ ಪ್ರಕಟಿಸಿರಲಿಲ್ಲ. ರವಿ ಸರ್, ದರ್ಶನ್, ಯಶ್ ಅನೇಕರು ಆಸ್ಪತ್ರೆಗೆ ಧಾಪುಗಾಲಿಕ್ಕುತ್ತಿರುವುದನ್ನು ಕಂಡೆ. ಶ್ರುತಿ ಮೇಡಂ ಕಾರಿನಲ್ಲಿ ಬಿಕ್ಕಳಿಸಿ ಅಳುವುದನ್ನು ಕಂಡೊಡನೇ ಪೂರ್ಣ ಖಚಿತವಾಗಿಬಿಟ್ಟಿತ್ತು!! ಸಾವರಿಸಿಕೊಳ್ಳಲೂ ಆಗುತ್ತಿಲ್ಲ. ಮಾಧ್ಯಮಮಿತ್ರರು ಕರೆ ಮಾಡಹತ್ತಿದರು. ತಿಳಿದಷ್ಟು ಮಾತನಾಡಿದೆ. ಬೆಂಗಳೂರಿನ ಗೆಳೆಯನ ಪತ್ನಿ ಅನಿತಾ ಸತೀಶ್ ಕರೆ ಮಾಡಿ “ಇಲ್ಲ ಅಂತಾ ಹೇಳಿ ರಮೇಶ್.. ಏನೂ ಆಗಲ್ಲಾ ಅಲ್ವಾ..” ಅಂತಾ ಮಗುವಿನಂತೇ ಬೋರೆಂದು ಅಳಹತ್ತಿದರು. ಎಪ್ಪತ್ತು ದಾಟಿರುವ ನೆರೆಮನೆಯಾತ ವಕೀಲ ಸಿದ್ದೇಗೌಡರು ಸಮೀಪ ಬಂದು ಮೆಲುವಾಗಿ ಮಾತು ಶುರು ಮಾಡಿ, ಅಳು ಶುರು ಮಾಡಿದ್ದರು.

ಕೆಲವೇ ಕ್ಷಣಗಳಲ್ಲಿ ಕಂಡು ಕೇಳರಿಯದಷ್ಟು ಇಡೀ ಕರ್ನಾಟಕ ಸೂತಕದ ಮನೆಯಾಗಿಬಿಟ್ಟಿತು!

ಅಲ್ಲಿ ರಾಘಣ್ಣ ತುಂಬ ಪ್ರಬುದ್ಧವಾಗಿ ಪರಿಸ್ಥಿತಿ ನಿಭಾಯಿಸಲೆತ್ನಿಸುತ್ತಿದ್ದರು! ಕರುನಾಡು ಸ್ತಬ್ಧವಾಗಿದ್ದಂತೆ ಕಂಡೆ. ಅದ್ಯಾವುದೋ ಕ್ಷಣದಲ್ಲಿ ಇದ್ದಕ್ಕಿದ್ದಂತೇ ಸಹನೆಯ ಕಟ್ಟೆ ಒಡೆದದ್ದು ಕಂಡೆ.

ಅವರ ಮನೆ ಮುಂದೆ, ಕಂಠೀರವ ಸ್ಟೇಡಿಯಂನಲ್ಲಿ, ರಸ್ತೆಗಳಲ್ಲಿ ಭೋರಿಡುತ್ತಿದ್ದುದು ಕಂಡೆ. ಪೋಲಿಸರೆಷ್ಟೇ ಹರಸಾಹಸ ಮಾಡಿದರೂ ಅಭಿಮಾನಿಗಳ ಭಾವೋದ್ರೇಕದ ಕಟ್ಟೆಯೊಡೆದ ಸುನಾಮಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ! ಮನಸ್ಸು ಮತ್ತೆ ಮತ್ತೆ ಮರುಗುತ್ತಲೇ ಹೋಯಿತು.

ಮಾ|| ಲೋಹಿತ್ ಅನ್ನುವ ಈ ಪುಟ್ಟ ಹುಡುಗ ನನ್ನ ತಾರುಣ್ಯದಲ್ಲಿ ಜೊತೆಯಾದವ. ‘ವಸಂತ ಗೀತ’ದ ಕ್ಲೈಮಾಕ್ಸ್‍ನಲ್ಲಿ ಅಪಘಾತದ ಲಾರಿಯಡಿಯಲ್ಲಿ ಅವಿತಿಟ್ಟುಕೊಂಡು ‘ಅಪ್ಪಾ’ ಅಂತ ನಗುತ್ತಾ ಎದ್ದು ಬರುತ್ತಾನೆ! ನನಗೆ ಆ ಚಿತ್ರಿಕೆ ನನ್ನ ಮನಸ್ಸಿನ ಭಿತ್ತಿಯಲ್ಲಿ ದಾಖಲಾಗಿಬಿಟ್ಟಿದೆ. ‘ಎರಡು ನಕ್ಷತ್ರ’ದ ಎರಡೂ ಪಾತ್ರಗಳು, ‘ಭಾಗ್ಯವಂತ’ದ ಅಸಹಾಯಕ ಬಾಲಕನ ಪಾತ್ರಗಳು ನನಗೆ ಅತಿಹೆಚ್ಚು ಪರಿಣಾಮ ಮಾಡಿದ್ದವು. ಚಲಿಸುವ ಮೋಡಗಳ ಅವನ ಅಭಿನಯಕ್ಕೆ ಮಾರುಹೋಗದವರಿಲ್ಲ. ‘ಕಾಣದಂತೆ ಮಾಯವಾದನು’ ಅನ್ನುವ ತತ್ವಪದವನ್ನು ಸಿನಿಮಾ ಜನಪ್ರಿಯತೆಗೆ ಒಗ್ಗಿಸಿ ಈತನ ಮುಗ್ಧ ಟಪ್ಪಾಂಗೋಚಿ ನೃತ್ಯವಾಗಿಸಿದ್ದು ಈಗ ಇತಿಹಾಸ! ಅವರ ಅಪ್ಪ ‘ರಾಜ್’ರನ್ನು ಸೇರಿಸಿ ಸಿನಿಮಾ ಎಂದರೆ ‘ಸುಂದರ’ವಾಗಿರಬೇಕೆನ್ನುವ ಕಾಲದಲ್ಲಿದ್ದಾಗ ಥಿಯರಿಯನ್ನು ಒಡೆದು ‘ಸುಂದರವಾಗಿರಬೇಕಾದ್ದು ಪ್ರತಿಭೆ- ಸಹಜತೆ ಅಂತಾ ತನ್ನ ದ್ರಾವಿಡ ಸೌಂದರ್ಯವನ್ನು ಜಗತ್ತಿಗೆ ನಿರೂಪಿಸಿದ ಹುಡುಗ ಪುನೀತ್!

‘ಬೆಟ್ಟದ ಹೂ’ನಲ್ಲಂತೂ ಅವನ ಅಭಿನಯ ಕಂಡು ಗಳಗಳನೆ ಅತ್ತವರೆಷ್ಟು, ಆ ಪ್ರಮಾಣ ಸಾತ್ವಿಕರೂಪಿ ಅಭಿನಯವನ್ನು ಪ್ರಕಟಿಸಿಬಿಟ್ಟ ಬಾಲಕ!

‘ಭಕ್ತ ಪ್ರಹ್ಲಾದ’ದಲ್ಲಿ ಮೇರುಪರ್ವತ ಅಪ್ಪನೆದುರಿಗೆ ನಿಂತು ಶ್ರುತಿ ಬದ್ಧವಾಗಿ ತನ್ನದೇ ದನಿಯಲ್ಲಿ ಹಾಡಿ ಸಂಗೀತವೂ ಗೊತ್ತೆಂದು ನಿರೂಪಿಸಿದ. ಅವನ ಪಾತ್ರಗಳು, ಚಲನಚಿತ್ರಗಳು ನಮ್ಮನ್ನು ನಾವೇ ಗುರುತಿಸಿಕೊಂಡು ಇವನು ಪರಿಚಿತನೇ, ನಮ್ಮನೆ ಪಕ್ಕದ ಮನೆ ಹುಡುಗ ಅಂತಲೇ ನನ್ನಂತೆಯೇ ನನ್ನಿಡೀ ವಯೋಮಾನದ ತಲೆಮಾರು ಭಾವಿಸಿಕೊಂಡೇ ಬೆಳೆಯುತ್ತಿತ್ತು!

ಕಾಲೇಜಿನ ಹೊತ್ತಿಗೆ ನನ್ನ ಆಯ್ಕೆಗಳು ಬದಲಾಗಿ, ರಂಗಭೂಮಿ- ಸಾಹಿತ್ಯ- ಹೋರಾಟ ಅಂತೆಲ್ಲಾ ಚಲಿಸಿ ಅವನ ತಾರುಣ್ಯವನ್ನು ಅಷ್ಟೇನೂ ಗಂಭೀರವಾಗಿ ಗಮನಿಸಿರಲಿಲ್ಲ ನಾನು…

ನನಗೆ ‘ಜನುಮದ ಜೋಡಿ’ಗೆ ಆಹ್ವಾನ ಬಂದಾಗ ಮೊದಲ ದಿನ ಮುಹೂರ್ತದ ಶಾಟ್‍ನಲ್ಲಿ ನನ್ನನ್ನೂ ಕರೆದು ತಾರುಣ್ಯ ದಾಟಿದ ಯೌವ್ವನಕ್ಕೆ ಅಡಿಯಿಡುತ್ತಿದ್ದ ಪುನೀತ್ ಹಾರ ಹಾಕಿ ಸ್ವಾಗತಿಸಿದಾಗ, ಮುಜುಗರದ ನಡುವೆಯೂ ಸಂತಸಪಟ್ಟಿದ್ದೆ! ..ಮುಂದೇ ಅನೇಕ ಸಲ ‘ವಜ್ರೇಶ್ವರಿ ಕಂಬೈನ್ಸ್’ ಕಛೇರಿಯಲ್ಲಿ ಕುಳಿತ ಆತನನ್ನು ಅದೇ ಬಾಲ್ಯದ ಪ್ರೀತಿಯಿಂದ “ಮಿತ್ರ ನೀವ್ ಹೀರೋ ಯಾವಾಗಪ್ಪ?” ಅಂತ ಕೇಳಿದ್ದೆ: ಪಿಸುಗುಡುತ್ತಾ ಹೇಳಿದ್ದ ಆತ “ನನಗೆ ಬೇಕಾದ ಕಂಟೆಂಟ್ ಆಧಾರಿತ ಸಿನಿಮಾ, ಒಳ್ಳೆ ಡೈರೆಕ್ಟ್ರು ಸಿಕ್ಕಿಲ್ಲ.. ಕಾಯ್ತೀನಿ” ಅಂತಲೇ ಹೇಳುತ್ತಿದ್ದರು. ಅದೇ ನಿಜವಾಯಿತು. ಆ ದಿನ ಬಂತು! ಮೊದಲ ದಿನ ಅವನ ನಾಯಕ ನಟನ ಫೈಟಿಂಗ್ ದೃಶ್ಯಗಳನ್ನು ಕಂಡು ನನ್ನಂತೆಯೇ ಕನ್ನಡ ಚಿತ್ರರಸಿಕರು ನಿಬ್ಬೆರಗಾದರು!
ಶಕ್ತಿಯ ಪ್ರವಾಹವೇ ಅಲ್ಲಿತ್ತು!

ಇದಕ್ಕೇ ನಿಗಧಿಯಾಗಿಬಿಡ್ತಾನಾ ಅಂದುಕೊಳ್ಳುವಷ್ಟರಲ್ಲಿ ಅಭಿ – ಅರಸು- ಮಿಲನ – ಪೃಥ್ವಿ- ಮೈತ್ರಿ ಎಲ್ಲವೂ ಸುಂದರ-ಸಹಜ- ಸರಳ ಕಥಾವಸ್ತುಗಳನ್ನು ಆಯ್ದುಕೊಂಡ. ನಿಜ ಅರ್ಥದಲ್ಲಿ ‘ರಾಜಕುಮಾರ’ನಾಗಿಬಿಟ್ಟ. ಕಥೆಯ ಆಯ್ಕೆಯಲ್ಲಿ ಎಲ್ಲೂ ಸೋಲಲಿಲ್ಲ! ಸ್ಟಾರ್ ಆಗುತ್ತಲೇ ತನ್ನ ಚಹರೆಯನ್ನು ಬದಲಾಯಿಸಿಕೊಂಡದ್ದನ್ನು ಜವಾಬ್ದಾರಿಯುತ ನಡುವಳಿಕೆಗಳನ್ನು ಗಮನಿಸುತ್ತಲೇ ಹೋದೆ. ಹರವಾದ ಎದೆ, ತುಂಬು ತೋಳುಗಳು, ಆತ್ಮವಿಶ್ವಾಸದ ಸಧೃಢ ಮೈಕಟ್ಟು, ಹದವರಿತ ಅಭಿನಯ ಜೊತೆಗೆ ದೊಡ್ಮನೆಯ ದ್ಯೋತಕ ‘ವಿನಯ’ದ ಹಾರ. ಸೂಪರ್‍ಸ್ಟಾರ್ ಆಗಲು ಮತ್ತೇನು ಬೇಕು! ಸದಾ ಎಚ್ಚರದ ನಡೆ ಆತನದು ನನಗದು ಹೆಮ್ಮೆ ಅನಿಸಿತ್ತು!

ಸಿನಿಮಾ ಸೆಟ್‍ಗಳಲ್ಲಿ, ಮಜಾಟಾಕೀಸ್‍ನಲ್ಲಿ, ಮುಹೂರ್ತಗಳಲ್ಲಿ ಎಲ್ಲೇ ಸಿಕ್ಕರೂ ಕಂಡೊಡನೇ ಫಟ್ಟೆಂದು ಎದ್ದು ನಿಂತು ಚೆಂದವಾಗಿ ಕೈ ಮುಗಿದು, ತುಂಬು ನಗೆಯಲ್ಲಿ ಹಿತವಾಗಿ ಮಾತನಾಡುತ್ತಿದ್ದ. ನನಗೀಗ ಆತ ‘ಅಪ್ಪು ಸರ್’ ಆಗಿದ್ದರು. ಅವರ ಚಿತ್ರದ ಹಾಡುಗಳು ಈ ತಲೆಮಾರಿನವರಿಗೆ ಮಾತ್ರವಲ್ಲದೇ ಎಲ್ಲ ವಯೋಮಾನಕ್ಕೂ ಇಷ್ಟವಾಗುವ ಮಾಧುರ್ಯ ತುಂಬಿದ ಹಾಡುಗಳಾಗಿದ್ದವು!

ಇವತ್ತಿನ ಹುಡುಗ- ಹುಡುಗಿಯರಿಗೆ ಇಷ್ಟವಾಗುವ ಲಯ ಆಧಾರಿತ, ಡಿಂಕಿ-ಚಿಕಿ ಸಾಂಗುಗಳೂ ನನಗೂ ಇಷ್ಟವಾಗುತ್ತಿತ್ತು. ಯಾನ ನಿಲ್ಲಲಿಲ್ಲ.

ಪಿ.ಆರ್.ಕೆ. ಸ್ಟುಡಿಯೋ ಮೂಲಕ ಹೊಸ ಹುಡುಗರಿಗೆ ಬೆನ್ನು ತಟ್ಟಿದರು. ‘ಕವಲುದಾರಿ’ಯಂತಹ ಶ್ರೇಷ್ಟ ಚಿತ್ರ ಬಂತು! ಆಡಿಯೋ ತೆರೆದರು. “ಮೈಸೂರು ರಾಜ್ಯದ ದೊರೆ” ಅನ್ನುವ ರಂಗಗೀತೆ ಅಣ್ಣಾವ್ರ ಅನಿಮೇಷನ್ ಹಾಡು ಮನೆ ಮಾತಾಯಿತು.

ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದರಂತೇ.. ನನಗದರ ಅರಿವು ಹೆಚ್ಚಿರಲಿಲ್ಲ!

ಅಣ್ಣಾವ್ರ ಹೆಸರಲ್ಲಿ ಹೋಟೆಲ್ ಮಾಡಿದ್ದು ನನಗೆ ವಿಶೇಷ ಅನಿಸಲಿಲ್ಲ! ಆದರೇ ಹಳ್ಳಿಗಾಡಿನ ಸಹಸ್ರಾರು ವಿದ್ಯಾರ್ಥಿಗಳಿಗೆ I.A.S I.P.S, K.A.S, K.P.S.C ಸ್ಪರ್ಧಾತಕ ಪರೀಕ್ಷೆಗಳಿಗೆ ಸಹಾಯವಾಗುವಂತೆ ಉಚಿತ ತರಬೇತಿ ಕೇಂದ್ರವನ್ನು ಸ್ಥಾಪಿಸಿ ‘ರಾಜ್’ರ ಹೆಸರಲ್ಲಿ ಅನೇಕರಿಗೆ ಬದುಕು ಕಟ್ಟಿಕೊಡಲು ನೆರವಾದರು. ಇದು ಶ್ರೇಷ್ಠ, ಸಾರ್ಥಕತೆಯ ಕುರುಹೂ ಅನಿಸಿತು.

ಹೊಸ ತಂಡಗಳಿಗೆ ಹಾಡಿ ಪ್ರೋತ್ಸಾಹಿಸಿ ಅವರ ಜನಪ್ರಿಯತೆಯ ಭಾಗ ಕೊಟ್ಟರು.

ಈಚಿನ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆ ವಿಸ್ತರಣೆಯಲ್ಲಿ ಪುನೀತ್‍ರವರ ಪಾಲು ಕೂಡ ಬಹಳ ಹಿರಿದಾದದ್ದು.. ಉದ್ಯಮದ ಚೇತರಿಕೆಗೆ ಅದನ್ನು ನಂಬಿಕೊಂಡೇ ಬದುಕುವ ಅನೇಕ ತಂತ್ರಜ್ಞರು, ಕಲಾವಿದರ ಕುಟುಂಬಗಳಿಗೆ ‘ತಾರೆ’ಯೊಬ್ಬರ ದಿಢೀರ್ ಅಸ್ತಂಗತ, ಬರೀ ಭಾವುಕ ಪ್ರಶ್ನೆ ಮಾತ್ರ ಆಗಿರದೇ ವಾಸ್ತವದ ಬದುಕಿನ ಸಂಕಟವೂ ಆಗಿರುತ್ತದೆ. ಈ ದನಿಯ ತರಂಗಗಳ ಕಂಪನ ನಿಶ್ಶಕ್ತಿಯನ್ನುಂಟು ಮಾಡುತ್ತದೆ ಅನ್ನೋದು ನನ್ನ ಅಳಲು ಕೂಡ.

ಚಿತ್ರೀಕರಣದ ಸಂದರ್ಭಗಳಲ್ಲಿ ಹಾಸ್ಯನಟರನ್ನು – ಪೋಷಕನಟರುಗಳನ್ನು ಒಟ್ಟ್ಹಾಕಿಕೊಂಡು ಸಣ್ಣ ಸಣ್ಣ ಜೋಕ್‍ಗಳಿಗೂ ಮನತುಂಬಿ; ಮೈ ದುಂಬಿ ನಗುತ್ತಿದ್ದರು.

ಅವರ ಆಲೋಚನೆಯ ವಿಸ್ತಾರಗಳು ಹರವಾಗಿತ್ತು. ಜಾಗತಿಕ ಚಿತ್ರಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವಂಥಾ ಆಧುನಿಕೋತ್ತರ ಚಿತ್ರಗಳ ನಿರ್ಮಾಣದ ಬಗ್ಗೆ ಯೋಚಿಸುತ್ತಿದ್ದ ಬುದ್ಧಿವಂತರು.

ಗೆಳೆಯ ಕಾರ್ತಿಕ್ ಸರಗೂರು ಬರೆದಿದ್ದ ‘ಭತ್ತದ ಕಾಳುಗಳು’ ಅದ್ಭುತ ಕತೆಯನ್ನಿಟ್ಟುಕೊಂಡು ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೆವು. ಆ ಹೊತ್ತಿಗೆ ಎಲ್ಲಾ ತಾರೆಯರಿಗೂ ಆಗುವಂತೇ ಅವರ ಸುತ್ತಲೂ ‘ವಲಯ’ ಸೃಷ್ಟಿಯಾಗಿತ್ತು! ಭೇದಿಸಲು ಸಾಧ್ಯವಾಗಲಿಲ್ಲ.
ಮೊನ್ನೆ ಜಾಹಿರಾತೊಂದರಲ್ಲಿ ಅವರನ್ನು ಪಂಚೆಯಲ್ಲಿ ಕಂಡಾಗ ಖುಷಿಯಾಗಿ, ಅಯ್ಯೋ ಮತ್ತೊಂದು ‘ಬಂಗಾರದ ಮನುಷ್ಯ’ವಾಗಬಹುದಾದ ನಮ್ಮ ಕಾರ್ತಿಕ್ ಸರಗೂರಿನ ಕತೆ ಮಲಗೇಬಿದ್ದಿತ್ತಲ್ಲ ಅಂತಾ ಕೊರಗಿದೆ.

ಪುನೀತ್ ಅವರನ್ನೊಮ್ಮೆ ಭೇಟಿ ಮಾಡಿ “ಸರ್, ಚಾಮರಾಜನಗರ ನಿಮ್ಮೂರು, ಅಲ್ಲಿ ಮತ್ತು ಸುತ್ತಮುತ್ತಲ ತಾಲೂಕುಗಳಲ್ಲಿ ಡಾ|| ರಾಜ್ ಹೆಸರಲ್ಲಿ ‘ಬಯಲು ರಂಗಮಂದಿರ’ವನ್ನು ನಿರ್ಮಾಣ ಮಾಡಿಕೊಟ್ಟರೆ ಸ್ಥಳೀಯರಿಗೆ ಸಣ್ಣ-ಪುಟ್ಟ ಕಾರ್ಯಕ್ರಮಗಳನ್ನು ಮಾಡಲು, ವಿಶೇಷವಾಗಿ ಹಳ್ಳಿಗರಿಗೆ ಪೌರಾಣಿಕ ನಾಟಕಗಳನ್ನು ಮಾಡಲು ವೇದಿಕೆ ನಿರ್ಮಾಣವಾದಂತೆ ಆಗುತ್ತದೆ. ಅಪ್ಪನ ಹೆಸರಲ್ಲಿ ರಂಗಭೂಮಿಗೆ ದೊಡ್ಡ ಗೌರವವಾಗುತ್ತದೆ”. ಅಂತ ಮುಕ್ತವಾಗಿ ಮಾತನಾಡಬೇಕು ಅಂತ ಬಲವಾಗಿ ಅನಿಸಿತ್ತು.

…ಬೃಹತ್ ತಾರೆಗಳ ಸುತ್ತಲಿನ ಕೋಟೆಯನ್ನು ಭೇದಿಸುವುದೇ ದೊಡ್ಡ ಸಮಸ್ಯೆ. ಸಂಕೋಚದಿಂದ ಸುಮ್ಮನಾದೆ. ಅವರೊಂದಿಗೆ ನನ್ನ ಕನಸುಗಳೂ ಮಸುಕಾದವು.
ಮಕ್ಕಳಿಗೆ ಅವರು ಅದೆಷ್ಟು ಇಷ್ಟ ಅಂತಾ ಮಾತನಾಡಿಸಿಯೇ ನೋಡಬೇಕು. ನನಗೆ ಅವರ ಸರಳತೆ-ಪ್ರಯೋಗಶೀಲತೆ ತುಂಬಾ ಇಷ್ಟ. ‘ಪರಮಾತ್ಮ’ದಂತಹ ಕತೆಯ ಆಯ್ಕೆಯೇ ವಿಶಿಷ್ಟ.

ತೀರಾ ಸಾಧಾರಣ ಎತ್ತರದ ಪುನೀತ್, ಅಪ್ಪನ ಮೂಗು, ಅಮ್ಮನ ಬಣ್ಣ, ಅಣ್ಣನ ಚೈತನ್ಯ, ಕನ್ನಡ ಮಣ್ಣಿನ ಸೌಹಾರ್ದ ಗುಣ, ಮನೆತನಕ್ಕಿರುವ ಕಲಾವಂತಿಕೆ, ಕೃಷಿಯ ಮಣ್ಣಿನ ಗುಣ, ಆಧುನಿಕ ಚಿಂತನೆ.. ಎಲ್ಲಾ ಸೇರಿ ಎರಕ ಹೊಯ್ದಂತಿದ್ದರು.

ಕನ್ನಡ ನೆಲದ ಬೀದಿ, ಮನೆ- ಮನಸ್ಸುಗಳು ಸ್ತಬ್ಧವಾಗಿದೆ. ಟಿ.ವಿ. ಆನ್ ಮಾಡಿದರೇ ಆ ಜನಸಾಗರದ ಆಕ್ರಂದನಕ್ಕೆ ಪ್ರತಿಯಾಗಿ ಏನೂ ತೋರದೇ ಮೌನವಾಗಿ ಕುಳಿತಿರುವ ಅಶ್ವಿನಿ ಪುನೀತ್ ಕಾಣುತ್ತಾರೆ. ಅವರ ನೋಟ ತಲ್ಲಣಿಸುತ್ತದೆ. ಕಣ್ಣಿನಿಂದಿಳಿಯುವ ಹನಿಗಳಿಂದ ಮಾಸ್ಕ್ ಒದ್ದೆಯಾಗಿದೆ. ತಾಯಿ ಭುಜಕ್ಕೊರಗಿದ ಕಿರಿಯ ಮಗಳ ಕನ್ನಡಕದ ಗಾಜಿನಲ್ಲಿ ಸುತ್ತೆಲ್ಲ ಜನಜಂಗುಳಿ ಇದ್ದರೂ ಅಪ್ಪ ಎದ್ದೇಳುತ್ತಿಲ್ಲವೆಂಬ ಆತಂಕದ ಪ್ರತಿಫಲನ ಕಾಣುತ್ತದೆ.

ಇನ್ನು ಒಂಟಿಯಾಗಿ ವಿಮಾನದಲ್ಲಿರುವ ಆ ಮಗುವಿನ ಚಿತ್ತದ ನೋವು ನೆನೆದರೇ..

ಬರೆಯಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ.
-ಮಂಡ್ಯ ರಮೇಶ್….

ವರದಿ. ಅಜಯ್, ಚ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend