ವೆಸ್ಟಾಸ್ ವಿಂಡ್ ಪವರ್ ಖಾಸಗಿ ಕಂಪನಿಯ 29 ಕಾವಲುಗಾರರನ್ನ ಏಕಏಕಿ ಉದ್ಯೋಗದಿಂದ ವಜಾ…..?
ಹರಪನಹಳ್ಳಿ :-ತಾಲೂಕಿನ ಹರಾಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 29 ಕಾವಲುಗಾರ ಉದ್ಯೋಗಿಗಳು ವೆಸ್ಟಾಸ್ ವಿಂಡ್ ಪವರ್ ಖಾಸಗಿ ಕಂಪನಿಯಲ್ಲಿ ಉದ್ಯೋಗವನ್ನು ಕಳೆದು ಕೊಂಡು ಬೀದಿಗೆ ಬಂದು ನಿಂತಿದ್ದಾರೆ.
ತಾಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದೇಶಿ ಮೂಲದ ವೇಸ್ಟಾಸ್ ವಿಂಡ್ ಕಂಪನಿಯೊಂದು ಕಳೆದ 20 ವರ್ಷಗಳ ಹಿಂದೆ ಆ ಭಾಗದಲ್ಲಿ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡು ನಿರಾಶ್ರಿತರನ್ನಾಗಿ ಮಾಡಿದ್ದಲ್ಲದೆ ಅದಕ್ಕೆ ಪರ್ಯಾಯವಾಗಿ ಮನೆಗೆ ಒಬ್ಬೊಬ್ಬರಿಗೆ ಭೂಮಿ ಕಳೆದುಕೊಂಡವರಿಗೆ ಉದ್ಯೋಗವನ್ನು ನೀಡುವುದಾಗಿ ಭರವಸೆ ನೀಡಿದ್ದು, ಅದರಂತೆ 29 ಜನ ಉದ್ಯೋಗಗಳನ್ನು ಕಂಪನಿಯು ನೇಮಕ ಮಾಡಿಕೊಂಡಿತ್ತು, ಆದರೆ ಈಗ 18 ವರ್ಷಗಳ ಆದ ನಂತರ ಏಕಾಏಕಿ ಕಂಪನಿಯು ಉದ್ಯೋಗಿಗಳನ್ನ ಇದ್ದಾಕಿದ್ದಂತೆ ತೆಗೆದುಹಾಕುವಂತೆ ಆದೇಶ ಹೊರಡಿಸಿರುತ್ತಾರೆ .
ಇದರಿಂದ 29 ಕುಟುಂಬಗಳ ಬದುಕು ಬೀದಿಗೆ ಬಂದು ನಿಂತಿದೆ ಅವರ ಜೀವನ ನಿರ್ವಹಣೆ ಕಷ್ಟವಾಗಿ ತಾವು ಆತ್ಮಹತ್ಯೆಮಾಡಿಕೊಳ್ಳುವುದಾಗಿ ವಿಷದ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಕಂಪನಿಯ ಗೇಟಿನ ಮುಂದೆ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಅಖಿಲ ಭಾರತ ಕಿಸಾನ್ ಸಭಾ(AIKS) ರಾಜ್ಯ ನಾಯಕರಾದ ಹೊಸಳ್ಳಿ ಮಲ್ಲೇಶ್ಧಾವಿಸಿ ಸಂಘಟನೆಯ ವತಿಯಿಂದ ಬೆಂಬಲ ನೀಡಿ ಮಾತನಾಡಿದ ಅವರು ಈ ಕಂಪನಿಯವರು ಕಳೆದ 18 ವರ್ಷಗಳಿಂದ 29 ಜನ ಕಾರ್ಮಿಕರನ್ನು ನೇಮಕ ಮಾಡಿಕೊಂಡಿತ್ತು, ಈಗ ಇದ್ದಕ್ಕಿದ್ದಾಗೆ ಯಾವುದೇ ಮುನ್ಸೂಚನೆಯನ್ನು ನೀಡದೆ ಉದ್ಯೋಗದಿಂದ ಕಿತ್ತು ಬಿಸಾಕಿರುವುದು ಕಾನೂನು ಬಾಹಿರವಾಗಿರುತ್ತದೆ, ಇವರಿಗೆ ಯಾವುದೇ ಉದ್ಯೋಗ ಭದ್ರತೆ ಜೀವವಿಮೆ ಆರೋಗ್ಯದ ಸೌಲಭ್ಯ ವಸತಿ ಸೌಲಭ್ಯ ಮುಂತಾದ ಸೌಲಭ್ಯಗಳನ್ನು ನೀಡದೆ ಇವರನ್ನು ಗಾಣದ ಎತ್ತಿನಂತೆ ಕಂಪನಿ ದುಡಿಸಿಕೊಂಡಿದೆ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪಾವತಿಸದೆ ಕಡಿಮೆ ಸಂಭಾವನೆಗೆ ಸುಮಾರು 18 ವರ್ಷಗಳ ಕಾಲ ಅವರನ್ನು ದುಡಿಸಿಕೊಂಡು ಈಗ ಅವರ ವಯಸ್ಸು ಇಳಿಮುಖವಾಗುತ್ತಿರುವಾಗ ಅವರನ್ನು ಬೀದಿಗೆ ತಳ್ಳಿದಂತಾಗಿದೆ ಎಂದು ಹೇಳಿದರು .
ಬಹುರಾಷ್ಟ್ರೀಯ ಕಂಪನಿಗಳು ಕಾರ್ಮಿಕರ ಬದುಕನ್ನು ನುಂಗಲು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಮೀಲಾಗಿ ಸ್ಥಳೀಯ ಉದ್ಯೋಗಿಗಳ ಬದುಕನ್ನು ಬೀದಿಗೆ ತಳ್ಳಿವೆ ಎಂದು ಹರಿಹಾಯ್ದರು.
ಈ ಕೂಡಲೇ ಈ 29 ಜನ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಜೊತೆಗೆ ಇವರಿಗೆ ಆರೋಗ್ಯ ವಿಮೆ ವಸತಿ ಸೌಲಭ್ಯ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಕಂಪನಿಯು ಜಾರಿಗೊಳಿಸಬೇಕು ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು .
ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ ಕಾರ್ಮಿಕರ ಬದುಕನ್ನು ಕಂಪನಿಗಳು ಅಮಾನುಷವಾಗಿ ನೆಡೆಸಿಕೊಂಡಿವೆ ಎಲ್ಲರೂ ರೈತರು ಬೆಳೆದ ಅನ್ನವನ್ನು ತಿಂದು ಅವರಿಗೆ ದ್ರೋಹ ಬಗೆಯುತ್ತಿದ್ದಾರೆ .
ದೇಶಿಯವಾಸಿಗಳ ಬದುಕನ್ನು ಕಿತ್ತುಕೊಂಡಿವೆ ಸ್ಥಳೀಯರ ಉದ್ಯೋಗಗಳನ್ನು ನುಂಗಿವೆ ಇಂಥ ಎಲ್ಲಾ ದುರಂತಗಳಿಗೆ ನಮ್ಮ ದೇಶದ ಜನಪ್ರತಿನಿಧಿಗಳೇ ನೇರ ಹೊಣೆ ಇಂತಹ ಪ್ರತಿನಿಧಿಗಳು ವಿದೇಶಿ ಕಂಪನಿಗಳ ಬೂಟು ನೆಕ್ಕುವ ಕೆಲಸವನ್ನು ಮಾಡುತ್ತಿವೆ ಎಂದು ಅಬ್ಬರಿಸಿ ಬೊಬ್ಬಿಟ್ಟರು. ಹಿಂದೆ ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಾ ಇಲ್ಲಿರುವ ಸಂಪತ್ತನ್ನೆಲ್ಲ ಲೂಟಿ ಮಾಡಿ ಅವರ ದೇಶಕ್ಕೆ ಕೊಂಡೊಯ್ಯುತ್ತಿದ್ದರು ಅದೇ ತರಹ ಈಗಲೂ ಸಹ ವಿದೇಶಿ ಕಂಪನಿಗಳು ಇಲ್ಲಿಯ ಸ್ಥಳೀಯ ಉದ್ಯೋಗಿಗಳನ್ನು ಬಳಸಿಕೊಂಡು ಹೆಚ್ಚು ಕಾಲ ದುಡಿಸಿಕೊಂಡು ಇಲ್ಲಿಯ ಸಂಪತ್ತನ್ನೆಲ್ಲ ದುಡಿಮೆಯ ಲಾಭವನ್ನೆಲ್ಲ ಇದೇ ವಿದೇಶಕ್ಕೆ ಸಾಗಿಸುತ್ತಿವೆ ಎಂದು ಆರೋಪಿಸಿದರು, ಈ ಎಲ್ಲಾ ಬೆಳವಣಿಗೆಗಳಿಗೆ ವಿದೇಶಿ ಕಂಪನಿಗಳನ್ನು ದೇಶಕ್ಕೆ ಆಹ್ವಾನ ಮಾಡುವ ಜನ ಪ್ರತಿನಿಧಿಗಳೇ ಕಾರಣ ಎಂದು ಹೇಳಿದರು.
ಸ್ಥಳೀಯ ಬಿಜೆಪಿ ಮುಖಂಡ ಮಂಜನಾಯ್ಕ್ ಮಾತನಾಡಿ ಕಂಪನಿಯು ಕೇವಲ 29 ಜನ ಕಾರ್ಮಿಕರನ್ನುಉದ್ಯೋಗದಿಂದ ತೆಗೆದು ಅನ್ಯಾಯ ಮಾಡಿಲ್ಲ ಇಲ್ಲಿ ಸಾಲು ಸಾಲು ಅನ್ಯಾಯ ಮತ್ತು ನಷ್ಟಗಳನ್ನು ಈ ಭಾಗದ ರೈತಪಿ ಜನರಿಗೆ ಮಾಡಿದೆ ಎಂದು ಆರೋಪಿಸಿದರು.
ಅವುಗಳೇನೆಂದರೆ ಈ ರೈತರ ಜಮೀನುಗಳನ್ನು ವಶಪಡಿಸಿಕೊಂಡಾಗ 20 ವರ್ಷಗಳಿಗೆ ಮಾತ್ರ ಎಂದು ಒಪ್ಪಂದಕ್ಕೆ ಸಹಿಯನ್ನು ಹಾಕಿಸಿಕೊಂಡು ಈಗ ಐವತ್ತು ವರ್ಷಗಳ ಅವಧಿಗೆ ಎಂದು ವಾದಿಸುತ್ತಿದೆ ಮತ್ತು ಕಂಪನಿಯು ಬಳಸಿದ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅವುಗಳನ್ನು ಹಾಕದೆ ಶುಭ್ರವಾದ ಸ್ವಚ್ಛಂದವಾದ ಅರಣ್ಯದಲ್ಲಿ ಎಲ್ಲೆಂದರಲ್ಲಿ ಬಿಸಾಕಿರುವುದು ಪ್ರಕೃತಿಯನ್ನು ನಾಶ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇದರಿಂದ ಅನೇಕ ಜನಜನವಾರುಗಳು ತೊಂದರೆಯನ್ನು ಅನುಭವಿಸಿ ಸಾವು ಸಂಭವಿಸುತ್ತಿವೆ ಅರಣ್ಯಗಳಲ್ಲಿ ಮೇಯಲು ಹೋದ ದನಕರಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಸಾಯುತ್ತಿವೆ.
ಈ ಎಲ್ಲಾ ತ್ಯಾಜ್ಯಗಳ ನೀರುಗಳು ಹಳ್ಳ ಕೆರೆಗಳಿಗೆ ಸೇರಿ ಧನಕರುಗಳು ಸೇವಿಸಿ ಜನ ಜಾನುವಾರುಗಳು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದಾರೆ ಅಲ್ಲದೇ ಭೂಮಿಯನ್ನು ಕಳೆದುಕೊಂಡ ಈ ನಿರಾಶ್ರಿತರ ಬದುಕನ್ನು ನಾವು ಬೆಳಗಲು ನಿಮಗೆ ಉದ್ಯೋಗವನ್ನು ನೀಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿದ್ದ ಕಂಪನಿಯು ಈಗ ಇವರ ಬದುಕನ್ನು ನುಂಗಿ ನೀರು ಕುಡಿದಿದೆ.
ಉನ್ನತ ಮತ್ತು ತಾಂತ್ರಿಕ ವ್ಯಾಸಂಗವನ್ನು ಮಾಡಿದ ಅರ್ಹ ಸ್ಥಳೀಯ ಅಭ್ಯರ್ಥಿಗಳನ್ನು ಉನ್ನತ ಹುದ್ದೆಗಳಿಗೆ ಕಂಪನಿ ನೇಮಿಸಿಕೊಳ್ಳದೆ ಕೇವಲ 29 ಜನ ಕಾವಲುಗಾರರ ಹುದ್ದೆಗಳಿಗೆ ಮಾತ್ರ ಸೇರಿಸಿಕೊಂಡಿದೆ ಉಳಿದಂತೆ ಉನ್ನತ ಹುದ್ದೆಗಳಿಗೆ ಚೆನ್ನೈ ಮುಂಬೈ ಬೆಂಗಳೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ ಎಂದು ಕಿಡಿಕಾರಿದರು .
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಸಂಘಟನೆಯ ಹರಿಶ್ಚಂದ್ರನಾಯ್ಕ್ , ಡಿವೈಎಫ್ಐ ಬಸವರಾಜ್,
ವಿರೇಶ್ ನಾಯ್ಕ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಹಾಲೇಶ್ ನಾಯ್ಕ್, ಪಂಪನಾಯ್ಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಕುರಗುಂಟಿ ನಿಂಗಪ್ಪ, ಬಸವನಗೌಡರು, ದುರುಗದಯ್ಯ, ಮುಖಂಡರುಗಳಾದ ರಾಜಶೇಖರ ಗೌಡ, ನಂದೀಶ್, ಕಲ್ಲನ ಗೌಡ, ಮಂಜಯ್ಯ, ಶಿವಕುಮಾರ್, ನಾಗರಾಜ್, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು…
ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030