ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದೆ: ಎಂ.ಪಿ.ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ: ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ. ಸದಾ ಒಳಿತು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಂಜಾರ ಯುವಜನ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದೆ. ಸಂಸ್ಕೃತಿಯ ವಿಚಾರದಲ್ಲಿ ಯಾವ ಸಮುದಾಯವು ಈ ಜನಾಂಗದ ಸಂಸ್ಕೃತಿಯನ್ನು ತಲುಪಲು ಸಾಧ್ಯವಿಲ್ಲ. ಸಮುದಾಯದ ಸಂತ ಸೇವಾಲಾಲ್ ಅವರು ಸಮಾಜ ಸುಧಾರಕರಾಗಿ ಜನಾಂಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು. ಬಂಜಾರ ಸಮುದಾಯದ ಜನ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕಿವಿಮಾತು ಹೇಳಿದರು.
ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಮೂಲಕ ಉನ್ನತ ಸ್ತರಕ್ಕೆ ಏರಬೇಕು. ಇಂದು ನಡೆಯುತ್ತಿರುವ ಯುವಜನ ಸಮಾವೇಶದಲ್ಲಿ ಚರ್ಚಿಸಲಾಗುತ್ತಿರುವ ವಿಷಯಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯವಾಗಬೇಕು. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ಸಂಸ್ಕೃತಿ ಉಳಿಸುವ ಕೆಲಸ ಕೂಡ ಮಾಡಬೇಕು ಎಂದರು.
ಬಂಜಾರರ ಪರಂಪರೆ ಮತ್ತು ಸಮಕಾಲೀನ ತಲ್ಲಣಗಳು ಕುರಿತು ಹೈಕೋರ್ಟ್ ನ್ಯಾಯವಾದಿ ಎನ್.ಅನಂತನಾಯ್ಕ ಹಾಗೂ ಡಾ.ಗಿರೀಶ್ ಉಪನ್ಯಾಸ ನೀಡಿದರು. ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಶುಭಾಶಯ ಕೋರಿ ಮಾತನಾಡಿದರು. ಕಾರ್ಯಕ್ರಮ ಆಯೋಜಕರಾದ ಈಶ್ವರನಾಯ್ಕ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ಎಲ್.ಪ್ರಕಾಶ್ನಾಯ್ಯ, ರಾಜುನಾಯ್ಕ ಉದ್ಗಟ್ಟಿ, ವೆಂಕಟೇಶನಾಯ್ಕ ಉಪಸ್ಥಿತರಿದ್ದರು..
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030