ನಿರ್ಗತಿಕ ಕುಟುಂಬಗಳಿಗೆ ಆಸರೆಯಾದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ.
ಮಂಡ್ಯ :- ರೈತರು, ಹೈನುಗಾರಿಕೆ ಹಾಗೂ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಹೆಚ್ಚಿನ ಒತ್ತು ನೀಡುವ ಮೂಲಕ ಸ್ವಾವಲಂಭಿ ಬದುಕನ್ನು ರೂಪಿಸುತ್ತಿದೆ ಎಂದು ಮೈಸೂರು ಪ್ರಾದೇಶಿಕ ನಿರ್ದೆಶಕ ಪಿ. ಗಂಗಾಧರ್ ರೈ ತಿಳಿಸಿದರು.
ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ನಾಲ್ಕು ದಶಕಗಳಿಂದಲೂ ಸಂಸ್ಥೆಯು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಮಾಜದ ಅಭ್ಯುದಯಕ್ಕೆ ದಿನ ನಿತ್ಯ ಶ್ರಮಿಸುತ್ತಿದ್ದು ಅದರಲ್ಲೂ ಕಡು ಬಡವರನ್ನು ಗುರುತಿಸಿ ಅಗತ್ಯವುಳ್ಳ ಮೂಲ ಸೌಲಭ್ಯಗಳನ್ನು ನೀಡುವ ಜತೆಗೆ ಪರಿಕರಗಳನ್ನು ವಿತರಿಸುವ ಕಾರ್ಯಕ್ಕೂ ಮುಂದಾಗಿದೆ ಎಂದರು.
ಸಂಸ್ಥೆ ವತಿಯಿಂದ 25 ಸಾವಿರ ಕುಟುಂಬಗಳಿಗೆ ನೆರವು ನೀಡಬೇಕೆಂಬ ಗುರಿ ಹೊಂದಿದ್ದು ಈಗಾಗಲೇ ರಾಜ್ಯಾದ್ಯಂತ 12 ಸಾವಿರ ಕುಟುಂಬಗಳಿಗೆ ಮಾಸಾಸನ ವಿತರಿಸುವ ಕಾರ್ಯಕ್ಕೆ ಮುಂದಾಗಿದೆ. ಮೈಸೂರು ಪ್ರಾದೇಶಿಕ ವ್ಯಾಪ್ತಿಯ 5 ಸಾವಿರ ಕುಟುಂಬಗಳ ಪೈಕಿ ತಾಲೂಕಿನ 56 ಕುಟುಂಬಗಳಿಗೆ ಪ್ರತಿ ತಿಂಗಳು ಮಾಸಾಸನ ವಿತರಿಸುತ್ತಿರುವುದಾಗಿ ವಿವರಿಸಿದರು.
ಮುಂದಿನ ದಿನಗಳಲ್ಲಿ ಗುಡಿಸಲುಗಳನ್ನು ದುರಸ್ಥಿಗೊಳಿಸುವ ಜತೆಗೆ ಶೌಚಾಲಯ, ಅಡುಗೆ ಮನೆ ನಿರ್ಮಿಸಲು ಅವಕಾಶವಿದ್ದು ನಿರ್ಗತಿಕರ ಆರೋಗ್ಯ ಉತ್ತಮವಾಗಲೆಂಬ ಉದ್ದೇಶದಿಂದ ಸಂಸ್ಥೆಯ ಕಾರ್ಯಕರ್ತರೇ ಔಷಧಿ, ದಿನ ನಿತ್ಯದ ಸಾಮಾಗ್ರಿಗಳು ಹಾಗೂ ಇನ್ನಿತರೆ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಈ ವೇಳೆ ಗ್ರಾ.ಪಂ ಸದಸ್ಯ ಸತೀಶ್, ಸಂಸ್ಥೆಯ ಮದ್ದೂರು ತಾಲೂಕಿನ ಯೋಜನಾಧಿಕಾರಿ ಯೋಗೇಶ್ ಕನ್ಯಾಡಿ, ಪಿಡಿಓ ಸಂದೀಪ್, ಮೇಲ್ವಿಚಾರಕಿ ಜ್ಯೋತಿ, ರತನ್, ಸೇವಾ ಪ್ರತಿನಿಧಿಗಳು ಮತ್ತು ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030