ಕೊಡಿಗೇಹಳ್ಳಿಯಲ್ಲಿ ಸರ್ಕಾರಿ ಗೋಶಾಲೆ ಲೋಕಾರ್ಪಣೆ
ಜಾನುವಾರುಗಳ ಆರೋಗ್ಯ ಸಂರಕ್ಷಣೆ ಹಾಗೂ ಹೈನುಗಾರಿಕೆಗೆ ಸರ್ಕಾರದ ಪ್ರೋತ್ಸಾಹ
-ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು ಗ್ರಾಮಾಂತರ:
ಜಾನುವಾರುಗಳ ಒಡನಾಟದಿಂದ ದಯೆ,ಪ್ರೀತಿ,ವಿಶ್ವಾಸ,ಮಾನವೀಯ ಗುಣಗಳ ಬೆಳವಣಿಗೆಯಾಗುತ್ತದೆ.ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದ ಜಾರಿಯಿಂದ ರಾಜ್ಯದಲ್ಲಿ ಗೋವುಗಳ ರಕ್ಷಣೆ ,ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಗೋಶಾಲೆಗಳ ಸ್ಥಾಪನೆಯಾಗುತ್ತಿವೆ.ರಾಜ್ಯದಲ್ಲಿ ಜಾನುವಾರುಗಳ ಆರೋಗ್ಯ ಸಂರಕ್ಷಣೆ ಹಾಗೂ ಹೈನುಗಾರಿಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಆರೋಗ್ಯ,ಕುಟುಂಬ ಕಲ್ಯಾಣ,ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಹೇಳಿದರು.
ನೆನಮಂಗಲ ತಾಲೂಕಿನ ಕೊಡಿಗೇಹಳ್ಳಿಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಅಧಿನಿಯಮ 2020 ರಡಿ ಜಿಲ್ಲೆಗೊಂದು ಗೋಶಾಲೆ ಪ್ರಾರಂಭಿಸುವ ಕಾರ್ಯಕ್ರಮದಡಿ ಸ್ಥಾಪಿಸಿರುವ ಸರ್ಕಾರಿ ಗೋಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಪರಂಪರೆಯಲ್ಲಿ ಹಸು,ಗೋವುಗಳನ್ನು ದೇವತೆಯ ಸ್ಥಾನ ನೀಡಲಾಗಿದೆ.ಗೋಸಂಪತ್ತು ನಮ್ಮ ಕುಟುಂಬಗಳ ಅವಿಭಾಜ್ಯ ಅಂಗವಾಗಿವೆ. ಈ ಆಶಯಕ್ಕೆ ಅನುಗುಣವಾಗಿ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿದೆ.ಎಲ್ಲಾ 31 ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಗೆ ನಿವೇಶನ ಗುರುತಿಸಿ,ಅನುದಾನ ಒದಗಿಸಲಾಗಿದೆ.ಜಾನುವಾರುಗಳ ಒಡನಾಟದಿಂದ ದಯೆ,ಪ್ರೀತಿ,ವಿಶ್ವಾಸ,ಮಾನವೀಯ ಗುಣಗಳ ಬೆಳವಣಿಗೆಯಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷ ಆಸ್ಥೆ ವಹಿಸಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ದೇಶದಲ್ಲಿ ಜಾರಿಗೊಳಿಸಿದ್ದಾರೆ.ರಾಜ್ಯದಲ್ಲಿಯೂ ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಗೊಳ್ಳುತ್ತಿದೆ. ಕೊಡಿಗೇಹಳ್ಳಿಯ ಗೋಶಾಲೆಯಲ್ಲಿ ನೂರು ಹಸುಗಳ ಪೋಷಣೆಗೆ ಅವಕಾಶವಿದೆ.ಸ್ಥಳೀಯರ ಸಹಕಾರದಿಂದ ಇದರ ಪ್ರಯೋಜನ ಸಂಪೂರ್ಣವಾಗಿ ಪಡೆಯಬೇಕು.ಜಿಲ್ಲೆಯಲ್ಲಿ 1 ಲಕ್ಷ 17 ಸಾವಿರ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿವೆ,ಪ್ರತಿದಿನ 5 ಲಕ್ಷ ಲೀ.ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕ ರೈತರಿಗೆ ತಲಾ 5 ರೂ.ಪ್ರೋತದಸಾಹ ಧನ ನೀಡಲಾಗುತ್ತಿದೆ.ಜಿಲ್ಲೆಯಲ್ಲಿ 36.11 ಕೋಟಿ ರೂ. ಪ್ರೋತ್ಸಾಹ ಧನ ವಿತರಣೆಯಾಗಿದೆ.ಪಶುಗಳ ಆರೋಗ್ಯ ರಕ್ಷಣೆಗಾಗಿ ಪಶುಸಂಜೀವಿನಿ ಸಂಚಾರಿ ಚಿಕಿತ್ಸಾಲಯಗಳ ಸೇವೆ ಪ್ರಾರಂಭಿಸಿರುವುದು ಅಭಿನಂದನಾರ್ಹ ಕ್ರಮವಾಗಿದೆ . ಹೊಸಕೋಟೆಯ ಕಲ್ಲಹಳ್ಳಿ ಗ್ರಾಮದಲ್ಲಿ ಇನ್ನೊಂದು ಗೋಶಾಲೆ ಸ್ಥಾಪನೆಗೆ 8 ಎಕರೆ ಜಾಗೆ ಒದಗಿಸಲಾಗಿದೆ ಎಂದರು.
ಪಶುಸಂಗೋಪನಾ ಸಚಿವರಾದ ಪ್ರಭು ಬಿ.ಚವ್ಹಾಣ ಮಾತನಾಡಿ,ಕೃಷಿ ಪ್ರಧಾನವಾಗಿರುವ ಭಾರತ ದೇಶದಲ್ಲಿ ಹಸುಗಳಿಗೆ ಮಹತ್ವದ ಸ್ಥಾನಮಾನವಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು,ರಾಜ್ಯದ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಸ್ಥೆಯಿಂದ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೊಂಡಿದೆ. ಇದರಿಂದ ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಹಸುಗಳ ರಕ್ಷಣೆ ಮಾಡಲಾಗಿದೆ.ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಣ್ಯಕೋಟಿ ಹಸು ದತ್ತು ಯೋಜನೆ ತೆಗೆದುಕೊಳ್ಳುವ ಯೋಜನೆ ಜಾರಿಗೊಳಿಸಿದ್ದಾರೆ.ಹೆಸರಾಂತ ಚಿತ್ರನಟ ಸುದೀಪ್ ಅವರು 31 ಹಸುಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಕೂಡ ಹಸುಗಳನ್ನು ದತ್ತು ಪಡೆದು ಯೋಜನೆಗೆ ಕೈಜೋಡಿಸಬೇಕು.ಜಾನುವಾರುಗಳ ಚರ್ಮಗಂಟು ಖಾಯಿಲೆ ನಿಯಂತ್ರಣ ಹಾಗೂ ನಿವಾರಣೆಗೆ ತ್ವರಿತ ಕ್ರಮವಹಿಸಲು ಮುಖ್ಯಮಂತ್ರಿಯವರು 13 ಕೋಟಿ ರೂ.ಹಣಕಾಸು ಬಿಡುಗಡೆ ಮಾಡಿದ್ದಾರೆ ಎಂದರು.
ರಾಜ್ಯದ ಎಲ್ಲೆಡೆ ಗೋಶಾಲೆ ನಿರ್ಮಾಣಕ್ಕೆ ಒಂದೇ ಮಾದರಿಯ ವಿನ್ಯಾಸ ಇರಬೇಕು.ಗುಣಮಟ್ಟ ಕಳಪೆಯಾಗಬಾರದು ಎಂದು ಸಚಿವ ಪ್ರಭು ಚವ್ಹಾಣ ಸೂಚಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ತ್ವರಿತ ಅವಧಿಯಲ್ಲಿ ಕೊಡಿಗೇಹಳ್ಳಿಯಲ್ಲಿ ಸರ್ಕಾರ ಗೋಶಾಲೆ ನಿರ್ಮಿಸಿರುವುದು ಸ್ವಾಗತಾರ್ಹ.ಕಟ್ಟಡದ ನೆಲಹಾಸಿಗೆ ಕಲ್ಲು ಹಾಕಿದರೆ ಗೋಶಾಲೆ ಇನ್ನಷ್ಟು ವೈಜ್ಞಾನಿಕಗೊಳ್ಳಲಿದೆ.ದೇಶದ ಕ್ಷೀರಕ್ರಾಂತಿಯ ಪಿತಾಮಹ ಡಾ.ವರ್ಗಿಸ್ ಕುರಿಯನ್ ಅವರ ಕೊಡುಗೆಯಿಂದಾಗಿ ಇಂದು ದೇಶದಾದ್ಯಂತ ಹೈನುಗಾರಿಕೆ ಪ್ರಮುಖ ಆರ್ಥಿಕ ಚಟುವಟಿಕೆಯಾಗಿ ರೂಪುಗೊಂಡಿದೆ ಎಂದರು.
ಮಾಜಿಶಾಸಕ ನಾಗರಾಜ,ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ,ಬಿಎಂಟಿಸಿ ನಿರ್ದೇಶಕ ಭೃಂಗೀಶ,ಕೊಡಿಗೇಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಕೆ.ಆರ್.ಗಂಗಮ್ಮ ಚನ್ನೇಗೌಡ,ಉಪಾಧ್ಯಕ್ಷ ಎ.ಹೆಚ್.ಅಂಜನಮೂರ್ತಿ,ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತೆ ಎಸ್.ಅಶ್ವತಿ,ನಿರ್ದೇಶಕ ಡಾ.ಮಂಜುನಾಥ ಎಸ್.ಪಾಳೇಗಾರ,ಜಿಲ್ಲಾಧಿಕಾರಿ ಆರ್.ಲತಾ,ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ರೇವಣಪ್ಪ,ಉಪವಿಭಾಗಾಧಿಕಾರಿ ತೇಜಸ್ ಕುಮಾರ, ತಹಸೀಲ್ದಾರ ಮಂಜುನಾಥ ಮತ್ತಿತರರು ವೇದಿಕೆಯಲ್ಲಿದ್ದರು.
ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಜಿ.ಎಂ.ನಾಗರಾಜ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು…
ವರದಿ. ಎನ್. ಕಲಾವತಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030