ಹೊನ್ನಾಳಿ ತಾಲ್ಲೂಕು : ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಅರ್ಜಿ ಆಹ್ವಾನ…!!!

Listen to this article

ಹೊನ್ನಾಳಿ ತಾಲ್ಲೂಕು : ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಅರ್ಜಿ ಆಹ್ವಾನ

ದಾವಣಗೆರೆ
ಜಿಲ್ಲೆಯಲ್ಲಿ ಎಲ್ಲ ಹಾಡಿ, ತಾಂಡ, ಗೊಲ್ಲರಹಟ್ಟಿ, ಪ.ಜಾತಿ ಮತ್ತು ಪ.ಪಂಗಡದ ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 18 ಗ್ರಾಮಗಳ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಹೊನ್ನಾಳಿ ತಾಲ್ಲೂಕಿನ ಬಿದರಹಳ್ಳಿ ತಾಂಡ, ಕೊಡತಾಳು ತಾಂಡ, ಕಂಕನಹಳ್ಳಿ, ಮಾವಿನಕೋಟೆ ತಾಂಡ, ನೇರಲಗುಂಡಿ ತಾಂಡ, ನೆಲಹೊನ್ನೆ ತಾಂಡ, ಚನ್ನೇನಹಳ್ಳಿ, ತಿಮ್ಲಾಪರ ತಾಂಡ, ಚೀಲಾಪುರ ತಾಂಡ, ಗೋಪಗೊಂಡನಹಳ್ಳಿ ತಾಂಡ, ಹನುಮಸಾಗರ ತಾಂಡ, ಕೋಟೆಮಲ್ಲೂರು ತಾಂಡ, ಗುಡ್ಡೇಹಳ್ಳಿ ತಾಂಡ, ಹೊಸಜೋಗ ತಾಂಡ, ಕುರುವ ತಾಂಡ, ಮಾಚೇನಹಳ್ಳಿ ತಾಂಡ, ಘಂಟ್ಯಾಪುರ (ಇಂದಿರಾ ಕಾಲೋನಿ) ಹಾಗೂ ಕೆಂಗಟ್ಟೆ ತಾಂಡ ದಲ್ಲಿ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದ ಈ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣಾ ಆದೇಶದಂತೆ ಕಲ್ಪಿಸಲಾಗಿರುವ ಎಲ್ಲಾ ಹಾಡಿ, ತಾಂಡ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿ, ಗೊಲ್ಲರಹಟ್ಟಿಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಆದೇಶಿಸಿದ್ದು, ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಿಗದಿತ ನಮೂನೆ-ಎ ನಲ್ಲಿ ಅರ್ಜಿ ಕರೆಯಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿವಸದೊಳಗಾಗಿ ಜಂಟಿ ನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ದಾವಣಗೆರೆ ಇವರಿಗೆ ಸಲ್ಲಿಸಬೇಕು. ಅವಧಿಯ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿ ಅಥವಾ ತಹಶೀಲ್ದಾರ್, ತಾಲ್ಲೂಕು ಕಚೇರಿಯಿಂದ ಪಡೆಯಬಹುದು. ಅರ್ಜಿಯ ಜೊತೆ ದಾಖಲೆಗಳನ್ನು ಸಲ್ಲಿಸದ ಅಥವಾ ಅಪೂರ್ಣವಾಗಿರುವ ಮತ್ತು ನಿಗದಿತ ದಿನಾಂಕದ ನಂತರ ಸ್ವೀಕೃತವಾಗಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಮಂಜೂರು ಮಾಡಲು ಉದ್ದೇಶಿಸಲಾಗಿರುವ ಹೊಸ ನ್ಯಾಯಬೆಲೆ ಅಂಗಡಿಗೆ ಲಭ್ಯವಿರುವ ಪ್ರಮಾಣಗಳಿಗೆ ಅನುಗುಣವಾಗಿ ಎಎವೈ(ಅಂತ್ಯೋದಯ), ಬಿಪಿಎಲ್(ಆದ್ಯತಾ), ಎಪಿಎಲ್(ಆದ್ಯತೇತರ) ಪಡಿತರ ಚೀಟಿಗಳನ್ನು ನಿಯೋಜಿಸುವ ಉದ್ದೇಶ ಹೊಂದಲಾಗಿದೆ. ಈ ಎಲ್ಲ ಉದ್ದೇಶಿತ ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಒಂದು ತಿಂಗಳಿಗೆ ಪಡಿತರ ಎತ್ತುವಳಿಗೆ ಕನಿಷ್ಠ ಮೊತ್ತ ತಲಾ 50 ಸಾವಿರ ರೂಗಳು ಅವಶ್ಯವಿದೆ.
ನ್ಯಾಯಬೆಲೆ ಅಂಗಡಿ ಕೋರಿ ಅರ್ಜಿ ಸಲ್ಲಿಸುವ ಸಂಸ್ಥೆಗಳು ಅಥವಾ ಇತರೆಯವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಸಹಕಾರ ಸಂಘಗಳು ಕನಿಷ್ಠ 3 ವರ್ಷದ ಹಿಂದೆ ನೊಂದಾಯಿತವಾಗಿರಬೇಕು. ಮತ್ತು ಮೂರು ವರ್ಷಗಳ ನಿರಂತರ ಚಟುವಟಿಕೆಯಲ್ಲಿರಬೇಕು. ಎರಡು ವರ್ಷಗಳಿಂದ ಕನಿಷ್ಠ ಎರಡು ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
ಅರ್ಜಿದಾರ ಅಭ್ಯರ್ಥಿಯು ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು. ಸಹಕಾರ ಸಂಘ/ಸಂಸ್ಥೆಗಳ ಮತ್ತು ಸ್ವಸಹಾಯ ಸಂಘಗಳಾದರೆ ನೋಂದಾವಣೆ ಪತ್ರ, ಕಳೆದ 3 ವರ್ಷಗಳ ದೃಡೀಕೃತ ಲೆಕ್ಕ ಪರಿಶೋಧನಾ ವರದಿ ಮತ್ತು ಉಪನಿಯಮಗಳು(ಬೈಲಾ), ನ್ಯಾಯಬೆಲೆ ಅಂಗಡಿ ನಡೆಸಲು ಮತ್ತು ಪ್ರಮಾಣ ಪತ್ರ ಸಲ್ಲಿಸಲು ಅಧಿಕಾರ ಪಡೆದಿರುವ ಪ್ರತಿನಿಧಿಯನ್ನು ನೇಮಿಸಿರುವ ಬಗ್ಗೆ ನಿರ್ಣಯ, ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ 1959 ಅಡಿ ವಿಚಾರಣೆ, ಟ್ರಯಲ್ ಮತ್ತು ಲಿಕ್ವಿಡೇಷನ್ ನಡವಳಿ ನಡೆದಿರುವುದಿಲ್ಲ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಡೀಕರಣ ಪತ್ರ, ವ್ಯಾಪಾರದ ಮಳಿಗೆಯ ಖಾತೆ ಅಥವಾ ಬಾಡಿಗೆ/ಕರಾರು ಪತ್ರ, ಹಣಕಾಸು ಹೊಂದಿರುವ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ ಪ್ರತಿನಿಧಿಯ ಇತ್ತೀಚಿನ 3 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಬೇಕು. ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಾಗ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ(ನಿಯಂತ್ರಣ) ಆದೇಶ 2018 ರಲ್ಲಿ ಆದ್ಯತೆಗಳನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

 

ವರದಿ. ರಾಜು, ಎಂ, ದಾವಣಗೆರೆ (ಸ್ಥಳೀಯ )

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend