ವರದಿ. ಮಂಜುನಾಥ್, ಎಚ್
ಚಿತ್ರದುರ್ಗ: ಮೊಳಕಾಲ್ಮುರು ಪ್ರೌಢಶಾಲೆ ಮುಖ್ಯ ಶಿಕ್ಷಕರು ಹಾಗೂ ಅಧಿಕಾರಿಗಳ ಮಧ್ಯೆ ಕಮ್ಯೂನಿಕೇಷನ್ ಗ್ಯಾಪ್ ಆಗಿ ಕಳೆದ ವರ್ಷ ಪ್ರೌಢಶಾಲೆಗಳಲ್ಲಿ ಸೇವೆಸಲ್ಲಿಸಿದ ಅತಿಥಿ ಶಿಕ್ಷಕರಿಗೆ ಇದುವರೆಗೂ ವೇತನ ಸಿಕ್ಕಿಲ್ಲ. ಪ್ರೌಢಶಾಲೆ ఆತಿಧಿ ಶಿಕ್ಷಕರಿಗೆಂದು ಮಂಜೂರಾಗಿದ್ದ 1.20 ಲಕ್ಷ ರೂ. ಗೌರವಧನವು ಬಿಇಒ ಹಾಗೂ ಸಂಬಂಧಿಸಿದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಮಧ್ಯೆ ಸಾಮರಸ್ಯದ ಕೊರತೆ ಏರ್ಪಟ್ಟು ಅನುದಾನ ವಾಪಸ್ ಹೋಗಿದೆ. ಆದರೆ ಅತಿಥಿ ಶಿಕ್ಷಕರಿಗೆ ಮಾತ್ರ ಇಲಾಖೆ ಸಮಯಕ್ಕೊಂದು ಸಬೂಬು ಹೇಳುತ್ತಲೇ ಜಾರಿಕೊಳ್ಳುತ್ತಿದೆ. ಹೌದು, 2019-20ನೇ ಸಾಲಿನಲ್ಲಿ ತಾಲೂಕಿನ ಪ್ರೌಢಶಾಲೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಮೂರಾಬಟ್ಟೆಯಾಗದಂತೆ ತಡೆಯಲು ಶಿಕ್ಷಣ ಇಲಾಖೆ ಅಧಿಕಾರಿಗಳು ನಾನಾ ಶಾಲೆಗಳಿಂದ ಒಟ್ಟು ಒಂದು ಡಜನ್ ಅತಿಥಿ ಶಿಕ್ಷಕರನ್ನು ಮೇಲಾಧಿಕಾರಿಗಳ ಆದೇಶದಂತೆ ನೇಮಿಸಿಕೊಂಡು ವರ್ಷದವರೆಗೂ ಇವರಿಂದ ಬೋಧನೆ ಮಾಡಿಸಿತ್ತು. ಪಟ್ಟಣದ ಸರಕಾರಿ ಬಾಲಕಿಯು ಪ್ರೌಢಶಾಲೆಯಲ್ಲಿ ಮೂರು, ನಾಗಸಮುದ್ರ, ದೇವಸಮುದ್ರ, ಬಾಂಡ್ರಾವಿ ಸರಕಾರಿ ಶಾಲೆಗಳಲ್ಲಿ ತಲಾ ಒಬ್ಬರು, ಜೆ.ಬಿ.ಹಳ್ಳಿ ಹಾಗೂ ಆದರ್ಶ ವಿದ್ಯಾಲಯದಲ್ಲಿ ತಲಾ ಇಬ್ಬರು, ಪಟ್ಟಣದ ಜ್ಯೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗ ಕೆಂದು ಒಬ್ಬರೂ ಸೇರಿದಂತೆ ಒಟ್ಟು 12 ಜನ ಶಿಕ್ಷಕರನ್ನು 2020 ಮಾರ್ಚ್, 31 ರವರೆಗೂ ಕರ್ತವ್ಯ ನಿರ್ವಹಿಸಬೇಕು ಎನ್ನುವ ಷರತ್ತಿನೊಂದಿಗೆ ನೇಮಿಸಿಕೊಳ್ಳಲಾಗಿತ್ತು. 2019-20ನೇ ಸಾಲಿನಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು, ಇವರಿಗೆ ನೀಡಬೇಕಿರುವ ಗೌರಧನವನ್ನು ಅವರ ಖಾತೆಗೆ ಜಮೆ ಮಾಡಲು ಅನುದಾನವನ್ನು ನಿಮ್ಮ ಡ್ರಾಯಿಂಗ್ ಕೋಡ್ಗಳಿಗೆ ಆಪ್ ಲೋಡ್ ಮಾಡಲಾಗಿದೆ. ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕರು ತಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಶಿಕ್ಷಕರಿಗೆ ಪಾವತಿಸುವ ಗೌರವಧನದ ಮೊತ್ತಕ್ಕೆ ಖಜಾನೆ-2 ಬಿಲ್ಲು ಸಿದ್ಧಪಡಿಸಿ ತಾಪಂನಿಂದ ಮೇಲು ಸಹಿ ಪಡೆದು ಉಪಖಜಾನೆಗೆ ನಗಧೀಕರಣಕ್ಕಾಗಿ ಸಲ್ಲಿಸುವಂತೆ 2020 ಫೆಬ್ರವರಿ 25ರಂದು ಬಿಇಒ ಕಚೇರಿಯಿಂದ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಪತ್ರ ಬರೆಯಲಾಗಿದೆ. ಆದರೆ ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದಕ್ಕೆ ಪೂರಕವೆನ್ನುವಂತೆ ಅಂದಿನ ಬಿಇಒಮತ್ತೊಮ್ಮೆ ಈ ವಿಷಯವನ್ನು ಎಚ್ಎಂಗಳಿಗೆ ಎಚ್ಚರಿಸಿಲ್ಲ, ಇವರಿಬ್ಬರ ಮಧ್ಯೆ ಈ ವಿಷಯ ಚರ್ಚೆಯಾಗದ ಕಾರಣ ಗೌರವಧನ ವಿತರಣೆಗೆಂದು ಬಂದ 7.20 ಲಕ್ಷ ರೂ. ಹಣ ವಾಪಸ್ ಆಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ನಾಣ್ಣುಡಿಯಂತೆ ಬಿಇಒ ಮತ್ತು ಪ್ರೌಢಶಾಲೆ ಶಿಕ್ಷಕರ ಮಧ್ಯೆ ಏರ್ಪಟ್ಟ ಸಾಮರಸ್ಯದ ಕಂದಕದಿಂದ ವರ್ಷಕಾಲ ಸೇವೆ ಮಾಡಿದ್ದ ಅತಿಥಿ ಶಿಕ್ಷಕರು ವೇತನ ವೇತನ ಇಲ್ಲದೆ ಇಂದಿಗೂ ಪರದಾಡುತ್ತಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030