ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಗಿರೀಶ ಸಲಹೆ
ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಿ
ಚಿತ್ರದುರ್ಗ,
ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ. ಗಿರೀಶ ಸಲಹೆ ನೀಡಿದರು.
ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರಸ್ವತಿ ಕಾನೂನು ಕಾಲೇಜು, ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಮಾನವ ಹಕ್ಕುಗಳ ಕುರಿತಂತೆ ರಾಜ್ಯ ಆಯೋಗದ ಕೈಪಿಡಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ರಕ್ಷಣೆ ಮಾಡುವ ಜವಾಬ್ದಾರಿ ಕೇವಲ ಒಬ್ಬರಿಂದ ಆಗುವ ಕಾರ್ಯವಲ್ಲ. ಪ್ರತಿಯೊಬ್ಬರು ಕೈಜೋಡಿಸಬೇಕಿದೆ. ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ನಮ್ಮ ಹಕ್ಕುಗಳ ರಕ್ಷಣೆ ಮಾಡಲು ಸಾಧ್ಯವಾಗಲಿದೆ. ಸಮಸ್ಯೆಗೆ ಪರಿಹಾರ ದೊರೆಯುವವರಿಗೂ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರು ಇನ್ನೊಬ್ಬರ ಹಕ್ಕು ರಕ್ಷಣೆ ಮಾಡುತ್ತೇವೆ ಎಂಬ ಜವಾಬ್ದಾರಿ ವಹಿಸಿಕೊಂಡರೆ ಬೇರೆ ಕಾಯ್ದೆಗಳೇ ಅವಶ್ಯಕತೆಯೇ ಇರುವುದಿಲ್ಲ. ಮಕ್ಕಳ, ತಂದೆತಾಯಿಗಳ, ಸಮಾಜ ಹಾಗೂ ದೇಶದ ಹಕ್ಕುಗಳ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮನೆಯಿಂದಲೇ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.
ಇನ್ನೊಬ್ಬರ ನೋವು ನಮ್ಮ ಬದುಕು ಆಗಬಾರದು. ಇನ್ನೊಬ್ಬರ ಸಂತೋಷ ನಮ್ಮ ಬದುಕಾಗಬೇಕು. ಇನ್ನೊಬ್ಬರ ನೋವಿನಲ್ಲಿ ಬದುಕುವುದು ಸಹ ಮಾನವ ಹಕ್ಕುಗಳ ಉಲ್ಲಂಘನೆ.
ಸಂವಿಧಾನ ರಚನೆಯ ಸಂದರ್ಭದಲ್ಲಿ ಸಂವಿಧಾನ ರಚನಾಕಾರರು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮಾನವಹಕ್ಕುಗಳನ್ನು ಆಗಲೇ ನೀಡಿದ್ದಾರೆ. ಸಂವಿಧಾನದ 21ನೇ ವಿಧಿ ಅನ್ವಯ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ಹಕ್ಕು ಇದೆ. ಇದು ಸಂವಿಧಾನದ 21ನೇ ವಿಧಿ ಸಂವಿಧಾನದ ಹೃದಯವಿದ್ದಂತೆ ಎಂದು ಹೇಳಿದರು.
ಅಪರಾಧ ಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಉಪನ್ಯಾಸ ನೀಡಿ, ರಾಷ್ಟ್ರೀಯ ಮಾನವ ಹಕ್ಕುಗಳ ಸ್ಥಾಪನೆ ಪೂರ್ವಕ್ಕಿಂತಲೂ ಮೊದಲು ರಾಷ್ಟ್ರೀಯ ಅಪರಾಧಗಳ ಅಂಕಿಸಂಖ್ಯೆಗಳ ಸಂಗ್ರಹಾಲಯವು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಪರಾಧಗಳ ಅಂಕಿಸಂಖ್ಯೆಗಳ ಸಂಗ್ರಹ ಪ್ರಕಾರ 1993-94ರ ಹಿಂದೆ ಒಂದೇ ದಿನದಲ್ಲಿ 400 ರಿಂದ 500 ಲಾಕಪ್ಡೆತ್ಗಳನ್ನು ಕಂಡಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಸಂರಕ್ಷಣೆಯ ಅಧಿನಿಯಮ ಪ್ರಾರಂಭವಾದಾಗಿನಿಂದ ಲಾಕಪ್ಡೆತ್ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮಾನವ ಹಕ್ಕುಗಳ ಆಯೋಗದದ ರಚನೆಯಿಂದ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದರು.
ಕೋವಿಡ್-19ರ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಯಿತು. ಈ ಕುರಿತು ರಾಷ್ಟ್ರೀಯ ಮಕ್ಕಳ ಆಯೋಗ, ಮಹಿಳಾ ಆಯೋಗದವರು ಸರ್ಕಾರಕ್ಕೆ ವರದಿನೀಡಿದ್ದಾರೆ. ಚೈಲ್ಡ್ ರೈಟ್ಸ್ ಸಂಸ್ಥೆಯವರು ಪ್ರಮುಖ ಪಟ್ಟಣಗಳಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸರ್ವೇ ಮಾಡಲಾಗಿದೆ. ಕಾಣೆಯಾದ ಮಕ್ಕಳು ಮುಂದೆ ಬಾಲಕಾರ್ಮಿಕರಾಗಿ ಶೋಷಣೆಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದರೂ ಸಹ ಮಾನವ ಹಕ್ಕುಗಳಿಗೆ ಚ್ಯುತಿಯಾಗುತ್ತಿರುವ ದೂರುಗಳು ಕಂಡುಬರುತ್ತಿವೆ. ಪ್ರತಿಯೊಬ್ಬರ ಹಕ್ಕುಗಳನ್ನು ಸಂರಕ್ಷಿಸಲ್ಪಡಬೇಕು, ಯಾರು ಸಹ ಧಮನಿಸಬಾರದು, ಮನುಷ್ಯನಿಗೆ ಬೇಕಾದ ಕನಿಷ್ಠ ಅಗತ್ಯತೆಗಳು ಸಿಗಬೇಕು. ಅವರ ಹಕ್ಕುಗಳಿಗೆ ಗೌರವ ಸಿಗಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆ 1948 ರ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ಘೊಷಣೆಯನ್ನು ಅಂಗೀಕರಿಸಿದ್ದರಿಂದ ಈ ದಿನವನ್ನು ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗಿದೆ. ಭಾರತದಲ್ಲಿ 1993ರ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ ಜಾರಿಗೆ ಬಂದ ನಂತರ ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಗಿ ಮಾನವ ಹಕ್ಕುಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಬ್ಬ ಮನುಷ್ಯನಿಗೆ ಬದುಕಲು ತನ್ನದೇಯಾದ ನೈಸರ್ಗಿಕ ಹಕ್ಕುಗಳಿವೆ. ಈ ಹಕ್ಕುಗಳು ಎಲ್ಲರಿಗೂ ಸಿಗಬೇಕು. ಪ್ರತಿಯೊಬ್ಬರಿಗೂ ಆಹಾರ, ಬಟ್ಟೆ, ವಸತಿ ಸಿಗಲೇಬೇಕು ಎಂದರು.
ಕಾರ್ಯಕ್ರಮದಲ್ಲಿ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ಸುಧಾದೇವಿ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶಪ್ಪ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮುತ್ತುರಾಜ್ ಮತ್ತು ತಂಡದವರಿಂದ ಜಾಗೃತಿ ಗೀತೆಗಳನ್ನು ಹಾಡಿಸಲಾಯಿತು. ಮಾನವ ಹಕ್ಕಗಳ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ಸರಸ್ವತಿ ಕಾನೂನು ಕಾಲೇಜಿನ ಡಾ; ಎನ್.ಡಿ.ಗೌಡ ನಿರೂಪಿಸಿದರು. ಡಾ; ರವಿಕುಮಾರ್ ವಂದಿಸಿದರು…
ವರದಿ.ಗಿರೀಜಾ, ಬೆಳ್ಳಕಟ್ಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030