ನಾಯಕನಹಟ್ಟಿ: ರಾಜ್ಯದಲ್ಲೇ ಅತ್ಯಂತ ಕಡಿಮೆ ಮಳೆಬೀಳುವ ಪ್ರದೇಶ ನಾಯಕನಹಟ್ಟಿ ಹೋಬಳಿಯನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಕಿಸಾನ್ ಸಂಘದ ಪದಾಧಿಕಾರಿಗಳು ಬುಧವಾರ ಉಪತಹಶೀಲ್ದಾರ್ ಬಿ. ಶಕುಂತಲಾ ಅವರಿಗೆ ಮನವಿ ಸಲ್ಲಿಸಿದರು.
‘ನಾಯಕನಹಟ್ಟಿ ಹೋಬಳಿಯು ನಿರಂತರವಾದ ಬರಗಾಲಕ್ಕೆ ತುತ್ತಾಗಿದೆ. ಈ ವರ್ಷದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದರಿಂದ ಕಳೆದ ಎರಡು ತಿಂಗಳಿನಿಂದ ರೈತರು ಬಿತ್ತನೆ ಮಾಡಿದ್ದ ರಾಗಿ, ಜೋಳ, ಸಜ್ಜೆ, ಹತ್ತಿ, ಸೂರ್ಯಕಾಂತಿ, ಶೇಂಗಾ, ತೊಗರಿ ಸೇರಿದಂತೆ ಬಹುತೇಕ ಬೆಳೆ ಒಣಗುವ ಹಂತ ತಲುಪಿದೆ. ದುಬಾರಿ ಬೆಲೆಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಸಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷ ಹಳ್ಳಕೊಳ್ಳಗಳು ತುಂಬಿ ಹರಿಯದಷ್ಟು ಮಳೆ ಇಲ್ಲದ ಕಾರಣ ಜನ ಜಾಣುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ. ಹೋಬಳಿಯಲ್ಲಿ ಯಾವುದೇ ನದಿಮೂಲಗಳಿಲ್ಲ. ಕೇವಲ ಮಳೆಯಾಶ್ರಿತವಾಗಿ ಕೃಷಿ ಜೀವನ ನಡೆಸುತ್ತಿದ್ದಾರೆ. ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಸಂಘದ ಹೋಬಳಿ ಘಟಕ ಅಧ್ಯಕ್ಷ ಬಿ.ಟಿ. ಪ್ರಕಾಶ್ ಒತ್ತಾಯಿಸಿದರು.
ಕೊಳವೆಬಾವಿಗಳಲ್ಲಿ ಸಿಗುವ ಅಲ್ಪಸ್ವಲ್ಪ ನೀರಿನಲ್ಲಿ ನೀರಾವರಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವಿದ್ಯುತ್ ಸಮಸ್ಯೆ ತಲೆದೋರಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಜಾನುವಾರುಗಳಿಗೆ ಮತ್ತು ದೇವರೆತ್ತುಗಳಿಗೆ ಮೇವು ನೀರಿಲ್ಲದೆ ಸಾಯುವ ಸ್ಥಿತಿ ತಲುಪಿವೆ. ನಾಯಕನಹಟ್ಟಿ ಹೋಬಳಿಯನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸಿ ಈ ಭಾಗಕ್ಕೆ ರೈತರ ಹಿತಕಾಯಲು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿಬೇಕು. ಗ್ರಾಮ ಪಂಚಾತಿಯಿಗೆ ಒಂದರಂತೆ ಗೋಶಾಲೆಗಳನ್ನು ನಿರ್ಮಿಸಬೇಕು. ಬೆಳೆನಷ್ಟ ಹೊಂದಿದ ರೈತರಿಗೆ ಬೆಳೆವಿಮೆ, ಬೆಳೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಾಲಯ್ಯ, ಮಹೇಶ್ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಶಿವರಾಜ್, ಸಣ್ಣಪ್ಪ, ಹನುಮಣ್ಣ, ಮಹೇಶ್, ಓಬಣ್ಣ ಇದ್ದರು…
ವರದಿ, ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030