ಹಸಿದವರಿಗೆ ಕಡಿಮೆ ದರದಲ್ಲಿ ಊಟ-ಉಪಾಹಾರ ಸಿಗಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದಿರಾ ಕ್ಯಾಂಟೀನ್ (Indira Canteen) ಅನ್ನು ಅನುಷ್ಠಾನಕ್ಕೆ ತಂದಿದ್ದರು. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಕುಂಟುತ್ತಾ ಸಾಗಿತ್ತು.ಆದರೆ, ಈಗ ಪುನಃ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಇಂದಿರಾ ಕ್ಯಾಂಟೀನ್ಗೆ 100 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದಾರೆ. ಈ ನಡುವೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ (Challakere in Chitradurga) ಸಿಬ್ಬಂದಿಗೆ 7 ತಿಂಗಳಿಂದ ಸಂಬಳವನ್ನೇ ನೀಡದ ಹಿನ್ನೆಲೆಯಲ್ಲಿ ಈ ಕ್ಯಾಂಟೀನ್ಗೆ ಸಿಬ್ಬಂದಿಯೇ ಬೀಗ ಜಡಿದಿದ್ದಾರೆ. ಮುಖ್ಯಮಂತ್ರಿಗಳೇ ನೀವೊಮ್ಮೆ ಇತ್ತ ನೋಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಚಳ್ಳಕೆರೆ ನಗರದ ಮುಖ್ಯ ರಸ್ತೆಯಲ್ಲಿ ಈ ಇಂದಿರಾ ಕ್ಯಾಂಟೀನ್ ಇದೆ. ಕಳೆದ 7 ತಿಂಗಳಿಂದ ಇಲ್ಲಿನ ಸಿಬ್ಬಂದಿಗೆ ಸಂಬಳವನ್ನೇ ನೀಡಲಾಗಿಲ್ಲ (No salaries of staff) ಎಂಬ ಆರೋಪ ಕೇಳಿಬಂದಿದೆ. ಪ್ರತಿನಿತ್ಯ ಸಾವಿರಾರು ಜನರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಇದಾಗಿತ್ತು. ಗಾರೆ ಕೆಲಸಗಾರರು, ವಿದ್ಯಾರ್ಥಿಗಳು, ನೌಕರರು, ಕ್ಯಾಬ್ ಚಾಲಕರಿಗೆ ಈ ಕ್ಯಾಂಟೀನ್ನಲ್ಲಿ ಊಟ, ಉಪಾಹಾರ ಉತ್ತಮವಾಗಿಯೇ ಸಿಗುತ್ತಿತ್ತು. ಆದರೆ, ಇಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಮಾತ್ರ ಸಂಬಳವೇ ಸಿಗುತ್ತಿಲ್ಲ.
ಹೋಗಲಿ ಗುತ್ತಿಗೆದಾರರ ಬಳಿ ಹೋಗಿ ಸಂಬಳ ಕೊಡಿ ಎಂದು ಕೇಳಿದರೆ ಅವರು ಹೇಳುವ ಉತ್ತರವನ್ನು ಕೇಳಿ ಕೇಳಿ ಇವರಿಗೆ ಸಾಕಾಗಿ ಹೋಗಿತ್ತು. ಪೇಮೆಂಟ್ ಕೇಳಿದರೆ ನಮ್ಮ ಫೋನ್ ನಂಬರ್ ಅನ್ನು ಬ್ಲಾಕ್ ಲಿಸ್ಟ್ಗೆ ಹಾಕುತ್ತಾರೆ. ಇನ್ನೊಂದು ನಂಬರ್ನಿಂದ ಕರೆ ಮಾಡಿ ಮಾತನಾಡಿದರೆ, ನಾವು ಎಂದು ಗೊತ್ತಾಗುತ್ತಿದ್ದಂತೆ ಕರೆಯನ್ನು ಕಟ್ ಮಾಡುತ್ತಾರೆ. ನಾವಾದರೂ ಸಂಬಳವಿಲ್ಲದೆ ಎಷ್ಟು ದಿನ ಕೆಲಸ ಮಾಡೋದು? ಇಂದು ಸರಿಹೋಗುತ್ತದೆ, ನಾಳೆ ಸರಿ ಹೋಗುತ್ತದೆ ಎಂದು ನಾವು ಅಂದುಕೊಳ್ಳುತ್ತಲೇ ಏಳು ತಿಂಗಳು ಕಳೆದು ಹೋಗಿದೆ. ಹೀಗಾಗಿ ನಾವು ಈಗ ಕ್ಯಾಂಟೀನ್ಗೆ ಬೀಗ (Indira Canteens locked) ಜಡಿದು ಪ್ರತಿಭಟನೆಯನ್ನು ಮಾಡಿದ್ದೇವೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗುತ್ತಿಗೆದಾರರು ಏನಂತಾರೆ?
ಒಂದು ವರ್ಷದಿಂದ ನಮಗೆ ಸರ್ಕಾರದಿಂದ ಹಣ ಬರುತ್ತಿಲ್ಲ ಎಂದು ಗುತ್ತಿಗೆದಾರರು ಆರೋಪ ಮಾಡುತ್ತಾರೆ. ಸರ್ಕಾರದವರು ಅನುದಾನ (Government Grants) ಕೊಟ್ಟರೆ ತಾನೇ ನಾವು ಕ್ಯಾಂಟೀನ್ ನಡೆಸೋಕೆ ಆಗೋದು? ಎಂದು ಪ್ರಶ್ನೆ ಮಾಡುತ್ತಾರೆ. ನಾವು ಎಲ್ಲಿಂದ ಹಣ ತಂದು ಹಾಕೋಕೆ ಆಗುತ್ತದೆ. ಒಂದೆರೆಡು ತಿಂಗಳು ಕ್ಯಾಂಟೀನ್ ಅನ್ನು ನಮ್ಮ ಕೈಯಿಂದ ಹಣ ಹಾಕಿ ನಡೆಸಿದ್ದೇವೆ. ಒಂದು ವರ್ಷ ಪೂರ್ತಿ ನಾವೇ ಹಣ ಹಾಕಿ ಕ್ಯಾಂಟೀನ್ ನಡೆಸಲು ಆಗುತ್ತಾ? ಅದಕ್ಕೆ ನಾವು ಸಿಬ್ಬಂದಿಗೆ ಪೇಮೆಂಟ್ ಮಾಡಿಲ್ಲ ಎಂದು ಕ್ಯಾಂಟೀನ್ ಗುತ್ತಿಗೆದಾರರು ಹೇಳುತ್ತಾರೆ.
ಗಬ್ಬೆದ್ದಿರುವ ಇಂದಿರಾ ಕ್ಯಾಂಟೀನ್
ಸ್ವಚ್ಛತೆ ಹಾಗೂ ನಿರ್ವಹಣೆ ಇಲ್ಲದೆ (No cleanliness and maintenance) ಈ ಇಂದಿರಾ ಕ್ಯಾಂಟೀನ್ ಗಬ್ಬೆದ್ದು ನಾರುತ್ತಿದೆ. ಇರುವ ಯಂತ್ರೋಪಕರಣಗಳ ನಿರ್ವಹಣೆಯೂ ಸರಿ ಇಲ್ಲ. ಅಡುಗೆ ಮಾಡುವ ಕೋಣೆಯಲ್ಲಿ ಕಸ ತುಂಬಿಕೊಂಡಿದೆ.
ಕಾಂಗ್ರೆಸ್ ಶಾಸಕರಿದ್ದರೂ ಈ ದುಸ್ಥಿತಿ
ಟಿ. ರಘುಮೂರ್ತಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಇಷ್ಟು ವರ್ಷದಲ್ಲಿ ಎರಡು ಬಾರಿ ಮಾತ್ರ ಕ್ಯಾಂಟೀನ್ಗೆ ಭೇಟಿ ನೀಡಿದ್ದಾರೆ. ಈಗ ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷಕ್ಕೆ ಸಾವಿರಾರು ಜನರ ತುತ್ತಿಗೆ ಕುತ್ತು ಬಂದಂತೆ ಆಗಿದೆ…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030