ಭೀಮಸಮುದ್ರದಲ್ಲಿ ಚರ್ಮಗಂಟು ರೋಗಕ್ಕೆ ತುತ್ತಾದ ಹಸುಎತ್ತುಗಳು ರೈತರು ಆತಂಕ
ಗುಡೇಕೋಟೆ: ತಾಲೂಕಿನ ಗುಡೇಕೋಟೆ ಹೊಬಳಿ ವ್ಯಾಪ್ತಿಯ ಭೀಮಸಮುದ್ರ ಗ್ರಾಮಗಳ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಉಲ್ಬಣಗೊಳ್ಳುತ್ತಿದ್ದು, ಈಗಾಗಲೆ 4 ಆಕಳು 2 ಎತ್ತುಗಳು ಪ್ರಾಣ ಕಳೆದುಕೊಂಡಿವೆ. ಹೀಗಾಗಿ ಗ್ರಾಮದ ರೈತರಲ್ಲಿ ಆತಂಕ ಮನೆ ಮಾಡಿದೆ.
ಇದೇ ಮೊದಲ ಬಾರಿಗೆ ಇಂಥದ್ದೊಂದು ಕಾಯಿಲೆ ಜಾನುವಾರುಗಳಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ತಾಲೂಕಿನ ಭೀಮಸಮುದ್ರ ಸೇರಿದಂತೆ ನಾನಾ ಹಳ್ಳಿಗಳಲ್ಲಿ ಕಳೆದ ವಾರದಿಂದ ಈಚೆಗೆ ಹೆಚ್ಚು ಬೆಲೆ ಬಾಳುವ ನಾಲ್ಕು ಹಸು ಎರಡು ಎತ್ತುಗಳು ಮೃತಪಟ್ಟಿವೆ.ಈ ಮಧ್ಯೆ ತಮ್ಮ ಎತ್ತುಗಳು ಚರ್ಮಗಂಟು ಕಾಯಿಲೆಗೆ ತುತ್ತಾಗುತ್ತಿರುವುದು ರೈತರನ್ನು ಇನ್ನಷ್ಟು ಅಧೀರರನ್ನಾಗಿಸುತ್ತಿದೆ.
ವೈರಸ್ನಿಂದ ಹೆಚ್ಚಬಹುದು ರೋಗ
ತಾಲೂಕಿನ ಜವಾರಿ ದನಗಳಲ್ಲಿ ಅದರಲ್ಲೂ ಎತ್ತುಗಳಿಗೆ ಹೆಚ್ಚಾಗಿ ಈ ಚರ್ಮಗಂಟು ಕಾಯಿಲೆ ಗಂಟು ಬಿದ್ದಿದೆ. ಇದಕ್ಕೂ ಮೊದಲು ಸಾಮಾನ್ಯವಾಗಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಕಂಡು ಬರುತ್ತಿತ್ತು. ಆದರೆ, ಈ ಬಾರಿ ಇದು ಹೊಸ ರೋಗವಾಗಿದ್ದು, ಯಾವುದೇ ವೈರಸ್ನಿಂದ ಇದು ಬರಬಹುದು ಎಂದು ಹೇಳಲಾಗುತ್ತಿದೆ. ಆರೋಗ್ಯವಾಗಿ ಇರುವ ಎತ್ತು, ಇದ್ದಕ್ಕಿದ್ದಂತೆ ಖಿನ್ನತೆಗೆ ಒಳಗಾಗಿ ಮೇವು ತಿನ್ನುವುದನ್ನು ಕಡಿಮೆ ಮಾಡುತ್ತದೆ. ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಂಡು ನಿಧಾನವಾಗಿ ಉಲ್ಬಣಗೊಂಡು ಒಂದು ದಿನ ಎತ್ತು ಮರಣ ಹೊಂದುತ್ತದೆ.
ಐದಾರು ಎತ್ತುಗಳ ಸಾವು
ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದ ರೈತ ಎ.ಜಾತಪ್ಪ.ಎನ್.ಸಿದ್ದಲಿಂಗಪ್ಪ ಅವರ 55 ಸಾವಿರ ರೂ. ಬೆಲೆ ಬಾಳುವ ಒಂದು ಎತ್ತು ಈ ಚರ್ಮಗಂಟು ರೋಗದಿಂದ ಮಂಗಳವಾರ.ಬುಧವಾರ.ಮೃತಪಟ್ಟಿವೆ. ಇದಕ್ಕೂ ಮೊದಲು ಆಕಳು ಮಾಲಿಕರಾದ ಕುಂಟಪ್ಪರ್ ಬಸವರಾಜ್.ಕಾನಮಡುಗು ವಿಜಯಪ್ಪ.ಕಾಟ್ರಳ್ಳಿ ಉಮ್ಮಣ್ಣ. ಎನ್ನುವ ರೈತರ ಎತ್ತು ಹಸುಗಳು ಕೂಡ ಇದೇ ರೋಗದಿಂದ ಮೃತಪಟ್ಟಿತ್ತು. ಹೀಗೆ ಒಂದೊಂದೇ ಎತ್ತುಗಳಿಗೆ ಈ ರೋಗ ಕಾಣಿಸಿಕೊಂಡು ಇದುವರೆಗೂ ಐದಾರು ಎತ್ತುಗಳು ಮೃತಪಟ್ಟಿವೆ.
ಚರ್ಮಗಂಟು ರೋಗ; ರೈತರಲ್ಲಿ ಆತಂಕ
ಮುನ್ನೆಚ್ಚರಿಕೆಗೆ ನಿರಾಸಕ್ತಿ
ಭೀಮಸಮುದ್ರ ಗ್ರಾಮದ ಜಾನುವಾರುಗಳಿಗೆ ಈ ಮೊದಲು ಇಂಥ ಕಾಯಿಲೆ ಕಾಣದ ರೈತರು, ತಮ್ಮ ಎತ್ತು ಅನಾರೋಗ್ಯ ಪೀಡಿತವಾಗುತ್ತಿದ್ದಂತೆ, ಚಿಕ್ಕಜೋಗಿಹಳ್ಳಿ ಪಶು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಪರ್ಯಾಸ ಎಂದರೆ, ಅವರಿಗೆ ಸರಿಯಾದ ಚಿಕಿತ್ಸೆ ದೊರೆತಿಲ್ಲ. ಈ ರೋಗದ ಬಗ್ಗೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಪಶುಪಾಲನೆ
ಕೂಡ್ಲಿಗಿ ತಾಲೂಕಿನಲ್ಲಿ ಪಶುಸಾಕಣೆ ಮುಖ್ಯ ಕಸುಬಾಗಿದ್ದು, ಬಹುತೇಕ ರೈತರು ಜಾನುವಾರುಗಳನ್ನು ಸಾಕಣೆ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಹಾಲು ಸಹಕಾರ ಸಂಘಗಳಿದ್ದು, ಒಂದೊಂದು ಕುಟುಂಬ ನಾಲ್ಕೈದು ಜರ್ಸಿ ಹಸುಗಳನ್ನು ರಕ್ಷಿಸಿಕೊಂಡು ಸುರಕ್ಷಿತವಾಗಿ ಸಾಕುತ್ತಿದ್ದಾರೆ. ಆದರೆ, ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಿದೆ ಎನ್ನುವ ಸುದ್ದಿ ಅವರನ್ನು ಪಾತಾಳಕ್ಕಿಳಿಯುವಂತೆ ಮಾಡಿದೆ. ಹಾಗಾಗಿ ಪಶುಇಲಾಖೆ ಹೆಚ್ಚಿನ ಅನಾಹುತ ಆಗುವುದಕ್ಕಿಂತ ಮೊದಲು ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ಸರಕಾರ ಪರಿಹಾರ ನೀಡಲಿ.
ಕೃಷಿ ಚಟುವಟಿಕೆಗೆ ಅಗತ್ಯವಾದ ಎತ್ತುಗಳು ಕಾಯಿಲೆಯಿಂದ ಮೃತಪಟ್ಟರೆ ಸರಕಾರ ಪರಿಹಾರ ಧನವನ್ನು ವಿತರಣೆ ಮಾಡಬೇಕು. ಈಗಾಗಲೆ ಕುರಿ ಮೇಕೆಗಳು ಮೃತಪಟ್ಟರೆ ಪರಿಹಾರ ನೀಡಲಾಗುತ್ತಿದೆ. ಆದರೆ, ರೈತನ ಬದುಕಿಗೆ ಆಧಾರವಾದ ಎತ್ತುಗಳು ಮೃತಪಟ್ಟರೆ ಇವುಗಳಿಗೂ ಪರಿಹಾರ ಧನ ನೀಡುವ ಮೂಲಕ ರೈತರ ಕೈಹಿಡಿಯಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.
ಎತ್ತುಗಳಿಗೆ ಕಾಲುಬಾಯಿ ರೋಗ ಬರುವುದನ್ನು ನೋಡುತ್ತಿದ್ದೆವು. ಅಲ್ಲದೆ, ಈ ರೋಗಕ್ಕೆ ಮನೆ ಮದ್ದನ್ನು ಕೊಡುತ್ತಿದ್ದೆವು. ಈಗ ಎತ್ತುಗಳಿಗೆ ಚರ್ಮ ಗಂಟಾಗುವ ಕಾಯಿಲೆ ಬಂದಿದ್ದು, ಇದರಿಂದ ಎತ್ತುಗಳು ಸಾಯುತ್ತಿವೆ. ಇದಕ್ಕೆ ಏನು ಮಾಡಬೇಕೆನ್ನುವುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಇಲಾಖೆಯವರು ಇತ್ತ ಕಡೆ ಗಮನಹರಿಸಬೇಕು.ಅಂಗಡಿ ಶಶಿಕುಮಾರ್.ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತಾಲೂಕು ಸಂಚಾಲಕರು.ಭೀಮಸಮುದ್ರ…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030