ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳ ಜೊತೆ ಡಿ.ಸಿ. ಸಭೆ:
ಅಕ್ರಮ ಹಣ ಮತ್ತು ಉಚಿತ ಉಡುಗರೆ ಮೇಲೆ ಹದ್ದಿನ ಕಣ್ಣಿಡಿ
-ಬಿ.ಫೌಜಿಯಾ ತರನ್ನುಮ್
ಕಲಬುರಗಿ, ಲೋಕಸಭೆ ಚುನಾವಣೆಯ ಎಂ.ಸಿ.ಸಿ. ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಕ್ರಮ ಹಣ ಸಾಗಾಟ ಮತ್ತು ಉಚಿತ ಉಡುಗರೆ (ಫ್ರೀಬೀಸ್) ಮೇಲೆ ಹದ್ದಿನ ಕಣ್ಣಿಡಬೇಕೆಂದು ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಖಡಕ್ ಸೂಚನೆ ನೀಡಿದರು.
ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಆದಾಯ, ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು ಎಂದರು.
ಚೆಕ್ ಪೋಸ್ಟ್ಗಳಲ್ಲಿ 10 ಲಕ್ಷ ರೂ. ಅಧಿಕ ಮೊತ್ತದ ಹಣ ದೊರೆತಲ್ಲಿ ಮುಂದಿನ ತನಿಖೆಗೆ ಆದಾಯ ತೆರಿಗೆ ಇಲಾಖೆಗೆ ವಹಿಸಲಾಗುತ್ತದೆ. ಆದರಿಂದ ಆದಾಯ ತೆರಿಗೆ ಅಧಿಕಾರಿಗಳು ಇಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೆ ಸ್ಥಳಕ್ಕೆ ಧಾವಿಸಬೇಕು ಎಂದರು.
ಇನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವೇರ್ ಹೌಸ್ ಪರಿಶೀಲನೆ ಮಾಡಬೇಕು. ನೂರಾರು, ಸಾವಿರಾರು ಸಂಖ್ಯೆಯಲ್ಲಿ ಮತದಾರರಿಗೆ ಆಮೀಷಕ್ಕಾಗಿ ನೀಡಲಾಗುವ ಉಚಿತ ಉಡುಗರೆ ವಸ್ತುಗಳ ಮೇಲೆ ನಿಗಾ ಇಡಬೇಕು. ಆದಾಯ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಎಂ.ಸಿ.ಸಿ. ಕಟ್ಟುನಿಟಾಗಿ ಪಾಲಿಸಬೇಕು ಎಂದರು.
ಚಾರ್ಟರ್ ಪ್ಲೇನ್ ಬಂದಲ್ಲಿ ಮಾಹಿತಿ ಕೊಡಿ:
ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಉಪನಿರ್ದೇಶಕ ಕೃಷ್ಣರಾವ್ ಮಾತನಾಡಿ ಜಿಲ್ಲೆಗೆ ಸ್ಟಾರ್ ಕ್ಯಾಂಪೇನರ್ ಗಳು ಚಾರ್ಟರ್ ಪ್ಲೇನ್ ಮೂಲಕ ಆಗಮಿಸಿದಾಗ ನಮಗೆ ಮಾಹಿತಿ ನೀಡಿದಲ್ಲಿ ಏರ್ಪೋರ್ಟ್ ನಲ್ಲಿಯೇ ತನಿಖೆ ಮಾಡಲಾಗುವುದು ಎಂದು ಡಿ.ಸಿ ಅವರಲ್ಲಿ ಕೇಳಿದರು. ಇದಕ್ಕೆ ಡಿ.ಸಿ., ಪೊಲೀಸ್ ಆಯುಕ್ತರು ಸಮ್ಮತ್ತಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಸಿ.ಎಸ್.ನಾರಾಯಣ ಮಾತನಾಡಿ, ಜಿಲ್ಲೆಗೆ ನೆರೆಯ ತೆಲಂಗಾಣಾ, ಮಹಾರಾಷ್ಟ್ರ ಗಡಿಯಿಂದ ಬರುವ ವಾಹನಗಳ ಮೇಲೆ ವಿಶೇಷ ಗಮನ ಹರಿಸಿದ್ದೇವೆ. ಓರ್ವ ಜಂಟಿ ನಿರ್ದೇಶಕರು, ಇಬ್ಬರು ಉಪನಿರ್ದೇಶಕರು, 10 ಜನ ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ತಪಾಸಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ಫ್ರೀಬೀಸ್ ವಸ್ತುಗಳ ಮೇಲೆ ನಿಗಾ ಇಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಆದಾಯ ತೆರಿಗೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಇದ್ದರು….
ವರದಿ. ಸುನಿಲ್ ಮೇತ್ರಿ, ಬೀದರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030