ಚಳ್ಳಕೆರೆ ಹಲವೆಡೆ ಗುರುವಾರ ಆಚರಿಸಲಿರುವ ಮಕರ ಸಂಕ್ರಾಂತಿ ಹಬ್ಬಕ್ಕೆ ಬೆಲೆ ಏರಿಕೆ ಲೆಕ್ಕಿಸದೇ ಕಬ್ಬು, ಎಳ್ಳು-ಬೆಲ್ಲ, ರೊಟ್ಟಿ ಖರೀದಿಸಲು ಜನರು ಮುಂದಾದರು.
ಹಬ್ಬಕ್ಕೆ ಕಬ್ಬನ್ನು ಖರೀದಿಸುವ ಸಂಪ್ರದಾಯ ಇರುವ ಕಾರಣ ನಗರದ ಮಾರುಕಟ್ಟೆಗೆ ಮೂರು ದಿನ ಮುಂಚಿತವಾಗಿಯೇ ಕಬ್ಬು ಲಗ್ಗೆ ಇಟ್ಟಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಬ್ಬನ್ನು ತಂದು ಮಾರಾಟ ಮಾಡಲು ಅನೇಕರು ಮುಂದಾಗಿದ್ದರು. ವ್ಯಾಪಾರಸ್ಥರು ಮಂಡ್ಯದಿಂದ ಹೆಚ್ಚಾಗಿ ಕಬ್ಬು ತರಿಸಿದ್ದರು.
ಪಾವಗಡ ರಸ್ತೆ . ವೃತ್ತ ಮುಂಭಾಗ.ಕೆ. ಎಸ್ ಆರ್ ಟಿ ಸಿ ಮುಂಬಾಗ ಸೇರಿ ವಿವಿಧೆಡೆ ಬುಧವಾರ ಬೆಳಿಗ್ಗೆಯಿಂದಲೇ ಮಾರಾಟ ಜೋರಾಗಿ ನಡೆಯಿತು. ಜೋಡಿ ಕಬ್ಬು ₹ 100, ₹ 80, ₹ 40ರಂತೆ ಮಾರಾಟವಾದವು ಕೆಲ ವ್ಯಾಪಾರಸ್ಥರ ಬಳಿ ಗ್ರಾಹಕರು ಚೌಕಾಸಿಗೂ ಇಳಿದರು . ಪ್ರಾವಿಜನ್ ಸ್ಟೋರ್ ಗಳಲ್ಲಿ ಎಳ್ಳು ಬೆಲ್ಲ ಖರೀದಿ ಸಹ ಜೋರಾಗಿ ನಡೆಯುತ್ತಿತ್ತು.
ಹಬ್ಬದ ಅಂಗವಾಗಿ ಬೆಳಿಗ್ಗೆ ಮನೆಯಲ್ಲಿ ಪೂಜೆ ಸಲ್ಲಿಸಿ, ದೇಗುಲಗಳಿಗೆ ಭೇಟಿ ನೀಡಿ ಭಕ್ತಿ ಸಮರ್ಪಿಸುತ್ತಾರೆ. ನಂತರ ಸಂಬಂಧಿಕರಿಗೆ, ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ ಎಳ್ಳು ಬೀರುವ ಪದ್ಧತಿ ಇದೆ. ಅದಕ್ಕಾಗಿ ಎಳ್ಳು ಪೊಟ್ಟಣಗಳ ಸಿದ್ಧತೆಯಲ್ಲೂ ಮಹಿಳೆಯರು ಉತ್ಸುಕತೆ ತೋರಿದರು.
ಅಂಗಡಿಗಳ ಬಳಿ ಎಳ್ಳು, ಬೆಲ್ಲ, ಸಕ್ಕರೆ ಸಿದ್ಧ ಪೊಟ್ಟಣಗಳ ಖರೀದಿಗೂ ಮಹಿಳೆಯರು ಮುಂದಾದರು.
ಸುಗ್ಗಿ ಸಂಕ್ರಮಣವನ್ನು ಸಂಭ್ರಮದಿಂದ ಆಚರಿಸಲು ಹಳ್ಳಿಗಳಲ್ಲೂ ಸಿದ್ಧತೆಗಳು ಕಂಡು ಬಂದವು. ಒಂದು ದಿನ ಮುಂಚಿತವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದಾಡಿದವು. ಸಂಬಂಧಿಕರಿಗೆ, ಸ್ನೇಹಿತರಿಗೆ, ಆತ್ಮೀಯರಿಗೆ, ಹಿತೈಷಿಗಳಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
‘ಎಳ್ಳು ಬೆಲ್ಲ ಸವಿಯುತ್ತಾ, ಕಬ್ಬಿನ ಸಿಹಿಯ ಹೀರುತ್ತಾ, ದ್ವೇಷ, ಅಸೂಹೆ ಮರೆಯುತ್ತಾ, ಸವಿ ಮಾತುಗಳನ್ನು ನುಡಿಯೋಣ..’ ಹೀಗೆ ಇನ್ನೂ ಅನೇಕ ರೀತಿಯ ಮಕರ ಸಂಕ್ರಾಂತಿಯ ಸಂದೇಶಗಳು ವಾಟ್ಸ್ಆಯಪ್, ಸ್ಟೇಟಸ್, ಫೇಸ್ಬುಕ್ಗಳಲ್ಲಿ ಹರಿದಾಡಿದವು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030