ಗ್ರಂಥಾಲಯದಲ್ಲಿ ಕುಡಿಯುವ ನೀರು, ವಿದ್ಯುತ್ ಬ್ಯಾಟರಿ ವ್ಯವಸ್ಥೆ ಮಾಡಿ ಓದುಗರ ಒತ್ತಾಸೆ.
ಸಿಂಧನೂರು : ನಗರದ ಪ್ರವಾಸಿ ಮಂದಿರದ ಬಳಿ ಹೊಸ ಶಾಖಾ ಗ್ರಂಥಾಲಯ 40 ರಿಂದ 50 ಜನ ಮತ್ತು ಹಳೆ ಗ್ರಂಥಾಲಯದಲ್ಲಿ 50 ರಿಂದ 60 ಜನ ಓದುಗರು ಪ್ರತಿ ನಿತ್ಯ ಬರುತ್ತಾರೆ. ಆದರೆ ಗ್ರಂಥಾಲಯಗಳಲ್ಲಿ ಶುದ್ಧ ಕುಡಿಯುವ ನೀರಿನ ಪಿಲ್ಟರ್ ಇದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ, ವಿದ್ಯುತ್ ಕಡಿವಾದಾಗ ಕತ್ತಲಲ್ಲಿಯೇ ಸುಮ್ಮನೆ ಕುಳಿತುಕೊಳ್ಳುವ ಅಥವಾ ಮೊಬೈಲ್ ಟಾರ್ಚ್ ಹಾಕಿಕೊಂಡು ಓದಿಕೊಳ್ಳುವ ಪರಿಸ್ಥಿತಿಯಾಗಿದೆ. ವಿದ್ಯುತ್ ಕಡಿತವಾದಾಗ ಒಂದು ಯುಪಿಎಸ್ ಅಥವಾ ಬ್ಯಾಟರಿ ಅಳವಡಿಸಿಲ್ಲ, ವಿದ್ಯುತ್ ಸೌಲಭ್ಯ, ಶುದ್ಧ ಕುಡಿಯುವ ನೀರು, ಕಲ್ಪಿಸಬೇಕೆಂಬುದು ಓದುಗರ ಒತ್ತಾಸೆಯಾಗಿದೆ.
ನಗರದ 2 ಗ್ರಂಥಾಲಯಗಳಲ್ಲಿ ಗ್ರಂಥ ಪಾಲಕರು, ಸಹಾಯಕ ಗ್ರಂಥಪಾಲಕರು, ಗ್ರಂಥಾಲಯ ಸಹಾಯಕ, ಶುಚಿಗಾರರು ಇದ್ದಾರೆ. ಆದರೆ ಸಿಬ್ಬಂದಿಗಳು ಸರಿಯಾಗಿ ಗ್ರಂಥಾಲಯಕ್ಕೆ ಬರದೇ, ನನಗೆ ಅಲ್ಲಿ ಕೆಲಸ ಇದೆ,ಇಲ್ಲಿ ಕೆಲಸ ಇದೇ ಎಂದು ಹೇಳಿ ಬರೀ ಸ್ವತ್ಛತಾ ಸಿಬ್ಬಂದಿ ಮೇಲೆ ಬಿಟ್ಟಿರುವ ಆರೋಪಗಳು ಕೇಳಿ ಬರುತ್ತಿವೆ.
ಈ ಬಗ್ಗೆ ವಿದ್ಯುತ್ ಕಡಿತವಾದಾಗ ಯಾಕೆ ಬೆಳಕಿನ ವ್ಯವಸ್ಥೆ ಮಾಡಿಲ್ಲ ಎಂದು ಗ್ರಂಥ ಪಾಲಕ ವಿಶ್ವನಾಥ್ ಕುಲಕರ್ಣಿಯನ್ನು ಕೇಳಿದಾಗ ಬ್ಯಾಟರಿ ಸುಟ್ಟು ಹೋಗಿದೆ,ಇದರ ಬಗ್ಗೆ ಮೇಲಾದಿಕಾರಿಗಳ ಗಮನಕ್ಕೆ ತಂದಿದ್ದೇನೆ ಮಾಡಿಕೊಡೋಣ ಎಂದು ಹೇಳಿದ್ದಾರೆ. ಅವರು ಅನುದಾನ ನೀಡಿದರೆ ಬ್ಯಾಟರಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ತರಹದ ಅನುದಾನವಿರುವುದಿಲ್ಲ, ಗ್ರಂಥಾಲಯಗಳಲ್ಲಿ ಓದುಗರಿಗೆ ಸೌಲಭ್ಯ ಕಲ್ಪಿಸಲು ಎರಡು ಬಾರಿ ಸಣ್ಣ ಪುಟ್ಟ ಕೆಲಸ ಮಾಡಲು ನನ್ನ ಕೈಯಿಂದ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿದ್ದೀವಿ, ಅದು ಇಲ್ಲಿಯವರೆಗಾದರೂ ನೀಡಿಲ್ಲ ಹಣ ಕೊಡದಿದ್ದಾಗ ನಾನು ಎಲ್ಲಿಯವರೆಗೆ ರಿಪೇರಿ ಮಾಡಸಲಿ ಎಂದು ನಮ್ಮನ್ನೇ ಪ್ರಶ್ನೆ ಮಾಡಿದರು, ಇನ್ನೊಂದು ಬಾರಿ ತಿಳಿಸಿ ಒಂದು ವಾರದೊಳಗೆ ಸರಿಮಾಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನಗರದ ಪಿ.ಡಬ್ಲೂ.ಡಿ ಕ್ಯಾಂಪಿನ್ ಜೂನಿಯರ್ ಕಾಲೇಜು ಪಕ್ಕದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಉದ್ಘಾಟನೆ ಮಾಡಿದ್ದಾರೆ. ಗ್ರಂಥಾಲಯದಲ್ಲಿ ಮಕ್ಕಳಿಗೆ ಓದುವ ಪುಸ್ತಕಗಳು ಸೇರಿದಂತೆ ಕಂಪ್ಯೂಟರ್ ಜ್ಞಾನವನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಅಲ್ಲಿಗೆ ಯಾಕೆ ಓದಿಕೊಳ್ಳಲು ಹೋಗುತ್ತಿಲ್ಲ ಎಂದು ವಿಧ್ಯಾರ್ಥಿಗಳನ್ನು ಪ್ರಶ್ನೆ ಮಾಡಿದರೆ, ಇಲ್ಲಾ ಸರ್ ನಮ್ಮ ಎಲ್ಲಾ ಶಾಲಾ ಕಾಲೇಜುಗಳು ನಗರದಲ್ಲಿವೇ ಅಲ್ಲಿಗೆ ಹೋಗಲು ದೂರವಾಗುತ್ತದೆ ಮತ್ತು ನಮಗೆ ಇಂದಿರಾ ಕ್ಯಾಂಟೀನ್ ಹತ್ತಿರ ಇರುವುದರಿಂದ ಊಟಕ್ಕೆ ಬಹಳ ಅನುಕೂಲವಾಗಿದೆ ಎಂದು ತಮಗಾದ ಅನಾನೂಕೂಲದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಗ್ರಂಥಾಲಯ ನಿರ್ವಹಣೆಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಶಾಖಾ ಗ್ರಂಥಾಲಯಗಳ ನಿರ್ವಹಣೆಗೆ ಸರ್ಕಾರದಿಂದ ಯಾವುದೇ ಪ್ರತ್ಯೇಕಅನುದಾನವಿಲ್ಲ. ತಾಲೂಕಿನ ಕೆಲವೊಂದು ಸರ್ಕಾರಿ ಕಚೇರಿಗಳಲ್ಲಿ ಎಸಿ, ವಿದ್ಯುತ್ ಕಡಿತವಾದಾಗ ಬ್ಯಾಟರಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಇದೆ. ಆದರೆ ಬಡವರ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಓದಿಕೊಳ್ಳುವ ಗ್ರಂಥಾಲಯಗಳಿಗೆ ಮಾತ್ರ ಅನುಧಾನವಿಲ್ಲ ಎಂಥಾ ವಿಪರ್ಯಾಸ ನೋಡಿ.
ನಗರದ ಶಾಖಾ ಗ್ರಂಥಾಲಯಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ಷೇತ್ರದ ಜನಪ್ರತಿನಿಧಿಗಳು ಅಥವಾ ನಗರಸಭೆಯವರಾದರೂ ಮುಂದಾಗುತ್ತಾರ ಕಾದು ನೋಡಬೇಕಾಗಿದೆ…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030