ಎಪಿಎಂಸಿಯ ಶ್ರಮಿಕ ಭವನದಲ್ಲಿ ಜೂನ್ 20 ಅಖಿಲ ಭಾರತ ಮಹಾ ಅಧಿವೇಶದ ತಾಲೂಕು ಸಮ್ಮೇಳನ.
ಸಿಂಧನೂರು : ಜೂನ್ 17.ಸಿಪಿಐ(ಎಂಎಲ್)ರೆಡ್ ಸ್ಟಾರ್ ಜನ ಸಾಮಾನ್ಯರ ಅದರಲ್ಲೂ ದುಡಿಯುವ ವರ್ಗಗಳಾದ, ರೈತ ಕಾರ್ಮಿಕರ ಪಕ್ಷವಾಗಿದೆ. ಮಹಿಳೆಯರು, ದಲಿತರು, ಆದಿವಾಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಹೋರಾಟದ ವೇದಿಕೆಯಾಗಿದೆ. ಶೋಷಕ ವರ್ಗಗಳಾದ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಹಾಗೂ ಭೂಮಾಲೀಕ ಮತ್ತು ಅಧಿಕಾರಶಾಹಿಯ ವಿರುದ್ಧ ಶೋಷಿತ ಜನರನ್ನು ಜಾಗೃತಿಗೊಳಿಸಿ ಇವರ ಒಗ್ಗಟ್ಟಿನ ಹೋರಾಟಕ್ಕೆ ನಮ್ಮ ಪಕ್ಷವು ಆದ್ಯತೆ ನೀಡುತ್ತಾ ಬಂದಿದೆ. ಈ ಹೊತ್ತಿನಲ್ಲಿ ಅಖಿಲ ಭಾರತ ಮಹಾ ಅಧಿವೇಶನ ಹಾಗೂ ರಾಜ್ಯ ಸಮ್ಮೇಳನದ ಭಾಗವಾಗಿ ಜೂನ್ 20 ಸೋಮವಾರದಂದು ಸಿಂಧನೂರು ತಾಲೂಕು ಸಮ್ಮೇಳನವನ್ನು ಎಪಿಎಂಸಿಯ ಶ್ರಮಿಕ ಭವನದಲ್ಲಿ ಜರುಗುತ್ತದೆ ಎಂದು ಸಿಪಿಐ(ಎಂಎಲ್)ನ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ ತಿಳಿಸಿದರು.
ನಗರದ ಎಪಿಎಂಸಿ ಹೊಸ ಗಂಜ್ ನ ಶ್ರಮಿಕ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಅಧಿಕಾರದಲ್ಲಿದೆ. ಇದು ರಾಷ್ಟ್ರೀಯ ಸರಕಾರವೂ ಅಲ್ಲ ಹಾಗೂ ಜನರ ಸರಕಾರವೂ ಅಲ್ಲ ಎಂದು ಪದೇ ಪದೇ ಸಾಬೀತಾಗಿದೆ. ಈ ಸರಕಾರವು ಕಾರ್ಪೋರೆಟ್ ಬಂಡವಾಳಿಗರ,ದೊಡ್ಡ ಭೂ ಮಾಲೀಕರ ಸರಕಾರವಾಗಿ, ಬಹುಸಂಖ್ಯಾತ ಹಿಂದುಗಳ ಹೆಸರಲ್ಲಿ ಬ್ರಾಹ್ಮಣವಾದ ಹಾಗೂ ಮನುಸ್ಮೃತಿಯನ್ನು ಜಾರಿ ಮಾಡುತ್ತಿರುವ, ಜಾತಿ ವ್ಯವಸ್ಥೆಯನ್ನು ಸಂರಕ್ಷಿಸುವ, ಮಹಿಳೆ ಹಾಗೂ ದಲಿತರನ್ನು ಗುಲಾಮರನ್ನಾಗಿ ಉಳಿಸುವ ಸರಕಾರವಾಗಿದೆ. ಪುರಷನಿಗೆ ಮಹಿಳೆ ಸಮಾನಳಲ್ಲ ಎಂದು ಇದು ಹೇಳುತ್ತದೆ. ಕೆಳ ಜಾತಿಯ ಜನರು ಸಮಾನತೆಯನ್ನು ಅನುಭವಿಸಬಾರದು ಎಂದು ಸಾರುತ್ತದೆ. ಅಷ್ಟೇ ಅಲ್ಲ, ದೇಶದ ಸಂಪತ್ತಿನ ಎರಡು ಆಧಾರ ಸ್ಥಂಬಗಳಾದ ರೈತಾಪಿ ವರ್ಗವನ್ನು ಹೊಸ ಕೃಷಿ ಕಾಯ್ದೆಗಳ ಮೂಲಕ ಮುಳುಗಿಸಲು ಮುಂದಾದ ಸರಕಾರವಿದು.! ಹಾಗೆಯೇ ದೇಶದ 50 ಕೋಟಿ ಕಾರ್ಮಿಕರ ಉದ್ಯೋಗ ಹಾಗೂ ವೇತನ ಭದ್ರತೆಯನ್ನು ಕಿತ್ತಿ ಹಾಕಿ, ಕಾರ್ಪೋರೇಟ್ ಬಂಡವಾಳಶಾಹಿ/ಮಾಲೀಕ ವರ್ಗದ ಕೂಲಿ ಆಳುಗಳಾಗಿ ಉಳಿಸಲು ಕಾರ್ಮಿಕರ 44 ಕಾಯ್ದೆಗಳ ಜಾಗದಲ್ಲಿ 4 ಹೊಸ ಕಾರ್ಮಿಕ ಕಾಯ್ದೆಗಳನ್ನು ತಂದ ಸರಕಾರವಿದು. ರಾಜ್ಯದಲ್ಲಿ ಕನಿಷ್ಟ ಬೆಂಬಲ ಬೆಲೆ ಖಾತ್ರಿ ಹಾಗೂ ಎಪಿಎಂಸಿಗಳಿಗಾಗಿ ಹೋರಾಡಬೇಕಾದ ದೊಡ್ಡ ಜವಾಬ್ದಾರಿ ಪಕ್ಷದ ಮೇಲಿದೆ. ಹಾಗೆಯೇ ಹೊಸ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವರೆಗೂ ಕಾರ್ಮಿಕರ ಐಕ್ಯ ಹೋರಾಟವನ್ನು ಕಟ್ಟಿ ಮುನ್ನಡೆಸುವ ಅತೀ ದೊಡ್ಡ ಹೊಣೆಯೂ ನಮ್ಮ ಮೇಲಿದೆ. ಒಟ್ಟಾರೆ ಈ ಫ್ಯಾಸಿಸ್ಟ್ ಸರಕಾರವನ್ನು ಕಿತ್ತೆಸೆಯುವ ಹೋರಾಟದಲ್ಲಿ ಮುಂದೆ ನಿಂತು, ಉಳಿದೆಲ್ಲ ಸಮಾನ ಶಕ್ತಿಗಳೊಂದಿಗೆ ಐಕ್ಯತೆ ಬಲಪಡಿಸುವ ಕಾರ್ಯಭಾರವು ನಮ್ಮ ಮುಂದಿದೆ. ಜನರ ಹಕ್ಕು ಹಾಗೂ ವಿಮೋಚನೆಗಾಗಿ, ದುಡಿಯುವ ನಮ್ಮ ಪಕ್ಷ ಸಂಘಟನೆಯನ್ನು ಸಮ್ಮೇಳನದ ಮೂಲಕ ಗಟ್ಟಿಗೊಳಿಸಿಕೊಂಡು ಮುಂದಾಗಬೇಕಾದದ್ದು ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ತಾಲೂಕಿನಲ್ಲಿ ಸಿಪಿಐಎಂಎಲ್ ಪಕ್ಷದ ತಾಲೂಕು ಸಮಿತಿ ಸಮಾನ ಮನಸ್ಕರ ಸಂಘಟನೆಗಳೊಂದಿಗೆ ಜನಪರ,ರೈತ , ಕಾರ್ಮಿಕರ, ದಲಿತ ಪರವಾದ, ಹೋರಾಟಗಳಲ್ಲಿ ಭಾಗವಹಿಸಿದ್ದಿದೆ.ಕೇಂದ್ರ ಸಮಿತಿ ಸದಸ್ಯ ಅಮೀರ ಅಲಿ ಹಾಗೂ ಜಿಲ್ಲಾ ಕಾರ್ಯದರ್ಶಿ ಜಿ.ಅಮರೇಶ ವೀಕ್ಷಕರಾಗಿ, ಹಾಗೂ ಸ್ಥಳೀಯ ಸಮಾನ ಮನಸ್ಕ ಸಂಘಟನೆಗಳ ಪ್ರಮುಖ ಮುಖಂಡರು ಸಮ್ಮೇಳನದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಸದಸ್ಯರಾದ ರೈತ ಕಾರ್ಮಿಕರು, ವಿದ್ಯಾರ್ಥಿ-ಯುವಜನರು, ಮಹಿಳೆಯರು ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಿಪಿಐ(ಎಂಎಲ್) ನ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಪಿಐ(ಎಂಎಲ್ )ತಾಲೂಕು ಕಾರ್ಯದರ್ಶಿ ಮಾಬುಸಾಬ ಬೆಳ್ಳಟ್ಟಿ, ತಾಲೂಕು ಸಮಿತಿ ಸದಸ್ಯರಾದ ಹೆಚ್.ಆರ್. ಹೊಸಮನಿ, ಅಂಬಣ್ಣ ಹಡಪದ, ದವಲಸಾಬ ಮುದಗಲ್, ರಾಜಾ ನಾಯಕ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030