ಗ್ರಾಮ ಪಂಚಾಯಿತಿಗಳ ಉಪ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ
ತಾಲೂಕು/ಗ್ರಾಮ ಮಟ್ಟದ ಉಸ್ತುವಾರಿ ಸಮಿತಿ ನೇಮಿಸಿ ಡಿಸಿ ಆದೇಶ
ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಅ.28ರಂದು ಹಡಗಲಿ ತಾಲೂಕಿನ ಮಾಗಳ ಗ್ರಾಮ ಪಂಚಾಯತಿಯ 1 ಸ್ಥಾನಕ್ಕೆ ಹಾಗೂ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮ ಪಂಚಾಯತಿಯ 1 ಸ್ಥಾನಕ್ಕೆ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಉಪ ಚುನಾವಣೆ-2022 ಯ ಮಾದರಿ ನೀತಿ ಸಂಹಿತೆಯು ಅ.13ರಿಂದ ಅ.31ರವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಕ್ಕೆ ಮಾತ್ರ ಜಾರಿಯಲ್ಲಿರುತ್ತದೆ. ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ಸಲುವಾಗಿ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಉಸ್ತುವಾರಿ ಸಮಿತಿ ನೇಮಿಸಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್.ಪಿ ಅವರು ಆದೇಶ ಹೊರಡಿಸಿದ್ದಾರೆ.
ತಹಶೀಲ್ದಾರರ ಉಸ್ತುವಾರಿಯಲ್ಲಿ ತಾಲೂಕು ಮಟ್ಟದ ಎಂ.ಸಿ.ಸಿ ತಂಡಗಳನ್ನು ರಚಿಸಲಾಗಿದೆ.
ತಂಡದಲ್ಲಿರುವ ಅಧಿಕಾರಿಗಳ ವಿವರ: ತಾಲೂಕು ನೋಡಲ್ ಅಧಿಕಾರಿಯಾಗಿ ತಹಶೀಲ್ದಾರರು, ತಾಲೂಕು ಮೇಲ್ವಿಚಾರಕರಾಗಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕರಾಗಿ ಸಂಬಂಧಪಟ್ಟ ಸಿಪಿಐ/ಪಿಎಸ್ಐ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ತಂಡದಲ್ಲಿರುತ್ತಾರೆ.
ಸದರಿಯವರು ಚುನಾವಣಾ ನಾಮಪತ್ರ ಸಲ್ಲಿಸುವ ದಿನಾಂಕದಿಂದಲೇ ಕಾರ್ಯ ಪ್ರವೃತ್ತರಾಗಲು ಮತ್ತು ಪ್ರತಿದಿನ ಪ್ರಗತಿಯನ್ನು ಎಂ.ಸಿ.ಸಿ ಮುಖ್ಯಸ್ಥರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಎಂ.ಸಿ.ಸಿ ತಂಡದ ತಾಲೂಕು ನೋಡಲ್ ಅಧಿಕಾರಿಗಳು ಚುನಾವಣೆ ಆಯೋಗವು ನೀಡಿರುವ ಮಾದರಿ ಚುನಾವಣೆ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ತೆಗೆದುಕೊಳ್ಳತಕ್ಕದ್ದು ಮತ್ತು ಯಾವುದೇ ಉಲ್ಲಂಘನೆಯ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಿ ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು. ಒಟ್ಟಾರೆ ಕ್ರೋಢೀಕೃತ ವರದಿಯನ್ನು ತಾಲ್ಲೂಕು ಮಟ್ಟದ ಮುಖ್ಯಸ್ಥರು ಪರಿಶೀಲಿಸಿ ಯಾವುದಾದರೂ ಉಲ್ಲಂಘನೆಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಏನಾದರು ಕ್ರಮ ಕೈಗೊಳ್ಳಲು ತೊಂದರೆ ಉಂಟಾದಲ್ಲಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ವಿಜಯನಗರದ ಜಿಲ್ಲಾ ಪೆÇಲೀಸ್ ಅಧೀಕ್ಷಕರನ್ನು ಸಂಪರ್ಕಿಸಿ ಸೂಕ್ತ ಕ್ರಮಕೈಗೊಳ್ಳುವುದು ಹಾಗೂ ಪ್ರತಿದಿನ ಉಲ್ಲಂಘನೆ ಪ್ರಕರಣಗಳ ಮಾಹಿತಿಯನ್ನು ತಪ್ಪದೇ ಈ ಕಚೇರಿಗೆ ಸಲ್ಲಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ…
ವರದಿ.ಗಣೇಶ್ ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030