ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನ
ಹೊಸಪೇಟೆ: ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯಡಿ ಬಳಕೆಯಾಗದ ಅನುದಾನದ ಉದ್ಯೋಗಿನಿ ಯೋಜನೆಯಡಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಸಂಕಷ್ಟಕ್ಕೊಳಾಗದ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯೋಗಿನಿ ಯೋಜನೆಯ ಪರಿಶಿಷ್ಟ ಪಂಗಡದ ಫಲಾನುಭವಿಗಳ ಅರ್ಹತೆಗಳು: 18 ವರ್ಷದಿಂದ 50 ವರ್ಷದ ಮಹಿಳೆಯರಾಗಿರಬೇಕು, ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ಕುಟುಂಬದ ವಾರ್ಷಿಕ ಆದಾಯ ರೂ. 40 ಸಾವಿರಕ್ಕೆ ಮೀರಿರಬಾರದು, ವಿಧವೆಯರು, ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ, ಅಂಗವಿಕಲ ಮಹಿಳೆಯರಿಗೆ ಹಾಗೂ ದೇವದಾಸಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು, ಸ್ವಯಂ ಉದ್ಯೋಗದಲ್ಲಿ ಸಾಕಷ್ಟು ಜ್ಞಾನ ಮತ್ತು ಅನುಭವ ಹೊಂದಿರಬೇಕು. ಹಾಗೂ ಯೋಜನಾ ವರದಿ ಕಡ್ಡಾಯವಾಗಿ ಲಗತ್ತಿಸಬೇಕು, ಬ್ಯಾಂಕನಿಂದ ಸಾಲ ನೀಡಲು ಒಪ್ಪಿದಲ್ಲಿ ಸಹಾಯಧನ ಬಿಡುಗಡೆ ಮಾಡಲಾಗುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ.50ರಷ್ಟು ಹಾಗೂ ಘಟಕ ವೆಚ್ಚ ಒಂದು ಲಕ್ಷದಿಂದ ಐದು ಲಕ್ಷಗಳವರೆಗೆ ವಿಶೇಷ ವರ್ಗದ ಮಹಿಳೆಯರಿಗೆ ಸಹಾಯಧನವನ್ನು ಬ್ಯಾಂಕ್ ಮಂಜೂರು ಮಾಡಿದ ಸಾಲದ ಮೊತ್ತಕ್ಕೆ ಅನುಗುಣವಾಗಿ ಸಹಾಯಧನವನ್ನು ನೀಡಲಾಗುವುದು.
ಸಲ್ಲಿಸಬೇಕಾದ ದಾಖಲಾತಿಗಳು: ವಯಸ್ಸಿನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಕೈಗೊಳ್ಳುವ ಆದಾಯೋತ್ಪನ್ನ ಚಟುವಟಿಕೆಗಳ ಯೋಜನಾ ವಿವರ, ವಾಸಸ್ಥಳ ಪ್ರಮಾಣ ಪತ್ರ, ವೋಟರ್ ಐಡಿ, ಆಧಾರ ಕಾರ್ಡ್, ಬ್ಯಾಂಕ ಪಾಸಪುಸ್ತಕ ಪ್ರತಿ, ಚಟುವಟಿಕೆಗೆ ಅನುಗುಣವಾಗಿ ಗ್ರಾಮಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಪಾಲಿಕೆ, ಮಹಾನಗರ ಪಾಲಿಕೆಗಳಲ್ಲಿ ಪರವಾನಿಗೆಯ ಪ್ರತಿಯನ್ನು ಹೊಂದಿರಬೇಕು.
ಆಸಕ್ತರು ಅರ್ಜಿಯನ್ನು ವಿಜಯನಗರ ಜಿಲ್ಲೆಯ ಆಯಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಪಡೆದು ಭರ್ತಿಮಾಡಿ ಅದೇ ಕಚೇರಿಯಲ್ಲಿ ಅ.18ರೊಳಗಾಗಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಉದ್ಯೋಗಿನಿ ಯೋಜನೆಯಡಿಯಲ್ಲಿ ಹೊಸಪೇಟೆ 3, ಕೂಡ್ಲಿಗಿ 2, ಕೊಟ್ಟೂರು 2, ಹರಪನಹಳ್ಳಿ 2, ಹಡಗಲಿ 2 ಹಾಗೂ ಹಗರಿಬೊಮ್ಮನಹಳ್ಳಿ 2 ಸೇರಿದಂತೆ ಒಟ್ಟು 13 ಭೌತಿಕ ಗುರಿಗಳನ್ನು ನಿಗಧಿಪಡಿಸಲಾಗಿದ್ದು, ಒಂದು ಗುರಿಗೆ 1.5ಲಕ್ಷದಂತೆ ಒಟ್ಟು19.5ಲಕ್ಷಗಳ ಸಾಲ ಮತ್ತು ಸಹಾಯಧನದ ಸೌಲಭ್ಯವನ್ನು ಫಲಾನುಭವಿಗಳಿಗೆ ಒದಗಿಸಿಕೊಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವರದಿ. ಗಣೇಶ್, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030