ಜಿಲ್ಲೆಯಲ್ಲಿ ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವ ಡಾ.ಹೆಚ್.ಎಲ್.ನಾಗರಾಜು
ಜಿಲ್ಲೆಯಲ್ಲಿ ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವನ್ನು ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆಯಲಿದೆ.ಕನ್ನಡ ರಾಜ್ಯೋತ್ಸವವು ಕನ್ನಡ ನಾಡು, ಕನ್ನಡ ಭಾಷೆಗೆ ಸಂಬಂಧಿಸಿರುವುದರಿಂದ ಯಶಸ್ವಿಯಾಗಿ ನಡೆಸಲು ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ರವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲಂಕೃತ ತಾಯಿ ಭುವನೇಶ್ವರಿಯ ಭಾವಚಿತ್ರದ ರಥದ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟು ಕಾರ್ಮೆಲ್ ಕಾನ್ವೆಂಟ್, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಮಾರ್ಗವಾಗಿ ಸಂಚರಿಸಿ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಸಮಾವೇಶಗೊಳಿಸುವಂತೆ ವ್ಯವಸ್ಥೆ ಮಾಡಿಕೊಳ್ಳಲು ಮೆರವಣಿಗೆ ಸಮಿತಿಗೆ ಸೂಚಿಸಿದರು.
ಮೆರವಣಿಗೆ ಉದ್ದಕ್ಕೂ ಅಗ್ನಿಶಾಮಕ ವಾಹನ ಹಾಗೂ ಆಂಬುಲೆನ್ಸ್ ವಾಹನದೊಂದಿಗೆ ವೈದ್ಯರು ಹಾಜರಿರುವಂತೆ ವ್ಯವಸ್ಥೆ ಮಾಡಬೇಕು ಎಂದರು.
ಕನ್ನಡ ರಾಜ್ಯೋತ್ಸವಚರಣೆಯನ್ನು ಉತ್ತಮವಾಗಿ ವಿಭಿನ್ನ ಹಾಗೂ ವಿಜೃಂಭಣೆಯಿಂದ ಆಚರಿಸಲು ಬೇಕಾದ ಎಲ್ಲಾ ರೀತಿಯ ಪೂರಕ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕಾವೇರಿ ಮಾತೆ,ಮಹಾತ್ಮ ಗಾಂಧೀಜಿ, ಡಾ.ಬಿ.ಆರ್ ಅಂಬೇಡ್ಕರ್ , ಬಾಬು ಜಗಜೀವನ್ ರಾಮ್, ಸರ್.ಎಂ ವಿಶ್ವೇಶ್ವರಯ್ಯರವರ ಪ್ರತಿಮೆ ಮತ್ತು ರಾಷ್ಟ್ರಕವಿ ಕುವೆಂಪು ಮುಂತಾದ ಎಲ್ಲಾ ನೇತಾರರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಜವಾಬ್ದಾರಿಯನ್ನು ನಗರಸಭೆಯ ಪೌರಾಯುಕ್ತರಿಗೆ ವಹಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆಯ ವ್ಯವಸ್ಥಿತ ನಿರ್ವಹಣೆಗಾಗಿ ಕೆಲವು ಉಪ ಸಮಿತಿಗಳನ್ನು ರಚಿಸಿ ಆಯಾ ಸಮಿತಿ ಅವರಿಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಉಪ ಸಮಿತಿ, ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ ಉಪ ಸಮಿತಿ, ಮೆರವಣಿಗೆ ಉಪಸಮಿತಿ, ವೇದಿಕೆ ವ್ಯವಸ್ಥೆ ಮತ್ತು ಶಿಷ್ಟಾಚಾರ ಪಾಲನೆ ಉಪಸಮಿತಿ ಬಗ್ಗೆ ಚರ್ಚಿಸಿ ಕಾರ್ಯ ನಿರ್ವಹಿಸಲು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 5 ಕಲಾತಂಡಗಳು, ಡೊಳ್ಳು ಕುಣಿತ, ಮಂಡ್ಯ ಜಿಲ್ಲೆಯ ಸ್ಥಳೀಯ ಕಲೆಯಾದ ಪೂಜಾ ಕುಣಿತ ಹಾಗೂ ಇತರ ಜಾನಪದ ಕಲೆಗಳನ್ನು ಆಯೋಜಿಸಿ ಎಂದರು.
ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಅಥವಾ ರಾಜ್ಯಮಟ್ಟದಲ್ಲಿ ಕ್ರೀಡೆ, ಸಮಾಜಸೇವೆ, ಪರಿಸರ ಸಾಹಿತ್ಯ, ರಂಗಭೂಮಿ ಹಾಗೂ ಇತರೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿರುವ ಜಿಲ್ಲೆಯ 10 ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿ ಎಂದು ಸೂಚನೆ ನೀಡಿದರು.
ಗಣ್ಯರ ಶಿಷ್ಟಾಚಾರ ಪಾಲನೆಯ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕನ್ನಡ ರಾಜ್ಯೋತ್ಸವವನ್ನು ಪ್ರತಿ ಕಚೇರಿಯಲ್ಲಿ ಆಚರಿಸಿ ಸಿಹಿ ಹಂಚುವ ವ್ಯವಸ್ಥೆ ಮಾಡಿ.ಜಿಲ್ಲಾಧಿಕಾರಿಗಳ ಕಚೇರಿಗೆ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಯ ಕಟ್ಟಡಗಳಿಗೆ ತಮ್ಮ ಇಲಾಖೆಯ ಹಂತದಲ್ಲಿ ವಿದ್ಯುತ್ ಅಲಂಕಾರ ಮಾಡಲು ಚೆಸ್ಕಾಂ ರವರಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಎನ್. ಉದಯ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್,
ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕರಾದ ಸ್ವಾಮಿಗೌಡ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು…
ಎಚ್ಚರಿಕೆ ಕನ್ನಡ ನ್ಯೂಸ್. ಮಂಡ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030