ವರದಿ.ನಳಿನಿ ಬೆಂಗಳೂರು
ಬೆಂಗಳೂರು(ಫೆ. 17): ರಾಜ್ಯಾದ್ಯಂತ ಇಂದು ಬೃಹತ್ ಐಟಿ ರೇಡ್ ನಡೆದಿದೆ. ತೆರಿಗೆ ವಂಚನೆಯ ಶಂಕೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬಿಜಿಎಸ್, ಸಪ್ತಗಿರಿ, ಆಕಾಶ್ ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ದೊಡ್ಡ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ಬೆಳಗ್ಗೆಯಿಂದಲೇ ದಾಳಿ ನಡೆಸಿದ್ದಾರೆ. ಶಾಮನೂರು ಶಿವಶಂಕರಪ್ಪ ಒಡೆತನದ ಕಾಲೇಜಿಗೂ ರೇಡ್ ಆಗಿದೆ. ಬೆಂಗಳೂರು, ತುಮಕೂರು, ದಾವಣಗೆರೆ, ಹಾಸನ, ಮಂಗಳೂರು, ದೇವನಹಳ್ಳಿ, ರಾಮನಗರ ಮೊದಲಾದ ಕಡೆ ಐಟಿ ಅಧಿಕಾರಿಗಳ ವಿವಿಧ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಆಸ್ಪತ್ರೆಯ ದಾಖಲಾತಿ, ಕಡತ ಇತ್ಯಾದಿಗಳನ್ನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ದಾಳಿಗೆ ಬಹಳ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿದ್ದ ಐಟಿ ಇಲಾಖೆ 150 ಇನ್ನೋವಾ ಕಾರುಗಳನ್ನ ಬೇರೆ ಕಾರಣಕೊಟ್ಟು ಕಚೇರಿಗೆ ತರಿಸಿಕೊಂಡಿತ್ತು.
ಈ 150 ಕಾರುಗಳಲ್ಲಿ 250ಕ್ಕೂ ಹೆಚ್ಚು ಅಧಿಕಾರಿಗಳು ಬೆಳಗ್ಗೆ 3ಗಂಟೆಗೇ ಸ್ಥಳ ಬಿಟ್ಟಿದ್ದಾರೆ. ಒಂದೊಂದು ಸ್ಥಳದಲ್ಲೂ ಎರಡರಿಂದ ಮೂರು ಕಾರುಗಳಲ್ಲಿ ಎಂಟು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಲ್ಲಿಯೂ ಗೌಪ್ಯತೆಗೆ ಲೋಪವಾಗದ ಹಾಗೆ ಏಕಕಾಲದಲ್ಲಿ ಈ ದಾಳಿಗಳಾಗಿರುವುದು ವಿಶೇಷ. ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಮೇಲೆ ಬೆಳಗ್ಗೆ 4:30ಕ್ಕೆ ಹದಿನೈದಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10 ತಿಂಗಳ ಆಸ್ಪತ್ರೆ ವ್ಯವಹಾರದ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.
ರಾಮಮಂದಿರ ನಿರ್ಮಾಣ: ದೇಣಿಗೆ ಸಂಗ್ರಹ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ; ಕುಮಾರಸ್ವಾಮಿ ಆರೋಪ
ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಮೇಲೆ 7 ಅಧಿಕಾರಿಗಳ ತಂಡ ದಾಳಿ ನಡೆಸಿತು. ಮಲ್ಲೇಶ್ವರದ 14ನೇ ಕ್ರಾಸ್ನಲ್ಲಿರುವ ಸಂಸ್ಥೆ ಮಾಲೀಕ ದಯಾನಂದ್ ಅವರ ಮನೆಯಲ್ಲೂ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಮಾಲೀಕ ಮುನಿರಾಜು ಅವರ ಬೆಂಗಳೂರು ಮನೆಯಲ್ಲಿ ಐಟಿ ಅಧಿಕಾರಿಗಳು ರೇಡ್ ಆಡಿದ್ದಾರೆ. ಬೆಳಗ್ಗೆ 6:30ಕ್ಕೆ ಅಡಿ ಇಟ್ಟ 8ಕ್ಕೂ ಹೆಚ್ಚು ಅಧಿಕಾರಿಗಳು ದಾಖಲಾತಿಗಳನ್ನ ಪರಿಶೀಲಿಸಿದ್ದಾರೆ.
ಮಂಗಳೂರಿನ ವಿವಿಧ ಉದ್ಯಮಿಗಳ ಮನೆಗಳ ಮೇಲೆ ಐಟಿ ರೇಡ್ ಆಗಿದೆ. ಎ.ಜೆ ಆಸ್ಪತ್ರೆ ಮಾಲೀಕ ಎ.ಜೆ. ಶೆಟ್ಟಿ, ಯುನೆಪೋಯ ಗ್ರೂಪ್ ಸಂಸ್ಥೆ ಮಾಲೀಕ ಅಬ್ದುಲ್ ಕುಂಞ, ಕಣಚೂರು ಗ್ರೂಪ್ ಸಂಸ್ಥೆ ಮಾಲೀಕ ಕಣಚೂರು ಮೋನು, ಶ್ರೀನಿವಾಸ ಗ್ರೂಪ್ ಆಫ್ ಎಜುಕೇಶನ್ ಸಂಸ್ಥೆಯ ಮಾಲೀಕ ಶ್ರೀನಿವಾಸರಾವ್ ಅವರ ಮನೆ, ಆಸ್ಪತ್ರೆ, ಕಚೇರಿ ಮೇಲೆ ಏಕಕಾಲದಲ್ಲಿ ದಾಳಿಯಾಗಿದೆ. ಯುನೇಪೋಯಾ ಆಸ್ಪತ್ರೆಯ ವೈದ್ಯರೊಬ್ಬರ ಮನೆ ಮೇಲೂ ಐಟಿ ತಂಡ ರೇಡ್ ಮಾಡಿ ಕಾಗದ ಪತ್ರಗಳನ್ನ ಪರಿಶೀಲಿಸಿತು. ರಾಮನಗರದಿಂದ ರೇಷ್ಮೆ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಫೆ. 20 ರಾಮನಗರ ಬಂದ್ಗೆ ಕರೆ
ತುಮಕೂರಿನಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಪರಿಷತ್ ಸದಸ್ಯ ಹುಲಿ ನಾಯ್ಕರ್ ಒಡೆತನದ ಶ್ರೀದೇವಿ ಶಿಕ್ಷಣ ಸಂಸ್ಥೆ ಸೇರಿದಂತೆ ಎಂಟು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ಧಾರೆ. ಬಹಳ ಮಾಹಿತಿ ಕಲೆಹಾಕಿ ಪೂರ್ವಯೋಜಿತವಾಗಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ದೇವನಹಳ್ಳಿಯಲ್ಲಿ 25 ಎಕರೆ ಪ್ರದೇಶದಲ್ಲಿರುವ ಆಕಾಶ್ ಗ್ರೂಪ್ನ ಸಂಸ್ಥೆಯ ಮೇಲೆ ದಾಳಿ ನಡೆದಿದೆ. ಸಂಸ್ಥೆಯ ಮಾಲೀಕ ಮುನಿರಾಜು ಅವರ ಬೆಂಗಳೂರು ನಿವಾಸದಲ್ಲೂ ಈ ವೇಳೆ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030