ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರೇ,ಮಸಣದ ಕಡೆ ಪಯಣ ಸಾಗುತ್ತಿರುವ ನಮ್ಮ ಮಾಧ್ಯಮದ ಮಿತ್ರರ ಕಡೆ ಒಮ್ಮೆ ಗಮನಹರಿಸಿ :- ವಾರ್ತಾ ಇಲಾಖೆ ಅಸ್ಥಿತ್ವಕ್ಕೆ ಬಂದು 75 ವರ್ಷ ಮೇಲ್ಪಟ್ಟು ಸಾಗುತ್ತಿದ್ದರೂ, ಸ್ವಾತಂತ್ರ್ಯ ಬಂದು ಕೂಲಿಕಾರರು ನೆಮ್ಮದಿಯಿಂದ ಜೀವನಸಾಗಿಸುತ್ತಿರುವಂತ ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವಂತ ಕಾರ್ಯನಿರತ ಪತ್ರಕರ್ತರುಗಳಿಗೆ ಇಂದಿಗೂ ಸ್ವಾತಂತ್ರ್ಯ ಸಿಗದಿರುವುದು ಈ ನಾಡಿನ ಪತ್ರಕರ್ತರ ದುರದೃಷ್ಟವೇ ಸರಿ. ಸರ್ಕಾರದ ಮುಖವಾಣಿಯಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಇದರ ಕೊಂಡಿಯಾಗಿ ಹಗಲಿರುಳು ಶ್ರಮಿಸುತ್ತಾ ನಾಡಿನ ಉದ್ದಗಲಕ್ಕೂ ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸೇತುವೆಯಾಗಿ ಪ್ರತಿಯೊಂದು ವರದಿಗಳನ್ನು ತಮ್ಮ ಪ್ರಾಣದ ಹಂಗನ್ನು ತೊರೆದು ನಿರ್ಭಯವಾಗಿ ಹಗಲಿರುಳು ಶ್ರಮಿಸುತ್ತಿದ್ದರೂ ಸರ್ಕಾರಕ್ಕೆ ಈ ಕುರಿತು ಅರಿವಿದ್ದರೂ ಜಾಣ ಕಿವುಡುತನ ಹಾಗೂ ಮೂಗತನಕ್ಕಿಳಿದಿರುವುದು ಮಾತ್ರ ವಿಷಾದನೀಯ. ಬೆಳಗಾವಿಯಲ್ಲಿ ನಮ್ಮ ಕಾನಿಪ ಧ್ವನಿಯಿಂದ ಹದಿಮೂರು ಜ್ವಲಂತ ಬೇಡಿಕೆಗಳನ್ನು ಇಟ್ಟುಕೊಂಡು ಧರಣಿ ನಡೆಸಿದ್ದರೂ ಸ್ವಲ್ಪವಾದರೂ ಬೊಮ್ಮಾಯಿ ಎಂಬ ಬಾಂಬೆ ಸರ್ಕಾರ ಕಿವಿಗೊಡದೇ,ಬಜೆಟ್ ನಲ್ಲಿ ಪತ್ರಕರ್ತರ ಸಮುದಾಯಕ್ಕೆ ಚೊಂಬನ್ನು ನೀಡಿದ್ದು ಬೊಮ್ಮಾಯಿ ಯವರ ದೊಡ್ಡ ಸಾಧನೆಯೇ ಸರಿ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಹಾಲಿ ಮುಖ್ಯಮಂತ್ರಿಗಳು ಅಂದು ವಿರೋಧ ಪಕ್ಷದ ನಾಯಕರಿದ್ದಂತ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಖುದ್ದಾಗಿ ಕಂಡು ವಿಷಯಗಳನ್ನು ಮನವರಿಕೆ ಮಾಡಿ ಮನವಿ ನೀಡಿದ್ದರೂ ಯಾಕೋ ಅಂದಿನ ಅಧಿವೇಶನದಲ್ಲಿ ಈ ಕುರಿತು ಧ್ವನಿ ಮೊಳಗಿಸಲಿಲ್ಲ. ಆದರೆ ಇಂದು ಸಿದ್ದರಾಮಯ್ಯ ನವರ ಸರ್ಕಾರ ಐದು ಗ್ಯಾರೆಂಟಿಯ ಭಾಗ್ಯಗಳನ್ನು ಕೋಟ್ಯಾಂತರ ರೂಗಳ ವೆಚ್ಚದಲ್ಲಿ ಭರಿಸುತ್ತಿರುವ ಈ ಸಂದರ್ಭದಲ್ಲಿ ಕೇವಲ ಹದಿನಾರು ಸಾವಿರ ಕಾರ್ಯನಿರತ ಪತ್ರಕರ್ತರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯಾ ಭಾಗದ ಜಿಲ್ಲೆಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ವಾರ್ತಾ ಇಲಾಖೆ ಕೇವಲ ಹದಿನಾರು ನೂರು ಪತ್ರಕರ್ತರಿಗೆ ಮಾತ್ರ ಅಕ್ರಿಡೇಷನ್ ನೆಪದಲ್ಲಿ ಬಸ್ ಪಾಸ್ ಹಾಗೂ ಇನ್ನೀತರ ಸೌಲಭ್ಯ ನೀಡುತ್ತಾ ಅಸ್ಪೃಶ್ಯತೆ ನೀತಿ ಜೊತೆಗೆ ತಾರತಮ್ಯ ಮಾಡುತ್ತಿದ್ದಾರೆ. ಸಮಾಜದಲ್ಲಿ ಹೆಚ್ಚಿನ ಹಲ್ಲೆಗಳು ಜರುಗುವುದು ಪತ್ರಕರ್ತರ ಮೇಲೆ ಈ ವಿಚಾರವಾಗಿ ಸರ್ಕಾರ ಕೂಡಲೇ ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿ ಮಾಡಬೇಕು. ಮಾಸಾಶನಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ದಿನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಮಾತ್ರ ನೀಡುತ್ತಿರುವುದು ಸರಿಯಾದ ಕ್ರಮವಲ್ಲ, ಇದನ್ನು ನಿಯತ ಕಾಲಿಕೆಗಳ ಪತ್ರಿಕೆಗಳಿಗೂ ಜಾರಿಗೊಳಿಸಬೇಕು ಹಾಗೂ ರಾಜ್ಯದಲ್ಲಿ ಸಾವಿರಾರು ಪತ್ರಕರ್ತರು ಸೇವೆ ಮಾಡಿ ಅರವತ್ತು ವರ್ಷಕ್ಕೆ ನಿವೃತ್ತಿಯಾಗಿದ್ದರೂ ಇಂದು ವಾರ್ತಾ ಇಲಾಖೆಯಿಂದ ಕೇವಲ ಬೆರಳೆಣಿಕೆಯ ಅಂದರೆ 167 ಜನ ಮಾತ್ರ ಮಾಶಾಸನ ಪಡೆಯುತ್ತಿರುವುದು ದುರ್ಧೈವದ ಸಂಗತಿ. ಸರ್ಕಾರ ರೂಪಿಸಿರುವ ಖಾಯಂ ನೇಮಕಾತಿ ಆದೇಶ ವಿದ್ದರೆ ಮಾತ್ರ ಮಾಶಾಸನದ ಮಾನದಂಡ. ಆದರೆ ಬಹುತೇಕ ಪತ್ರಿಕೆಯ ಮಾಲಿಕರು ತಮ್ಮಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಖಾಯಂ ನೇಮಕಾತಿ ಪತ್ರ ನೀಡದೇ ದಿಕ್ಕು ತಪ್ಪಿಸಿ ಅವರ ಜೀವನದ ಜೊತೆ ಚೆಲ್ಲಾಟ ವಾಡುತ್ತಿರುವುದು ಸುಳ್ಳಲ್ಲ. ಖಾಯಂ ನೇಮಕಾತಿ ಆದೇಶ ಪತ್ರ ವಿಲ್ಲದೇನೇ ಅನೇಕ ಪತ್ರಕರ್ತರು ಬೋಗಸ್ ಅಕ್ರಿಡೇಷನ್ ಪಡೆದಿರುವ ಕುರಿತು ನಮ್ಮ ಬಳಿ ದಾಖಲೆಗಳು ಇವೆ. ಈ ಕುರಿತು ತನಿಖೆ ಆಗಿ ಸತ್ಯಾಸತ್ಯತೆಗಳು ಹೊರ ಬರಬೇಕು. ಪತ್ರಕರ್ತರು ತಮ್ಮ ಜೀವನದುದ್ದಕ್ಕೂ ಹಗಲಿರುಳು ಸೇವೆ ಸಲ್ಲಿಸಿದ್ದರೂ ಕೂಡ ತಮ್ಮ ನಿವೃತ್ತಿಯ ನಂತರ ಅಂದರೆ ಅರವತ್ತು ವರ್ಷ ದಾಟಿದ ಮೇಲೆ ಅವರುಗಳು ಅನೇಕ ಖಾಯಿಲೆಗಳಿಂದ ಅನುಭವಿಸುವ ನೋವುಗಳು,ಚಿಕಿತ್ಸಾ ವೆಚ್ಚಾ ಹಾಗೂ ಔಷೋದೋಪಚಾರಕ್ಕಾಗಿ ಪರದಾಡುವ ಕಷ್ಟ ಯಾವ ವೈರಿಗೂ ಬೇಡದ ಈ ಸ್ಥಿತಿಯನ್ನು ಸರ್ಕಾರ ಗಮನಹರಿಸಬೇಕೆಂಬುದೇ ನಮ್ಮ ಸಂಘಟನೆಯ ಮುಖ್ಯ ಮಾನವೀಯ ಉದ್ದೇಶ. ಸಮಸ್ತ ಕಾರ್ಯನಿರತ ಪತ್ರಕರ್ತರ ಪರವಾಗಿ ನಮ್ಮ ಮೂಲಭೂತ ಸೌಲಭ್ಯ ಪಡೆಯುವುದಕ್ಕಾಗಿ ನಮ್ಮ ಕಾನಿಪ ಧ್ವನಿ ನಿಯೋಗ ಇಷ್ಟರಲ್ಲೇ ಮಾನ್ಯ ಮುಖ್ಯಮಂತ್ರಿ, ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆಯ ಆಯುಕ್ತರನ್ನು ಬೇಟಿಯಾಗಿ ಮುಕ್ತವಾಗಿ ಚರ್ಚಿಸಿ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿ ಕಾಲಾವಕಾಶ ನೀಡುತ್ತೇವೆ. ಒಂದು ವೇಳೆ ಪೂರಕ ಸ್ಪಂದನೆ ಸರ್ಕಾರದಿಂದ ಸಮಸ್ತ ಪತ್ರಕರ್ತರುಗಳಿಗೆ ಸಿಗದೇ ಇದ್ದರೇ ಕಾನೂನು ಹೋರಾಟ ಹೈಕೋರ್ಟ್ ನಲ್ಲಿ ಅನಿವಾರ್ಯ…
ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030