ಜಿ.ಪಂ ಸಿಇಒ ಅವರಿಂದ ಹಿರೇಹಳ್ಳ ಜಲಾಶಯಕ್ಕೆ ಭೇಟಿ: ಅಧಿಕಾರಿಗಳೊಂದಿಗೆ ಚರ್ಚೆ
ಕೊಪ್ಪಳ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಇಂದು ಹಿರೇಹಳ್ಳ ಜಲಾಶಯಕ್ಕೆ ಭೇಟಿ ನೀಡಿ, ಸ್ಥಳದಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಅಧಿಕಾರಿಗಳು ಯಲಬುರ್ಗಾ ಇವರೊಂದಿಗೆ ಕುಡಿಯುವ ನೀರಿನ ಬಗ್ಗೆ ಚರ್ಚಿಸಿದರು.
ಬರುವ ಬೇಸಿಗೆ ತೀವ್ರವಾಗಿದ್ದು, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು. ಹಿರೇಹಳ್ಳ ಜಲಾಶಯದಲ್ಲಿ 2 ಜಾಕ್ವೆಲ್ಗಳಿದ್ದು, ಅವುಗಳಲ್ಲಿ ಒಂದು ಯಲಬುರ್ಗಾ ಪಟ್ಟಣಕ್ಕೆ ಹಾಗೂ ಇನ್ನೊಂದು ಮಂಗಳೂರು ಸೇರಿದಂತೆ ಇತರೆ 3 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ 4 ತಿಂಗಳವರೆಗೆ ಸಮರ್ಪಕ ಕುಡಿಯುವ ನೀರಿನ ಸರಬರಾಜಿಗಾಗಿ ಈಗಿನಿಂದಲೇ ನೀರು ಸಂಗ್ರಹಣೆ ಹಾಗೂ ವ್ಯವಸ್ಥಿತ ಸರಬರಾಜಿಗೆ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನೀರಾವರಿ ಇಲಾಖೆಯ ಎಇಇ ಪಂಪಾಪತಿ ಅವರು ಈಗಾಗಲೇ ಹಿರೇಹಳ್ಳ ಜಲಾಶಯದಲ್ಲಿ 0.48 ಟಿಎಂಸಿ ನೀರು ಸಂಗ್ರಹವಿದ್ದು, ಯಲಬುರ್ಗಾ ಪಟ್ಟಣ ಹಾಗೂ ಮಂಗಳೂರು, ಇತರೆ ಗ್ರಾಮಗಳಿಗೆ ದಿನಕ್ಕೆ 20 ಕ್ಯೂಸೆಕ್ಸ್ ನೀರು ಬೇಕಾಗಿದ್ದು, ಮುಂದಿನ 5 ತಿಂಗಳವರೆಗೆ ಸುಮಾರು 2400 ಕ್ಯೂಸೆಕ್ಸ್ ನೀರಿನ ಅವಶ್ಯಕತೆ ಇರುತ್ತದೆ. ಈಗಾಗಲೇ ಜಲಾಶಯದಲ್ಲಿ ಸುಮಾರು 2700 ಕ್ಯೂಸೆಕ್ಸ್ ಕ್ಕಿಂತ ಅಧಿಕ ನೀರು ಸಂಗ್ರಹವಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ನೀರಾವರಿ ಇಲಾಖೆಯ ಇಂಜಿನಿಯರರು, ಜಾಕ್ವೆಲ್ ಆಪರೇರ್ಸ್ ಹಾಗೂ ವಾಟರ್ಮೆನ್ಗಳು ಉಪಸ್ಥಿತರಿದ್ದರು…
ವರದಿ. ಮಂಜುನಾಥ್ ಉಪ್ಪಾರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030