ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಮನೋಹರ್ ಮರಂಡಿ ಹೇಳಿಕೆ
ಚುನಾವಣೆ ವೆಚ್ಚದ ಬಗ್ಗೆ ನಿಗಾ ಇರಲಿ
ನೀತಿ ಸಂಹಿತೆ ಉಲ್ಲಂಘನೆ : ಗಂಭೀರ ಪರಿಗಣನೆ
ಚಿತ್ರದುರ್ಗ:ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಮುಖ್ಯ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಅತಿ ಸೂಕ್ಷ್ಮ ವಿಷಯಗಳು ಸೇರಿ ಪ್ರತಿಯೊಂದು ಅಂಶಗಳನ್ನು ಜಾಗರೂಕತೆಯಿಂದ ಗಮನಿಸಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಮನೋಹರ ಮರಂಡಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ವೆಚ್ಚದ ಕುರಿತು ಅಭ್ಯರ್ಥಿಗಳು ಹಾಗೂ ಅವರ ಏಜೆಂಟರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಹಾಗೂ ವೇದಿಕೆ ಕಲ್ಪಿಸಿಕೊಡಲಾಗುವುದು. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಿದ್ದಂತೆ. ಚುನಾವಣೆ ಸಂಬಂಧವಾಗಿ ಪ್ರತಿಯೊಂದು ಕಾರ್ಯಗಳನ್ನು ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ ಎಂದರು.
ಚುನಾವಣೆಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡಲಾಗುವುದು. ಪ್ರತಿ ಅಭ್ಯರ್ಥಿಗಳು ಚುನಾವಣೆ ವೆಚ್ಚಗಳಿಗೆ ಸಂಬಂಧಿಸಿದ ನೀಡುವ ನಿರ್ದೇಶನಗಳನ್ನು ತಪ್ಪದೇ ಪಾಲನೆ ಮಾಡಬೇಕು. ಮತದಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ.
ಮುಖ್ಯವಾದ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಅವುಗಳನ್ನು ಸಹ ಕಂಟ್ರೋಲ್ ರೂಂನಿಂದಲೇ ವೀಕ್ಷಣೆ ಮಾಡಬಹುದಾಗಿದೆ. ಚುನಾವಣೆ ವೆಚ್ಚ ದೃಷ್ಟಿಯಿಂದ ರಾಜಕೀಯ ಮುಖಂಡರು ಹಾಗೂ ಸ್ಟಾರ್ ಪ್ರಚಾರಕರ ಆಗಮನದ ಮೇಲೂ ಗಮನ ಇರಿಸಲಾಗಿದೆ. ಸಿ-ವಿಜಿಲ್ ಮೂಲಕವೂ ಮಾದರಿ ನೀತಿ ಸಂಹಿತೆ ಉಲಂಘನೆ ದೂರು ಸಲ್ಲಿಸಬಹುದಾಗಿದೆ ಎಂದು ಸಾಮಾನ್ಯ ವೀಕ್ಷಕ ಮನೋಹರ ಮನೋಹರ ಮರಂಡಿ ಹೇಳಿದರು.
ದೈನಂದಿನ ಚುನಾವಣೆ ಪ್ರಚಾರದ ವೆಚ್ಚದ ಲೆಕ್ಕವಿಡಿ: ಚುನಾವಣೆ ಆಯೋಗ ನಿರ್ದೇಶನದಂತೆ ಎಲ್ಲಾ ರಾಜಕೀಯ ಪಕ್ಷದ ಅಭ್ಯರ್ಥಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ ಚುನಾವಣೆ ವೆಚ್ಚ ದಾಖಲಿಸಲು ಚುನಾವಣೆ ವೆಚ್ಚದ ವಹಿಗಳನ್ನು ಈಗಾಗಲೇ ನೀಡಲಾಗಿದೆ. ಹಾಗೆಯೇ ಚುನಾವಣೆ ವೆಚ್ಚವನ್ನು ದಾಖಲಿಸುವುದು ಹೇಗೆ ಎನ್ನುವ ಕುರಿತಾಗಿ ಮಾಹಿತಿ ಕಿರುಹೊತ್ತಿಗೆಯೊಂದಿಗೆ ನೀಡಲಾಗಿದೆ. ಅಭ್ಯರ್ಥಿಗಳು ತಪ್ಪದೇ ಪ್ರತಿದಿನ ಚುನಾವಣೆ ವೆಚ್ಚದ ಲೆಕ್ಕವನ್ನು ಇಡಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ವೆಚ್ಚ ವೀಕ್ಷಕರಾದ ಪ್ರಜಕ್ತ ಠಾಕೂರ್ ಅಭ್ಯರ್ಥಿಗಳಿಗೆ ನಿರ್ದೇಶನ ನೀಡಿದರು.
ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನದಿಂದಲೇ ವೆಚ್ಚದ ವಹಿಗಳನ್ನು ನಿರ್ವಹಿಸಬೇಕು. ಈ ವಹಿಗಳನ್ನು ಮೂರು ಬಾರಿ ನಿಗದಿ ಪಡಿಸಿದ ದಿನಾಂಕಗಳಂದು ಪರಿಶೀಲನೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ವೆಚ್ಚದ ಶ್ಯಾಡೋ ರಿಜಿಸ್ಟರ್ ವಹಿ ದಾಖಲಿಸಲಾಗುತ್ತದೆ. ಪರಿಶೀಲನೆ ವೇಳೆ ಅಭ್ಯರ್ಥಿಗಳ ಚುನಾವಣೆ ವೆಚ್ಚದ ವಹಿಗಳನ್ನು ಇದರೊಂದಿಗೆ ತಾಳೆ ನೋಡಲಾಗುತ್ತದೆ.
ಪ್ರತಿಯೊಬ್ಬರು ಚುನಾವಣೆ ಆಯೋಗ ನೀಡಿದ ನಿರ್ದೇಶನಗಳಿಗೆ ಬದ್ದರಾಗಿರಬೇಕು. ಚುನಾವಣೆ ಪ್ರಚಾರಕ್ಕಾಗಿಯೇ ಪ್ರತ್ಯೇಕ ಬ್ಯಾಂಕ್ ಖಾತೆ ತೆರದು ಅದರಿಂದಲೇ ಪ್ರಚಾರದ ವೆಚ್ಚಗಳನ್ನು ಭರಿಸಬೇಕು.
ಅಭ್ಯರ್ಥಿಗಳ ಪ್ರತಿದಿನ ಚುನಾವಣೆ ವೆಚ್ಚದ ಮಾಹಿತಿಗಳನ್ನು ಬಿಳಿ ವಹಿಯಲ್ಲಿ ದಾಖಲಿಸಬೇಕು. ನಗದು ರೀತಿಯ ವೆಚ್ಚಗಳನ್ನು ತಿಳಿ ಗುಲಾಬಿ ಬಣ್ಣದ ವಹಿಯಲ್ಲಿ ನಿರ್ವಹಿಸಬೇಕು. ಹಳದಿ ಬಣ್ಣದ ವಹಿಯಲ್ಲಿ ಬ್ಯಾಂಕ್ ವಹಿವಾಟಿನ ಮಾಹಿತಿ ದಾಖಲಿಸಬೇಕು. ಚುನಾವಣೆ ವೆಚ್ಚದ ಪರಿಶೀಲನೆ ವೇಳೆ ಆ ದಿನದವರೆಗಿನ ಚುನಾವಣೆ ವೆಚ್ಚವನ್ನು ದಾಖಲಿಸಿ ಪರಿಶೀಲನೆಗೆ ನೀಡಬೇಕು. ಅಭ್ಯರ್ಥಿಗಳು ಚುನಾವಣೆಯಲ್ಲಿ ಉಚಿತ ಕೊಡುಗೆ, ಹಣ ಹೆಂಡಗಳನ್ನು ಹಂಚುವುದನ್ನು ಕಟ್ಟುನಿಟ್ಟಾಗಿ ನಿರ್ದೇಶಿಧಿಸಲಾಗಿದೆ. ಇದಕ್ಕೆ ಎಲ್ಲಾ ಅಭ್ಯರ್ಥಿಗಳು ಬದ್ದವಾಗಿರಬೇಕು ಎಂದರು.
ಸಹಾಯಕ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸುವ ಚುನಾವಣೆ ಪ್ರಚಾರದ ವೆಚ್ಚಗಳನ್ನು ಶ್ಯಾಡೋ ರಿಜಿಸ್ಟರ್ನಲ್ಲಿ ತಪ್ಪದೇ ನಮೂದಿಸಬೇಕು. ಕಾಲ ಕಾಲಕ್ಕೆ ವಹಿಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ವೆಚ್ಚ ವೀಕ್ಷಕರಾದ ಪ್ರಜಕ್ತ ಪಿ ಠಾಕೂರ್ ಹೇಳಿದರು.
ಅಭ್ಯರ್ಥಿಗಳು ಚುನಾವಣೆ ಪ್ರಚಾರದ ಅನುಮತಿಗಾಗಿ ಸುವಿಧಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು. ವಿಧಾನ ಸಭಾ ಕ್ಷೇತ್ರವಾರು ದೈನಂದಿನ ಚುನಾವಣೆ ವೆಚ್ಚದ ನಿರ್ವಹಣೆ ಆಯಾ ತಾಲ್ಲೂಕು ಕಚೇರಿಗಳಲ್ಲಿ ಸ್ಥಾಪಿಸಿರುವ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು. ಪ್ರತಿ ಅಭ್ಯರ್ಥಿ ಇಡೀ ಚುನಾವಣೆ ಪ್ರಚಾರದಲ್ಲಿ ರೂ. 10 ಸಾವಿರ ಹಣವನ್ನು ಮಾತ್ರ ನಗದು ರೂಪದಲ್ಲಿ ಬಳಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ತಿಳಿಸಿದರು.
ಯೂಟ್ಯೂಬ್, ಫೇಸ್ಬುಕ್, ವ್ಯಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷ, ಧರ್ಮ, ಜಾತಿ, ವ್ಯಕ್ತಿಗಳಿಗೆ ಅವಹೇಳನ ಮಾಡಿ ಮಾಡುವ ಪೋಸ್ಟ್ಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಹಾಗಾಗಿ ಇದರ ಬಗ್ಗೆ ಎಚ್ಚರ ವಹಿಸಬೇಕು. ದೇವಾಲಯ, ಚರ್ಚ್, ಮಸೀದಿ, ಮಠ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುವಂತಿಲ್ಲ. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಿರ್ಮಿಸಲ್ಪಟ್ಟ ಸರ್ಕಾರಿ ಭವನಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು ಅಭ್ಯರ್ಥಿಗಳಿಗೆ ಹಾಗೂ ಏಜೆಂಟರಿಗೆ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಸಲಹೆ ನೀಡಿದರು.
ಏ.13 ರಿಂದ 15 ರವರೆಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ: ಭಾರತ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಇದೇ ಏಪ್ರಿಲ್ 13 ರಿಂದ 15 ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಜಿಲ್ಲೆಯಲ್ಲಿ 29 ಸಾವಿರಕ್ಕೂ ಹೆಚ್ಚು ಅಂಗವಿಕಲ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 16 ಸಾವಿರ ಹಿರಿಯ ನಾಗರಿಕರನ್ನು ಗುರುತಿಸಲಾಗಿದ್ದು, ಮನೆಯಿಂದಲೇ ಮತದಾನಕ್ಕಾಗಿ ಈಗಾಗಲೇ ಪ್ರತಿಯೊಬ್ಬರಿಗೂ ನಮೂನೆ 12 “ಡಿ” ಅನ್ನು ವಿತರಣೆ ಮಾಡಲಾಗಿದೆ. ಈ ಪೈಕಿ ಮನೆಯಿಂದಲೇ ಮತದಾನ ಮಾಡಲು ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸೇರಿ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮಂದಿ ಮನೆಯಿಂದ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪಿಆರ್ಓ, ಎಪಿಆರ್ಓ, ಮೈಕ್ರೋ ವೀಕ್ಷಕರು ಹಾಗೂ ಪೆÇಲೀಸ್ ಅವರನ್ನು ಒಳಗೊಂಡ ತಂಡ ಮನೆ ಮತದಾನಕ್ಕೆ ತೆರಳಿ, ಮನೆಯಿಂದಲೇ ಮತದಾನ ಮಾಡುವ ಮತದಾರರಿಗೆ ತಾತ್ಕಾಲಿಕವಾಗಿ ಬೂತ್ ವ್ಯವಸ್ಥೆ ಕಲ್ಪಿಸಿ, ಮನೆ ಮತದಾನಕ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಅಗತ್ಯ ಸೇವೆ ಸಿಬ್ಬಂದಿಗೆ ಅಂಚೆ ಮತದಾನ: ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತದಾನ ಮಾಡುವುದಕ್ಕೆ ಅಗತ್ಯ ಸಿಬ್ಬಂದಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಸಂಬಂಧ ಎಲ್ಲರಿಗೂ ನಮೂನೆ 12 “ಡಿ” ವಿತರಣೆ ಮಾಡಲಾಗಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅಂಚೆ ಮತದಾನ ಕೇಂದ್ರ (ಪೆÇೀಸ್ಟಲ್ ವೋಟಿಂಗ್ ಸೆಂಟರ್)ವನ್ನು ನಗರದ ತಹಶೀಲ್ದಾರ್ ಕಚೇರಿಯಲ್ಲಿರುವ ಚಿತ್ರದುರ್ಗ-99 ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಸಂಬಂಧ ಕರ್ತವ್ಯ ನಿರತ ಗೈರು ಹಾಜರಿ ಮತದಾರರು ಇದೇ ಏಪ್ರಿಲ್ 19 ರಿಂದ 21 ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ಒಳಗೆ ಪೆÇೀಸ್ಟಲ್ ವೋಟಿಂಗ್ ಸೆಂಟರ್ಗೆ ಆಗಮಿಸಿ ತಮ್ಮ ಮತ ಚಲಾಯಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು ಸೇರಿದಂತೆ ಚಿತ್ರದುರ್ಗ ಲೋಕಸಭಾ ಚುನಾವಣೆಗ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಏಜೆಂಟರು ಇದ್ದರು…
ವರದಿ. ಪ್ರದೀಪ್, ಚಿತ್ರದುರ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030