“ಚರ್ಮ ಗಂಟು ರೋಗಕ್ಕೆ ಸಿ. ಎಸ್. ಪುರ ಗ್ರಾಮದಲ್ಲಿ ಒಂದು ಎತ್ತು ಸಾವು”
ಗುಡೇಕೋಟೆ:- ಅ29. ಈ ತಿಂಗಳ ಪ್ರಾರಂಭದಲ್ಲಿ ಕಾಣಿಸಿಕೊಂಡ ಜಾನುವಾರುಗಳಿಗೆ ಕಾಡುವ ಚರ್ಮಗಂಟು ಖಾಯಿಲೆಗೆ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ನಿನ್ನೆ ದಿ.25 ರಂದು ಹಂಪಣ್ಣನವರ್ ಈರಣ್ಣ ಎಂಬುವವರ ಒಂದು ಎತ್ತು ಸಾವನ್ನಪ್ಪಿದೆ. 1 ವಾರದಿಂದ ಚರ್ಮಗಂಟು ರೋಗ ಕಾಣಿಸಿಕೊಂಡು ಚಿಕಿತ್ಸೆ ಕೊಡಿಸಿದ್ದರೂ ರೋಗಕ್ಕೆ ತುತ್ತಾಗಿದೆ. ಈ ರೋಗವು ಕಳೆದ 20 ದಿನಗಳಿಂದ ಎತ್ತು, ಆಕಳು, ಕರುಗಳಿಗೆ ಹೆಚ್ಚಾಗಿ ಕಾಡುತ್ತಿದೆ.ಚಂದ್ರಶೇಖರಪುರ ಪಶುಚಿಕಿತ್ಸಾ ಕೇಂದ್ರದಲ್ಲಿ ಇಲ್ಲಿಯವರೆಗೆ 250 ಕ್ಕೂ ಹೆಚ್ಚು ಜಾನುವಾರುಗಳಿಗೆ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ರೈತರಿಗೆ ಸತತ ಮಳೆಯಿಂದ ತಮ್ಮ ಬೆಳೆ ಉಳಿಸಿಕೊಳ್ಳಲು ಒಂದು ರೀತಿ ಹೋರಾಟವಾದರೆ, ಈಗ ವಕ್ಕರಿಸಿರುವ ಚರ್ಮಗಂಟು, ಕಾಲುಬಾವು ರೋಗದಿಂದ ತಮ್ಮ ಎತ್ತು, ಆಕಳು, ಕರುಗಳನ್ನು ರಕ್ಷಿಸಿಕೊಳ್ಳುವುದು ಇನ್ನೊಂದು ಹೋರಾಟವಾಗಿದೆ.
ಕೊರೋನ ಮಾದರಿಯ ರೋಗ:
ಪಶು ವೈದ್ಯರು, ನಿರೀಕ್ಷಕರು ನೀಡಿದ ಮಾಹಿತಿ ಪ್ರಕಾರ ಇದು ಈಹಿಂದೆ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದ್ದ ಕೊರೋನದಂತಹ ರೋಗವಾಗಿದ್ದರೂ, ಚರ್ಮಗಂಟು ರೋಗ ಬಂದ ಜಾನುವಾರು ಹತ್ತಿರದ ಇನ್ನೊಂದು ಜಾನುವಾರಿಗೆ ಕಾಣಿಸಿಕೊಳ್ಳದೇ ಬೇರೆ ಜಾಗದಲ್ಲಿದ್ದ ಅಲ್ಲೊಂದು ಇಲ್ಲೊಂದು ಜಾನುವಾರಿಗೆ ಹಬ್ಬುತ್ತಿರುವುದು ರೋಗದ ವಿಶೇಷತೆಯಾಗಿದೆ. ಸಾಂಕ್ರಾಮಿಕತೆ ಇಲ್ಲದಿರುವುದು ಒಂದು ರೀತಿಯ ಸಮಾಧಾನದ ವಿಷಯ ಎಂಬುದು ವೈದ್ಯರ, ರೈತರ ಅಭಿಪ್ರಾಯವಾಗಿದೆ.
ಎತ್ತುಗಳು, ಹಸು, ಕರುಗಳು ಟಾರ್ಗೆಟ್:
ಪಶುವೈದ್ಯರು ಕರೆಯಲ್ಪಡುವ ಲಂಪಿಸ್ಕಿನ್ ಡಿಸೀಜ್ ಎಂಬ ಚರ್ಮಗಂಟು, ಕಾಲುಬಾವು, ರೋಗವು ಹೆಚ್ಚಾಗಿ ಎತ್ತುಗಳಿಗೆ ಮೊದಲ ಸ್ಥಾನದಲ್ಲಿದ್ದು, ಆಕಳು (ಹಸು), ಕರುಗಳು ನಂತರದ ಸ್ಥಾನದಲ್ಲಿವೆ. ಎಮ್ಮೆ, ಕೋಣ, ಕುರಿ, ಮೇಕೆ, ಮತ್ತು ಇತರೆ ಪ್ರಾಣಿಗಳಲ್ಲಿ ಕಂಡುಬರುತ್ತಿಲ್ಲ. ಹೆಚ್ಚಾಗಿ ರೈತರು ಎತ್ತುಗಳನ್ನು ಸ್ಥಳೀಯ ಪಶು ಚಿಕಿತ್ಸಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಹೊಡೆದುಕೊಂಡು ಬರುತ್ತಿರುವುದು ಕಂಡುಬರುತ್ತಿದೆ.
ರೋಗ ಹರಡುವ ರೀತಿ:
ವಿಶೇಷವಾಗಿ ಎತ್ತುಗಳು, ಹಸು, ಕರುಗಳಲ್ಲಿ ಮೊದಲಿಗೆ ಮೈಮೇಲೆ ಸಣ್ಣ ಗುಳ್ಳೆಗಳ ರೀತಿ ಪ್ರಾರಂಭಗೊಂಡು ನಂತರ ಮೈತುಂಬಾ ಗಂಟುಗಳಾಗಿ ರೋಗ ಬಂದ ಜಾನುವಾರು ಹುಲ್ಲು ತಿನ್ನದೇ ಸುಮ್ಮನೇ ಮಲಗಿಬಿಡುತ್ತದೆ. ಕೆಲವು ಜಾನುವಾರುಗಳಿಗೆ ಮುಂಗಾಲು ಅಥವಾ ಹಿಂಗಾಲು, ತೊಡೆ ಭಾಗದಲ್ಲಿ ಬಾವು ಬರುವುದು, ಕುಂಟುವುದು, ಈ ರೋಗದ ಲಕ್ಷಣವಾಗಿದ್ದು, ಶಕ್ತಿಯುತವಲ್ಲದ, ಹೆಚ್ಚು ಪೋಷಕಾಂಶ ಆಹಾರ (ಹಸಿಮೇವು, ಹಿಂಡಿ) ಸೇವಿಸದ, ಬಡಕಲಾದ ಜಾನುವಾರುಗಳು ಈ ರೋಗದಿಂದ ಹೆಚ್ಚು ನರಳುತ್ತವೆ ಎಂಬುದು ತಜ್ಞರ ಅಭಿಪ್ರಾಯ.
ರೈತರು ತಮ್ಮ ಜಾನುವಾರುಗಳಿಗೆ ಹೆಚ್ಚು, ಹಸಿಹುಲ್ಲು, ಹಿಂಡಿ, ತೌಡು, ಹಸಿದಂಟಿನ ಮೇವು ರೀತಿಯ ಪೋಷಕಾಂಶದ ಮೇವು ನೀಡಿ ರೋಗನಿರೋಧ ಪ್ರಮಾಣ ಹೆಚ್ಚಿಸಬೇಕು.
ಡಾ.ವಿನೋದ್ ಕುಮಾರ್, ಸಹಾಯಕ ನಿರ್ದೇಶಕರು. ಪಶು ಸಂಗೋಪನ ಇಲಾಖೆ.ಕೂಡ್ಲಿಗಿ..
ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030