ಕೆಡಿಪಿ ಸಭೆಗೆ ಮಾಹಿತಿ ಇಲ್ಲದೇ ಬಂದ ಅಧಿಕಾರಿಗಳು -ತರಾಟೆಗೆ ತೆಗೆದುಕೊಂಡ ನಾಡಗೌಡ್ರು.
ಸಿಂಧನೂರು : ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ 2021-22ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ವೆಂಕಟರಾವ್ ನಾಡಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರಂಭದಲ್ಲಿ ಸಭೆಯಲ್ಲಿ ಮಾಹಿತಿ ಇಲ್ಲದೇ ಬಂದ ಕೆಲವು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.ತಾಲೂಕು ಅಲ್ಪಸಂಖ್ಯಾತ ಕಲ್ಯಾಣಾದಿಕಾರಿ ಗೈರಹಾಜರಾಗಿದ್ದಕ್ಕೆ ಗರಂ ಆದ ಶಾಸಕರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ ನೀಡಿದರು.
ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳ ಪ್ರಗತಿ ವಿವರ ಕೇಳಿದಾಗ ದಾಖಲೆಗಳು ಇಲ್ಲದೇ ಬಂದ ಅಧಿಕಾರಿ ತಡವಡಿಸಿದಾಗ ತಪ್ಪು ತಪ್ಪು ಮಾಹಿತಿ ನೀಡಿದಾಗ ಕೋಪಗೊಂಡ ಶಾಸಕರು ನಾನು ಪಶುಸಂಗೋಪನೆ ಇಲಾಖೆಯಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ ನನಗೆ ಬೇಜವಾಬ್ದಾರಿ ಉತ್ತರ ಕೊಡುತ್ತಿಯಾ ಎಂದು ಗದರಿಸಿದರು.
ಹೆಚ್.ಕೆ.ಆರ್. ಡಿ.ಬಿ ಯೋಜನೆ ಅಡಿಯಲ್ಲಿ 2018-19ರ ಸಾಲಿನ ಕಾಮಗಾರಿಯು ನಾಲ್ಕು ವರ್ಷವಾದರೂ ಇನ್ನೂ ಪ್ರಾರಂಭವಾಗದ ಕಾಮಗಾರಿಗಳ ಬಗ್ಗೆ ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಗಿಣಿವಾರ ಗ್ರಾಮದಲ್ಲಿ ಡಾ. ಬಿ. ಅರ್. ಅಂಬೇಡ್ಕರ್ ಭವನ, ಜವಳಗೇರಾ ಗ್ರಾಮದ ಬಾಬು ಜಗಜೀವನರಾಮ ಭವನ, ಪೂರ್ಣಗೊಂಡಿದ್ದರು ಇನ್ನೂ ಬಾರದ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಒಂದು ತಿಂಗಳ ಅವಧಿಯಲ್ಲಿ ಉದ್ಘಾಟನೆಯಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಯಾವ ಯಾವ ಸೌಲಭ್ಯಗಳನ್ನು ವಿಧ್ಯಾರ್ಥಿಗಳಿಗೆ ನೀಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರ ಹೇಳಲು ಅಧಿಕಾರಿ ತಡವಾಡಿಸಿದಾಗ ಕೋಪಗೊಂಡ ಶಾಸಕರು ನಿಮಗೆ ನಿವೃತ್ತಿ ಆಗುವ ವಯಸ್ಸಾಗಿದೆ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕು ಎನ್ನುವ ಕಾಮನ್ ಸೆನ್ಸ್ ನಿಮಗಿಲ್ಲವೇ ಕೇವಲ ಸಭೆಗೆ ಹಾಜರಾಗಿ ಚಹಾ ಕುಡಿದು ಮನೆಗೆ ಹೋಗುವುದು ಮಾತ್ರ ನಿನಗೆ ಗೊತ್ತು ನಿಮ್ಮ ಈ ಬೇಜವಾಬ್ದಾರಿ ಹೇಳಿಕೆಯಿಂದ ಆಫೀಸಿನಲ್ಲಿ ಕೆಲಸ ಮಾಡುತ್ತೀರೊ ಅಥವಾ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ ಎಂದರು. ಶಾಸಕರು ಕೇಳಿದ ಪ್ರಶ್ನೆಗೆ ನಿಮ್ಮ ಕೈಯಲ್ಲೇ ಉತ್ತರ ಇದೆ ನೋಡಿಕೊಳ್ಳಿ ಎಂದು ಅದಿಕಾರಿ ಹೇಳಿದಾಗ ಶಾಸಕರ ಪಕ್ಕದಲ್ಲಿದ್ದ ಎಂ.ದೊಡ್ಡ ಬಸವರಾಜ್ ಕೋಪಗೊಂಡು ಶಾಸಕರ ಜೊತೆ ಯಾವ ರೀತಿ ಮಾತನಾಡಬೇಕು ಎಂಬುದನ್ನು ಮೊದಲು ಕಲಿತುಕೋ ದಾಖಲೆಗಳನ್ನು ನಿನ್ನ ಬಳಿ ಇಟ್ಟುಕೊಂಡು ಮಾತನಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗೆ ತಿಳಿಸಿದರು. ನಂತರ ತಾಲೂಕಿನ ಎಲ್ಲಾ ಇಲಾಖೆಗಳ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ವಿಳಂಬ ಮಾಡಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ನಿಮ್ಮನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಖಡಕ್ಕಾಗಿ ಶಾಸಕ ವೆಂಕಟರಾವ್ ನಾಡಗೌಡ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮೊದಲನೇ ಕೆಡಿಪಿ ಸಭೆಗೆ ಆಗಮಿಸಿದ ವಿಧಾನಪರಿಷತ್ ನೂತನ ಸದಸ್ಯರಾದ ಶರಣೆಗೌಡ ಬಯ್ಯಾಪುರ ಅವರನ್ನು ಸನ್ಮಾನಿಸಿದರು. ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್, ನಗರಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಗ್ರೇಡ್ 2 ತಹಶಿಲ್ದಾರ್,ಇತರರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030