ಭದ್ರಾ ನೀರು ಬಾರದಿದ್ದಲ್ಲಿ ಹೋರಾಟ : ಶಾಸಕ ಬಿ.ಜಿ. ಗೋವಿಂದಪ್ಪ…!!!

ಭದ್ರಾ ನೀರು ಬಾರದಿದ್ದಲ್ಲಿ ಹೋರಾಟ : ಶಾಸಕ ಬಿ.ಜಿ. ಗೋವಿಂದಪ್ಪ

ಹೊಸದುರ್ಗ : ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧ್ಯಕ್ಷರು ಹಾಗೂ ಹೊಸದುರ್ಗ ಶಾಸಕರಾದ ಸನ್ಮಾನ್ಯ ಶ್ರೀ ಬಿಜಿ ಗೋವಿಂದಪ್ಪ ಇವರ ನೇತೃತ್ವದಲ್ಲಿ ಹೊಸದುರ್ಗ ತಾಲೂಕಿನ ಸರ್ವ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಸಹಯೋಗದಲ್ಲಿ ಹೊಸದುರ್ಗ ತಾಲೂಕಿನ ಮಹತ್ವಕಾಂಕ್ಷಿ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಇಂದು ಕರೆ ನೀಡಿದ ಹೊಸದುರ್ಗ ಬಂದ್ ಪ್ರಯುಕ್ತ ಹೊಸದುರ್ಗ ವೀರಭದ್ರೇಶ್ವರ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಮಸ್ತ ಹೊಸದುರ್ಗ ತಾಲೂಕು ನಾಗರೀಕರಿಗೆ ಭದ್ರಾ ಜಲಾಶಯದಿಂದ ನೀರು ತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದು,ಶೇ.80 ರಷ್ಟು ಕಾಮಗಾರಿಯೇ ಮುಗಿದಿದೆ ಆದರೀಗ ಬಲದಂಡೆ ಯಿಂದ ನೀರು ತರಲು ದಾವಣಗೆರೆ ರೈತರು ಹಾಗೂ ಮುಖಂಡರು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ.ಇದು ಹೀಗೆ ಮುಂದುವರಿದರೆ ಮುಂದಿನ ಕ್ರಮ ಕಗೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ಬಲದಂಡೆಯಿಂದ ನೀರು ತರುವುದಕ್ಕೆ ಕೆಲವರು ಅಡ್ಡಿ ಪಡಿಸಿದ್ದಾರೆ. ಇದನ್ನು ಖಂಡಿಸಿ ಶನಿವಾರ ಆಯೋಜಿಸಿದ್ದ ಬಂದ್ ಯಶಸ್ವಿಯಾಗಿದೆ.

ಶಾಸಕ ಬಿ.ಜಿ ಗೋವಿಂದಪ್ಪ ಮಾತನಾಡಿ, 2013 ರಲ್ಲಿ ಹೊಸದುರ್ಗ ಕುಡಿಯುವ ನೀರನ್ನು ಪರಿಶೀಲಿಸಿದ ಅಧಿಕಾರಿಗಳು, ಈ ನೀರಿನಲ್ಲಿ ಉಪ್ಪಿನ ಅಂಶ ಹಾಗೂ ಫ್ಲೋರೈಡ್ ಅಂಶ ಅಧಿಕವಾಗಿರುವುದರಿಂದ ಕುಡಿಯಲು ಯೋಗ್ಯವಲ್ಲ ಎಂಬ ವರದಿ ನೀಡಿದ್ದರು. ಹಾಗಾಗಿ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲು ₹830 ಕೋಟಿ ಮೀಸಲಿಡಲಾಗಿದೆ.

ಐಐಎಸ್.ಸಿ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಕಾರಾತ್ಮಕವಾಗಿ ವರದಿ ಸಲ್ಲಿಸಿದೆ ದಾವಣಗೆರೆಯವರು ಒಮ್ಮೆ ಪರಿಶೀಲಿಸಿ. ಬಲದಂಡೆಯಿಂದ ಹೊಸದುರ್ಗದವರು ನೀರು ಪಡೆದರೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಶಾಸಕ ಬಿ‌ ಜಿ ಗೋವಿಂದಪ್ಪ ಹೇಳಿದರು.

‘ಮೂರು ದಿನಗಳಲ್ಲಿ ಈ ಹೋರಾಟಕ್ಕೆ ಪ್ರತಿಫಲ ಸಿಗಲಿದೆ. ಹೊಸದುರ್ಗಕ್ಕೆ ಭದ್ರಾ ನೀರು ಬಾರದೆ ಇದ್ದಲ್ಲಿ ಹೊಸದುರ್ಗದಿಂದ ಬೆಂಗಳೂರು ವಿಧಾನಸೌಧದವರೆಗೂ ಪಾದಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ಲಿಂಗಮೂರ್ತಿ ಹೇಳಿದರು’.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ದಾವಣಗೆರೆಯಲ್ಲಿ ಭದ್ರಾ ಮೇಲ್ದಂಡೆ ವಿಚಾರವಾಗಿ ನಿರುದ್ಯೋಗಿ ರಾಜಕಾರಣಿಗಳು ರೈತರ ಸೋಗಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಭದ್ರಾ ನೀರನ್ನು ಬಳಕೆ ಮಾಡಿಕೊಳ್ಳಬೇಡಿ. ಇಡೀ ಒಂದು ತಾಲ್ಲೂಕು ವ್ಯಥೆ ಪಡುವಂತೆ ಮಾಡಬೇಡಿ. ನಿಮ್ಮಗಳ ಕ್ಷೇತ್ರದಲ್ಲಿದ್ದು ಸೇವೆ ಮಾಡಿ, ಜನರ ವಿಶ್ವಾಸ ಪಡೆಯಿರಿ. ಸ್ವಂತ ಲಾಭಕ್ಕಾಗಿ ಕುಡಿಯುವ ನೀರನ್ನು ತಡೆಹಿಡಿಯಬೇಡಿ.ಈ ಯೋಜನೆ ದಾರಿತಪ್ಪಿದರೆ ಉಗ್ರ ಹೋರಾಟ ಮಾಡಿ, ನೀರನ್ನು ತಂದೆ ತರುತ್ತೇವೆ ಎಂದು ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಸ್ವಾಮಿ ದೇವಾಲಯದಿಂದ ಆರಂಭವಾದ ಪ್ರತಿಭಟನೆ ಮದಕರಿ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತದ ಮಾರ್ಗವಾಗಿ ಟಿ.ಬಿ. ವೃತ್ತದ ಮೂಲಕ ಸಂಚರಿಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಈ ವೇಳೆ ಕೆಪಿಸಿಸಿ ಸದಸ್ಯರುಗಳಾದ ಎಂ ಟಿ ಶಂಕರ್, ಅಲ್ತಾಫ್ ಪಾಷಾ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್ ಮೂರ್ತಿ, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಆಸಂದಿ, ಮುಖಂಡರುಗಳಾದ ಕೆ.ಎಸ್. ಕಲ್ಮಠ್, ಗೋ ತಿಪ್ಪೇಶ್, ಕಾರೇಹಳ್ಳಿ ಬಸವರಾಜ್, ಉದ್ಯಮಿ ಸದ್ಗುರು ಡಿ. ಎಸ್.ಪ್ರದೀಪ್, ತುಂಬಿನಕರೆ ಬಸವರಾಜ್, ಕೆ. ಅನಂತ್, ಬುರುಡೇಕಟ್ಟೆ ಆರ್ ರಾಜೇಶ್, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಕರ್ನಾಟಕ ಯುವ ರಕ್ಷಣಾ ವೇದಿಕೆಯ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಮಾರುತಿ, ರವಿಕುಮಾರ್, ಪುರಸಭೆ ಸದಸ್ಯರು, ರೈತ ಸಂಘ, ಮಹಿಳಾ ಸಂಘ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿದಂತೆ ಸಾವಿರಾರು ಜನರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *