ಹೊಳಲ್ಕೆರೆ: ‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ದಾಖಲಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶ್ರೀನಿವಾಸ್ ಮನವಿ ಮಾಡಿದರು.
ಎನ್ ಇಎಸ್ ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಸಿಹಿ ತಿನಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭವಾಗಿವೆ. ಶಿಕ್ಷಕರು ಎಸ್ಡಿಎಂಸಿ ಸಹಕಾರದೊಂದಿಗೆ ದಾಖಲಾತಿ ಆಂದೋಲನ ನಡೆಸಿ ವಿದ್ಯಾರ್ಥಿಗಳ ದಾಖಲಾತಿಗೆ ಪ್ರೇರೆಪಿಸಬೇಕು. ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯದಂತೆ ಎಚ್ಚರ ವಹಿಸಬೇಕು. ತಾಲ್ಲೂಕಿನಲ್ಲಿ 21 ದ್ವಿಭಾಷಾ ಶಾಲೆಗಳಿದ್ದು, ಇಂಗ್ಲಿಷ್ ಮಾಧ್ಯಮ ತರಗತಿಗಳು ನಡೆಯುತ್ತಿವೆ. 11 ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ನಡೆಸಲಾಗುತ್ತಿದೆ. 1 ರಿಂದ 10 ನೇ ತರಗತಿಯವರೆಗೆ ಒಟ್ಟು 28,587 ವಿದ್ಯಾರ್ಥಿಗಳು ಓದುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ವಾರದ 6 ದಿನವೂ ಮೊಟ್ಟೆ, ಬಾಳೆಹಣ್ಣು ರಾಗಿ ಮಾಲ್ಟ್ ನೀಡಲಾಗುತ್ತಿದೆ. ಪಠ್ಯಪುಸ್ತಕ, ಶೂ. ಸಾಕ್ಸ್. ವಿದ್ಯಾರ್ಥಿ ವೇತನವನ್ನು ಉಚಿತವಾಗಿ ನೀಡಲಾಗುತ್ತಿದೆ. ಹಲವು ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಅನುಭವಿ ಶಿಕ್ಷಕರಿದ್ದು, ಉತ್ತಮ ಗುಣಮಟ್ಟದ ಶಾಲಾ ಕೊಠಡಿಗಳು, ಶೌಚಾಲಯ, ಆಟದ ಮೈದಾನ ಸೇರಿದಂತೆ ಮೂಲ ಸೌಕರ್ಯಗಳಿವೆ ಎಂದು ವಿವರಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರ ನಾಥ್, ಮುಖ್ಯಶಿಕ್ಷಕ ಜಿ.ಪ್ರಕಾಶ್, ಬಿ.ಎ.ರಾಧಮ್ಮ ಎನ್.ಕಾಂತರಾಜ್, ಜಿ.ಎಸ್.ಗಿರೀಶ್, ಬಿ.ಆರ್.ಜ್ಯೋತಿ ಹಾಗೂ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030