ಅರಸನಘಟ್ಟ ಗ್ರಾಮದಲ್ಲಿ 66/11 ಕೆ.ವಿ ವಿದ್ಯುತ್ ಉಪಕೇಂದ್ರ ಉದ್ಘಾಟಿಸಿದ ಸಚಿವ ಡಿ.ಸುಧಾಕರ್
ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ಸರ್ಕಾರದ ಸಂಕಲ್ಪ
ಹೊಳಲ್ಕೆರೆ.
ರಾಜ್ಯದ ರೈತರಿಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ರಾಜ್ಯ ಸರ್ಕಾರ ಸಂಕಲ್ಪ ಮಾಡಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ಇಂಧನ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಳಲ್ಕೆರೆ ತಾಲ್ಲೂಕು ಅರಸನಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 66/11 ಕೆ.ವಿ ವಿದ್ಯುತ್ ಉಪಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ 2023ರ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಪೂರೈಸಿರುವುದರ ಜೊತೆಗೆ ರಾಜ್ಯ ರೈತರಿಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ಸಂಕಲ್ಪ ಮಾಡಿದೆ. ರಾಜ್ಯದಲ್ಲಿ ಎಲ್ಲಿಯೂ ಲೋಡ್ ಶೆಡ್ಡಿಂಗ್ ಇಲ್ಲ. ಓವರ್ ಲೋಡ್ ಆಗಿರುವ ಕಡೆ ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ ಮಾಡುವ ಮೂಲಕ ಹೆಚ್ಚಿನ ಶಕ್ತಿ ತುಂಬವ ಕೆಲಸ ಮಾಡಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆಮಾಡಲಾಗುತ್ತಿದ್ದು, ಅಡಚಣೆ ಇರುವ ಕಡೆ 5ರಿಂದ 6 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಅರಸನಘಟ್ಟ ವಿದ್ಯುತ್ ಉಪಕೇಂದ್ರ ಪ್ರಾರಂಭದಿಂದಾಗಿ ಅರಸನಘಟ್ಟ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ಗುಣಮಟ್ಟದ ನಿರಂತರ ವಿದ್ಯುತ್ ಸರಬರಾಜು ಆಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 25 ವಿದ್ಯುತ್ ಉಪಕೇಂದ್ರಗಳ ನಿರ್ಮಾಣಕ್ಕೆ ಗುದ್ದಲಿಪೂಜೆ: ಜಿಲ್ಲೆಯಲ್ಲಿ ಸಂಪೂರ್ಣವಾಗಿ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಸಕ್ತ ವರ್ಷವೇ ಜಿಲ್ಲೆಗೆ ಅವಶ್ಯ ಇರುವ 25 ವಿದ್ಯುತ್ ಉಪಕೇಂದ್ರಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಿ, ಮುಂದಿನ ಒಂದು ವರ್ಷದೊಳಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ಇಂಧನ ಸಚಿವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ. ರೈತರಿಗೆ ವಿದ್ಯುತ್ ತೊಂದರೆಯಾಗದಂತೆ ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ ಅವರು, ಹೊಳಲ್ಕೆರೆ ತಾಲ್ಲೂಕಿನಲ್ಲಿ 5 ವಿದ್ಯುತ್ ಉಪಕೇಂದ್ರ, ಚಿತ್ರದುರ್ಗ-5, ಚಳ್ಳಕೆರೆ-2, ಮೊಳಕಾಲ್ಮುರು -2, ಹೊಸದುರ್ಗ-7 ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ 4 ವಿದ್ಯುತ್ ಉಪಕೇಂದ್ರಗಳ ಬೇಡಿಕೆ ಸೇರಿದಂತೆ ಜಿಲ್ಲೆಯಲ್ಲಿ 25 ವಿದ್ಯುತ್ ಉಪಕೇಂದ್ರಗಳ ಬೇಡಿಕೆ ಇದ್ದು, ಇದರ ಜೊತೆಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಕೆಲಸವನ್ನು ಸರ್ಕಾರ ಪ್ರಮಾಣಿಕವಾಗಿ ಮಾಡಲಿದೆ. ರೈತರಿಗೆ ಪ್ರತಿ ವರ್ಷ 19 ಸಾವಿರ ಕೋಟಿ ಹಣವನ್ನು ಸರ್ಕಾರ ಸಬ್ಸಿಡಿ ನೀಡುತ್ತಿದೆ. ಇದರ ಜೊತೆಗೆ ನಿರಂತರ ಜ್ಯೋತಿಗೂ ಸಾವಿರಾರು ಕೋಟಿ ಅನುದಾನ ನೀಡುತ್ತಿದೆ ಎಂದು ಹೇಳಿದರು.
ಹಣದ ಬದಲು ಅಕ್ಕಿ: ಅನ್ನಭಾಗ್ಯ ಯೋಜನೆಯ ಪಡಿತರ ವಿತರಣಾ ವ್ಯವಸ್ಥೆಯಡಿ ಇದೇ ತಿಂಗಳಿಂದ ಹಣದ ಬದಲು ಪೂರ್ಣ ಪ್ರಮಾಣದಲ್ಲಿ ಪ್ರತಿ ಫಲಾನುಭವಿಗೆ 10 ಕೆ.ಜಿ.ಅಕ್ಕಿ ವಿತರಣೆ ಮಾಡಲಾಗುವುದು ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.
ಎರಡು ತಿಂಗಳಿಂದ ಬಾಕಿ ಇರುವ ಗೃಹಲಕ್ಷ್ಮೀ ಯೋಜನೆಯ ಹಣವನ್ನೂ ಇದೇ ತಿಂಗಳಲ್ಲಿ ಫಲಾನುಭವಿಗಳಿಗೆ ಪಾವತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಅರಸನಘಟ್ಟ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿತ್ತು. ಹಾಗಾಗಿ ಅರಸನಘಟ್ಟ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ಅವಶ್ಯವಾಗಿ ಬೇಕಾಗಿತ್ತು ಎಂದು ತಿಳಿಸಿದ ಅವರು, ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಡಿಹಳ್ಳಿ, ಎನ್.ಜಿ.ಹಳ್ಳಿ, ಹೊಳಲ್ಕೆರೆ, ರಾಮಗಿರಿ, ತಾಳ್ಯ , ತೇಕಲವಟ್ಟಿ ಸೇರಿದಂತೆ 9 ವಿದ್ಯುತ್ ಉಪಕೇಂದ್ರ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ ಮಲ್ಲಾಡಿಹಳ್ಳಿ, ಚಿತ್ರಹಳ್ಳಿ, ತೇಕಲವಟ್ಟಿ ಹಾಗೂ ಕೋಟಿಹಾಳ್ ಬಳಿ ಸ್ಥಾಪಿಸಲಾಗುತ್ತಿರುವ ವಿದ್ಯುತ್ ಕೇಂದ್ರ ಜಿಲ್ಲೆಯಲ್ಲಿಯೇ ದೊಡ್ಡ ವಿದ್ಯುತ್ ಕೇಂದ್ರವಾಗಿದ್ದು, ಸುಮಾರು 400 ಕೆವಿ ವ್ಯಾಟ್ ವಿದ್ಯುತ್ ಕೇಂದ್ರವನ್ನು ರೂ.500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 13 ಎಕರೆ ಜಮೀನನ್ನು ಸರ್ಕಾರದಿಂದ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆಕಟ್ಟೆ ಅಭಿವೃದ್ಧಿ, ಚೆಕ್ಡ್ಯಾಂಗಳ ನಿರ್ಮಾಣ, ಗುಣಮಟ್ಟದ ರಸ್ತೆ ನಿರ್ಮಾಣದ ಜೊತೆಗೆ ಮುಂಬರುವ ಆ.15ರೊಳಗೆ ಶಿವಗಂಗಾ ಕೆರೆ ಸೇರಿದಂತೆ ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ಭದ್ರ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿ.ವಿ.ಸಾಗರದಿಂದ 367 ಕೋಟಿ ವೆಚ್ಚದಲ್ಲಿ ಎಲ್ಲ ಹಳ್ಳಿಗಳಿಗೂ ಪೈಪ್ಲೈನ್ ಹಾಕಿಸಲಾಗಿದ್ದು, ಇನ್ನೂ ಐದಾರು ತಿಂಗಳಲ್ಲಿ ಸಕಾರಗೊಳ್ಳಲಿದ್ದು, 2052ರವರೆಗೆ ಜನಸಂಖ್ಯೆ ಆಧಾರದ ಮೇಲೆ ಕುಡಿಯುವ ನೀರು ಕೊಡುವ ಕೆಲಸ ಹಾಗೂ ಶಾಶ್ವತವಾಗಿ ಕೆರೆತುಂಬಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ದಾವಣಗೆರೆ ಅಧೀಕ್ಷಕ ಇಂಜಿನಿಯರ್ ಜಿ.ಎಂ.ರೇವಣಸಿದ್ದಪ್ಪ ಮಾತನಾಡಿ, ಅರಸನಘಟ್ಟ ಗ್ರಾಮದಲ್ಲಿ 66/11 ಕೆ.ವಿ ವಿದ್ಯುತ್ ಉಪಕೇಂದ್ರ ಹಾಗೂ ಸಂಬಂಧಿಸಿದ 66 ಕೆ.ವಿ ಜೋಡಿ ಪ್ರಸರಣ ಮಾರ್ಗ ನಿರ್ಮಾಣ ಕಾಮಗಾರಿಯನ್ನು ರೂ.13.02 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 4.135 ಕಿ.ಮೀಟರ್ ಉದ್ದವಿದೆ. 21 ಗೋಪುರಗಳನ್ನು ನಿರ್ಮಿಸಲಾಗಿದೆ. 11 ಕೆವಿ ಹೊಸ ಮಾರ್ಗಗಳನ್ನು ನಿರ್ಮಿಸಲಾಗಿದೆ. ಈ ವಿದ್ಯುತ್ ಉಪಕೇಂದ್ರದಿಂದಾಗಿ ಅಪ್ಪರಸನಹಳ್ಳಿ, ಆಡನೂರು, ಪಾಡಿಘಟ್ಟೆ, ಶಿವಗಂಗಾ, ಚಿಕ್ಕಜಾಜೂರು, ಹೊಳಲ್ಕೆರೆ, ಚಿತ್ರಹಳ್ಳಿ, ಪಂಡರಹಳ್ಳಿ, ಅರಸನಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರಸ್ತುತ ಅರಸನಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಹಾಲಿ ಇರುವ 66/11 ಕೆವಿ ಹೊಳಲ್ಕೆರೆ, ಚಿತ್ರಹಳ್ಳಿ, ಚಿಕ್ಕಜಾಜೂರು ಮತ್ತು ಪಂಡರಹಳ್ಳಿ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಇದ್ದು, ಸುಮಾರು 12 ರಿಂದ 15 ಕಿ.ಮೀಟರ್ಗಿಂತ ಹೆಚ್ಚಿನ ಉದ್ದದ 11 ಕೆ.ವಿ ವಿದ್ಯುತ್ ಮಾರ್ಗಗಳು ಇರುತ್ತವೆ. ಇದರಿಂದ ನಿರಂತರ ಮತ್ತು ತಡೆರಹಿತ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಉಂಟಾಗುತ್ತಿತ್ತು. ಈ ಯೋಜನೆ ಅನುಷ್ಠಾನದಿಂದ 11 ಕೆವಿ ವಿದ್ಯುತ್ ಮಾರ್ಗಗಳ ಉದ್ದವನ್ನು ಕಡಿಮೆ ಮಾಡುವುದರೊಂದಿಗೆ ತಡೆರಹಿತ ವಿದ್ಯುತ್ ಸರಬರಾಜು ಮಾಡಬಹುದಾಗಿದೆ. ಹಾಲಿ ಇರುವ 66/11 ವಿದ್ಯುತ್ ಉಪಕೇಂದ್ರಗಳಾದ ಹೊಳಲ್ಕೆರೆ, ಚಿತ್ರಹಳ್ಳಿ, ಚಿಕ್ಕಜಾಜೂರು ಮತ್ತು ಪಂಡರಹಳ್ಳಿ ವಿದ್ಯುತ್ ಉಪಕೇಂದ್ರಗಳ ಲೋಡಿಂಗ್ ಸಾಮಥ್ರ್ಯವನ್ನು ಹೆಚ್ಚಿಸಬಹುದಾಗಿದೆ. ಪದೇ ಪದೇ ಆಗುತ್ತಿರುವ 11 ಕೆವಿ ವಿದ್ಯುತ್ ಮಾರ್ಗಗಳ ಅಡಚಣೆಯನ್ನು ತಡೆಗಟ್ಟಿ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಮತ್ತು ರೈತರ ಐ.ಪಿ.ಸೆಟ್ಗಳಿಗೆ ಉತ್ತಮ ಗುಣಮಟ್ಟದ ವೋಲ್ಟೇಜ್ಪಡೆಯಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮಣ್ಣ, ತಿಪ್ಪಣ್ಣ, ಅಜ್ಜಪ್ಪ, ಹರೀಶ್, ಓಂಕಾರಮೂರ್ತಿ,, ದಯಾನಂದ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಆನಂದಪ್ಪ,
ಅರಸನಘಟ್ಟ ಗ್ರಾಮದ ಹಿರಿಯ ಮುಖಂಡರಾದ ದಿವಾಕರಣ್ಣ, ಬಸವರಾಜಪ್ಪ, ನವೀನ್ ಹಾಗೂ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಹರೀಶ್, ಯಲ್ಲಪ್ಪ, ಹಾಗೂ ತಾಲೋಕ್ ಪಂಚಾಯತಿ ಮಾಜಿ ಸದಸ್ಯರಾದ ಶಿವಕುಮಾರ್,
ಮುಖಂಡರಾದ ಈಶ್ವರಪ್ಪ, ಲೋಕೇಶ್ವರಪ್ಪ, ಅರಸನಘಟ್ಟ, ಚಿಕ್ಕಂದವಾಡಿ, ಕೇಶವಾಪುರ, ಹನುಮನಕಟ್ಟೆ, ಅಪ್ಪರಸನಹಳ್ಳಿ, ಆಡನೂರು, ಪಾಡಿಗಟ್ಟೆ ರೈತರು, ಮುಖಂಡರು ಗ್ರಾಮಸ್ಥರು ಇದ್ದರು ಇದ್ದರು…
ವರದಿ. ನವೀನ್ ಅರಸನಘಟ್ಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030