ತಾಲ್ಲೂಕಿನ ಬಲಿಜ ಶ್ರೇಯ ಭವನದಲ್ಲಿ ಆರತಕ್ಷತೆಯ
ನಂತರ ಏರ್ಪಡಿಸಿದ್ದ ಭೋಜನದಲ್ಲಿ ನೀರು ಸಿಗಲಿಲ್ಲ
ಕಾರಣಕ್ಕೆ ಆರಂಭವಾದ ಜಗಳದಿಂದ ಮದುವೆ ರದ್ದು
ಹಿರಿಯೂರು:
ಆರತಕ್ಷತೆಯ ನಂತರ ಏರ್ಪಡಿಸಿದ್ದ ಭೋಜನದಲ್ಲಿ ಕೊನೆಗೆ ಬಂದ ಕೆಲವರಿಗೆ ನೀರಿನ ಬಾಟಲ್ ಸಿಗಲಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ಮದುವೆ ರದ್ದಾದ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿ- 48ಕ್ಕೆ ಹೊಂದಿಕೊಂಡಿರುವ “ಬಲಿಜ ಶ್ರೇಯ ಭವನ”ದಲ್ಲಿ ಭಾನುವಾರ ನಡೆದಿದೆ.
ಶನಿವಾರ ರಾತ್ರಿ ಅರತಕ್ಷತೆಯ ನಂತರ ಕೆಲವರು ತಡವಾಗಿ ಊಟಕ್ಕೆ ಬಂದಿದ್ದು, ಕ್ಯಾಟರಿಂಗ್ ನವರು ಸಕಾಲಕ್ಕೆ ಕುಡಿಯುವ ನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ.
ಬಳಿಕ ಮದುವೆ ನಿಲ್ಲುವ ಸೂಚನೆ ಕಂಡು ಬಂದ ಹಿನ್ನಲೆಯಲ್ಲಿ ಭಾನುವಾರ ಮುಂಜಾನೆಯಿಂದಲೇ ಎರಡು ಕಡೆಯವರು ವರ ಮತ್ತು ವಧುವನ್ನು ಒಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಜಗಳ ಮರೆತು ಮದುವೆಗೆ ಒಪ್ಪುವಂತೆ ಪೋಷಕರು ಹಾಗೂ ಸಂಬಂಧಿಕರು ಮನವಿ ಮಾಡಿದ್ದಾರೆ.
ಮದುವೆ ಮುಹೂರ್ತ ಬೆಳಿಗ್ಗೆ 10.30 ರಿಂದ 11.30 ರೊಳಗೆ ನೆರವೇರಬೇಕಿತ್ತು. ಮದುವೆ ಮುಂದುವರಿಸಲು ಮಧ್ಯಾಹ್ನ 12 ಗಂಟೆಯವರೆಗೂ ವಧುವನ್ನು ಒಒಪ್ಪಿಸುವ ಪ್ರಯತ್ನ ಎರಡು ಕಡೆಯವರು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚಿರತಹಳ್ಳಿಯ ವಧು ಹಾಗು ಜಗಳೂರು ಪಟ್ಟಣದ ವರನ ವಿವಾಹ ಇಲ್ಲಿ ನಡೆಯಬೇಕಿತ್ತು. ವಧು-ವರ ಇಬ್ಬರು ಇಂಜಿನಿಯರ್ ಪಧವೀಧರರಾಗಿದ್ದು, ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎನ್ನಲಾಗಿದೆ.
ಲಕ್ಷಾಂತರ ರೂಪಾಯಿ ಹಣ ಖರ್ಚುಮಾಡಿ ಮದುವೆ ಏರ್ಪಡಿಸಿದ್ದರು. ವರನ ಕಡೆಯವರಿಗೆ ತಡವಾಗಿ ನೀರು ಕೊಟ್ಟರು ಎಂಬ ಸಣ್ಣ ವಿಚಾರಕ್ಕೆ ಜಗಳವಾಗಿ ಹಸೆಮಣೆ ಏರುವ ಮುನ್ನ ದಿನವೇ ಮದುವೆ ಕ್ಯಾನ್ಸಲ್ ಆಗಿದೆ.
ಏನಾದರೂ ಮಾಡಿ ಮದುವೆ ಮುಂದುವರೆಸಲು ಇಬ್ಬರನ್ನು ಕೂರಿಸಿ ಸಂಧಾನ ನಡೆಸುವ ಪ್ರಯತ್ನ ಜೋರಾಗಿಯೇ ನಡೆಯಿತು. ಆದರೆ ವಧು ಮದುವೆ ಬೇಡವೇ ಬೇಡ ಎಂದು ಪಟ್ಟು ಹಿಡಿದ ಕಾರಣ ಅಂತಿಮವಾಗಿ ಮದುವೆ ರದ್ದಾಯಿತು. ಮದುವೆಗೆ ಬಂದವರು ನವದಂಪತಿಗಳಿಗೆ ಶುಭಕೋರಿ, ಊಟಮಾಡಿಕೊಂಡು ಹೋಗಬೇಕಾದವರು ಬೇಸರದಿಂದ ವಾಪಾಸ್ ತೆರಳಿದ ಪ್ರಸಂಗ ನಡೆದಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030