ಭದ್ರಾ ನದಿಯಲ್ಲಿ ಪ್ರಥಮ ಗಂಗಾ ಆರತಿ ಮತ್ತು ತೆಪ್ಪೋತ್ಸವ: ಹೊಳೆಹೊನ್ನೂರಿನಲ್ಲಿ ವಿಜೃಂಭಣೆಯಿಂದ ಆಚರಣೆ
ಶ್ರೀ ಗಂಗಾ ಪರಮೇಶ್ವರಿ ಕಾರ್ತಿಕೋತ್ಸವದ ಪ್ರಯುಕ್ತ ಹೊಳೆಹೊನ್ನೂರಿನ ಭದ್ರಾ ನದಿಯ ತೀರದಲ್ಲಿ 30 ನವಂಬರ್, 2024 ರ ಶನಿವಾರದಂದು ಪ್ರಪ್ರಥಮ ಬಾರಿಗೆ ಗಂಗಾ ಆರತಿ ಮತ್ತು ತೆಪ್ಪೋತ್ಸವ ವಿಜೃಂಭಣೆಯಿಂದ ಏರ್ಪಡಿಸಲಾಯಿತು. ಗ್ರಾಮದ ಜನತೆ ಹಾಗೂ ಗಂಗಾ ಮಥಸ್ಥ ಸಮಾಜದವರ ಸಹಭಾಗಿತ್ವದಲ್ಲಿ ಭಕ್ತಿ ಹಾಗೂ ಉತ್ಸಾಹದ ವಾತಾವರಣಕ್ಕೆ ಸಾಕ್ಷಿಯಾಯಿತು.
ಈ ವೈಭವಶಾಲಿ ಕಾರ್ಯಕ್ರಮದಲ್ಲಿ ಗ್ರಾಮದ ಸ್ಥಳೀಯ ಗ್ರಾಮ ದೇವತೆ ಶ್ರೀ ಹೊನ್ನೂರಮ್ಮ ದೇವಿಯ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ನದಿಯ ತೀರದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಗಂಗಾ ಆರತಿ ದರ್ಶನ, ಭದ್ರಾ ನದಿಯ ಪವಿತ್ರತೆಯನ್ನು ಮತ್ತಷ್ಟು ಉಜ್ವಲಗೊಳಿಸಿತು. ಬೃಹತ್ ಸಂಖ್ಯೆಯಲ್ಲಿ ಗ್ರಾಮಸ್ಥರು ಗಂಗಾ ಆರತಿಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಪ್ರಾರ್ಥನೆಗಳನ್ನು ಸಲ್ಲಿಸಿದರು.
ಪ್ರಸಿದ್ಧತೆ ಪಡೆದ ಕಾರ್ತಿಕೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದು, ಈ ಬಾರಿ ಮೊದಲ ಬಾರಿಗೆ ಆಯೋಜಿಸಲಾದ ತೆಪ್ಪೋತ್ಸವವಾಗಿದೆ. ನದಿಯ ಮಧ್ಯದಲ್ಲಿ ತೆಪ್ಪವನ್ನು ಸಜ್ಜುಗೊಳಿಸಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ತೆಪ್ಪದಲ್ಲಿ ನಡೆದ ಮಂಗಳಾರತಿ, ಗ್ರಾಮಸ್ಥರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಮುಖಂಡರಾದ ಗೌಡ್ರು ಜಯರಾಮಪ್ಪ ಮತ್ತು ಅಣ್ಣಯ್ಯಪ್ಪ ಪ್ರಮುಖ ಪಾತ್ರ ವಹಿಸಿದರು. ಅವರ ಮಾರ್ಗದರ್ಶನದಲ್ಲಿ ಈ ವರ್ಷದ ಕಾರ್ತಿಕೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಗ್ರಾಮದ ಹಿರಿಯರು, ಮಹಿಳೆಯರು, ನಡೆಯಲಾದ ಈ ಮಹತ್ವದ ಧಾರ್ಮಿಕ ಸಮಾರಂಭ ಭದ್ರಾ ನದಿಯ ಗೌರವವನ್ನು ಮತ್ತೆ ಮೆರೆಸಿತು. ಹಬ್ಬದ ದಿನದಂತೆಯಾದ ಹೊಳೆಹೊನ್ನೂರಿನ ಈ ಕಾರ್ಯಕ್ರಮ, ಗ್ರಾಮಸ್ಥರ ಭಕ್ತಿ ಮತ್ತು ಸಾಂಸ್ಕೃತಿಕ ಸಂವೇದನೆಗೆ ಹೊಸ ಆಯಾಮವನ್ನು ನೀಡಿತು…
ವರದಿ. ಸೋಮಶೇಖರ್ ಶಿವಮೊಗ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030