ಪ್ರತಿ ಮನೆಗೆ ಕುಡಿಯುವ ನೀರು ಒದಗಿಸಿ: ಶೋಭಾ ಕರಂದ್ಲಾಜೆ
ಬೆಂಗಳೂರು: ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿ ಮನೆಗಳಲ್ಲಿ ಶುದ್ಧ ಕುಡಿಯುವ ನೀರಿನ್ನು ಸರಿಯಾಗಿ ಒದಗಿಸಿ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕಾರ್ಮಿಕ ಮತ್ತು ಉದ್ಯೋಗದ ರಾಜ್ಯ ಸಚಿವರು ಹಾಗೂ ಲೋಕ ಸಭಾ ಸದಸ್ಯರಾದ ಕುಮಾರಿ ಶೋಭಾ ಕರಂದ್ಲಾಜೆರವರ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಬೆಂಗಳೂರು ನಗರ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಅಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸಲಾಗುತ್ತಿದ್ದು, ನಗರದ 84 ಗ್ರಾಮ ಪಂಚಾಯಿತಿಯಲ್ಲಿ, 767 ಕಾಮಗಾರಿಯಲ್ಲಿ 59 ಪೂರ್ವಗೊಂಡಿದೆ. ಸುಮಾರು 3.50 ಲಕ್ಷದ ಮನೆಗಳಿಗೆ ಕುಡಿಯುವ ನೀರು ಒದಗಿಸಬೇಕಾಗಿರುತ್ತದೆ. ಆದರೆ ಇದುವರೆಗೆ 50 ಸಾವಿರ ಮನೆಗಳಿಗೆ ಮಾತ್ರವೇ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಅಧಿಕಾರಿಗಳು ನೀಡಿದ ಮಾಹಿತಿಗೆ ಪ್ರತಿಕ್ರಿಯಿಸಿದ ಅವರು ಈ ಯೋಜನೆಯಲ್ಲಿ ಕಳಪೆ ಕಾಮಗಾರಿಗಳ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಮರು ಪರಿಶೀಲನೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸಿಬೇಕು ಎಂದು ಜಲಜೀವನ್ ಮಿಷನ್ ಅಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ 2,870 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 1,077 ಸ್ವಂತ ಕಟ್ಟಡ ಹಾಗೂ 834 ಬಾಡಿಗೆ ಕಟ್ಟಡ, ಶಾಲಾ ಆವರಣದಲ್ಲಿ 264, ಬಿಬಿಎಂಪಿ ವಲಯಗಳಲ್ಲಿ 350 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ ಶೀಥಿಲಗೊಂಡಿರುವ ಕಟ್ಟಡ ಹಾಗೂ ಕಾಂಪೌಂಡ್ ಗಳ ಅಡಿಟ್ ಮಾಡಿಸಿ ದುರಸ್ತಿಯಲ್ಲಿರುವ ಶಾಲಾ ಕಟ್ಟಡಗಳ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿ ಅದರ ಸ್ವಚ್ಚತೆಯ ಬಗ್ಗೆ ನಿಗಾ ವಹಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ 84 ಗ್ರಾಮ ಪಂಚಾಯಿತಿಗಳಲ್ಲಿ 41 ಘನತ್ಯಾಜ್ಯ ಘಟಕಗಳಿದ್ದು, 36 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ 7 ಘಟಕಗಳನ್ನು ಸ್ಥಾಪಿಸಲು ನಿಗದಿಪಡಿಸಿದ್ದ ಜಾಗವನ್ನು ಜಿಲ್ಲಾಧಿಕಾರಿಗಳಿಂದ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಸೂಲಿಕೆರೆ ಹಾಗೂ ಭೂದಿಗೆರೆಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಗುರುತಿಸಿದ್ದ ಜಾಗಗಳಲ್ಲಿ ಸಮಸ್ಯೆ ಇರುವುದರಿಂದ ಶೀಘ್ರವಾಗಿ ಬೇರೆ ಜಾಗವನ್ನು ಗುರುತಿಸಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ 22 ಸಾವಿರ ಎಕರೆ ಕೃಷಿ ಭೂಮಿ ಇದ್ದು, ಫಸಲ್ ಬಿಮಾ ಯೋಜನೆಯಲ್ಲಿ ರಾಗಿ, ಜೋಳ, ಟಮೊಟೊ ಮತ್ತು ಭತ್ತ ಬೆಳೆಗಳಿಗೆ ಒಟ್ಟು 649 ಫಲಾನುಭವಿಗಳು ಅರ್ಜಿಸಲ್ಲಿಸಿದ್ದು, 523 ಫಲಾನುಭವಿಗಳಿಗೆ ಮಾತ್ರ ಒಟ್ಟು 13 ಲಕ್ಷ ಹಣ ಮಂಜೂರಾಗಿರುತ್ತದೆ. ಇ-ನಾಮ್ ಮಾರುಕಟ್ಟೆ ಯೋಜನೆಯನ್ನು ಮರುರೂಪಿಸಲು ವರದಿ ತಯಾರಿಸಿ ಸಲ್ಲಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಮಂತ್ರಿ ಯೋಜನೆಗಳಲ್ಲಿ ಒಂದಾದ ಲಕ್ಪತಿ ದೀದಿ ಯೋಜನೆಯಡಿಯಲ್ಲಿ ಸ್ಥಳೀಯವಾಗಿ ಸಂಜೀವಿನಿ ಮಾರುಕಟ್ಟೆ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಡಾ.ಸಿದ್ದರಾಮಪ್ಪ ಮಾಹಿತಿ ನೀಡಿದರು.
ಸಭೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ ಮೋಹನ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಯ ಸಹ ಅಧ್ಯಕ್ಷರಾದ ಡಾ.ಸಿ.ಎನ್ ಮಂಜುನಾಥ್, ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಹರ್ಷಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ ದಯಾನಂದ ಹಾಗೂ ಜಿಲ್ಲಾ ಪಂಚಾಯತ್ ನ ಮುಖ್ಯ ಕೆ.ಎಸ್ ಲತಾಕುಮಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030