ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಿರಂತರ ಮೇಲ್ವಿಚಾರಣೆ ಮಾಡಿದರು ಎನ್ನಲಾಗಿದ್ದು, ನವದೆಹಲಿಯ ಲೋಕಕಲ್ಯಾಣ ಮಾರ್ಗ್ನ ತಮ್ಮ ನಿವಾಸದಲ್ಲೇ ಕುಳಿತು ಮೋದಿ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕರ ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ
ಕಾರ್ಯಾಚರಣೆಯ ಸಮಯದಲ್ಲಿ ಒಂಬತ್ತು ನಿರ್ದಿಷ್ಟ ಭಯೋತ್ಪಾದಕ ಅಡುಗುತಾಣಗಳನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದೆ, ಅವುಗಳಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ (ಎಲ್ಇಟಿ) ಸೇರಿವೆ ಎನ್ನಲಾಗಿದೆ.
ಸರ್ಕಾರದ ಮೂಲಗಳ ಪ್ರಕಾರ, ಪ್ರಧಾನ ಮಂತ್ರಿಯವರು ನವದೆಹಲಿಯಲ್ಲಿ ದಾಳಿಯ ಬೆಳವಣಿಗೆಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದರು ಎನ್ನಲಾಗಿದೆ. ಅವರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥರು, ಹಿರಿಯ ಗುಪ್ತಚರ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಿರಂತರವಾಗಿ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.
ಮಂಗಳವಾರ ಸಂಜೆ ಆರಂಭವಾದ ಸಶಸ್ತ್ರಪಡೆಗಳ ಮುಖ್ಯಸ್ಥರು ಹಾಗೂ ಮೋದಿಯವರ ನಡುವಿನ ಮಾತುಕತೆ ಬುಧವಾರ ಬೆಳಗಿನ ಜಾವದವರೆಗೆ ಅಂದರೆ ದಾಳಿ ಮುಕ್ತಾಯಗೊಳ್ಳುವವರೆಗೆ ನಡೆಯಿತು ಎನ್ನಲಾಗಿದೆ.
ರಕ್ಷಣಾ ಸಚಿವಾಲಯವು ಬೆಳಗಿನ ಜಾವ 1:44 ಕ್ಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ದಾಳಿಗಳು ಉಗ್ರರ ಮೇಲೆ ಕೇಂದ್ರೀಕೃತವಾಗಿದ್ದು ಇದರಲ್ಲಿ ಪಾಕಿಸ್ತಾನದ ಯಾವುದೇ ನಾಗರೀಕರಿಗೆ ಹಾನಿಯಾಗಿಲ್ಲ ಎಂದು ತಿಳಿಸಿದೆ .
ಕ್ಷಿಪಣಿ ದಾಳಿಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಐದು ಸ್ಥಳಗಳನ್ನು – ಬಹವಾಲ್ಪುರ್ ಮತ್ತು ಮುರಿಡ್ಕೆ ಸೇರಿದಂತೆ – ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಾಲ್ಕು ಸ್ಥಳಗಳಾದ ಕೋಟ್ಲಿ, ಮುಜಫರಾಬಾದ್ ಮತ್ತು ಬಾಗ್ ಮೇಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿಗಳಿಂದ ತಿಳಿದುಬಂದಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030