ಡಾ.ರಾಜಕುಮಾರ್ ರವರು ಕೇವಲ ನಟರಾಗಿಬದುಕದೆ ಕನ್ನಡನಾಡಿನ ಆಸ್ತಿಯಾಗಿ ಉಳಿದಿದ್ದಾರೆ : ಚಂದ್ರಯ್ಯ…!!!

Listen to this article

ಡಾ.ರಾಜಕುಮಾರ್ ರವರು ಕೇವಲ ನಟರಾಗಿಬದುಕದೆ
ಕನ್ನಡನಾಡಿನ ಆಸ್ತಿಯಾಗಿ ಉಳಿದಿದ್ದಾರೆ : ಚಂದ್ರಯ್ಯ
ಹಿರಿಯೂರು :
ಆಡು ಮುಟ್ಟದ ಸೊಪ್ಪಿಲ್ಲ ಡಾ.ರಾಜಕುಮಾರ್ ಅಭಿನಯಿಸದ ಪಾತ್ರಗಳಿಲ್ಲ ಎಂಬ ನಾಣ್ನುಡಿಯಂತೆ ಡಾ.ರಾಜಕುಮಾರ್ ಅವರು ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ನಟಿಸದಿರುವ ಯಾವುದೇ ಪಾತ್ರಗಳಿಲ್ಲ, ಇವರು ಕೇವಲ ನಟರಾಗಿ ಬದುಕದೆ ಕನ್ನಡನಾಡಿನ ಆಸ್ತಿಯಾಗಿ ಉಳಿದಿದ್ದಾರೆ ಎಂಬುದಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಯ್ಯ ಹೇಳಿದರು.
ನಗರದ ಪುಷ್ಪಾಂಜಲಿ ಚಿತ್ರಮಂದಿರ ರಸ್ತೆಯಲ್ಲಿರುವ ವೀನಸ್ ಹಾಲಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕರತ್ನ ಡಾ.ರಾಜಕುಮಾರ್ ಅವರ 97ನೇ ಜನುಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಒಂದು ಕುಗ್ರಾಮದಿಂದ ಬಂದ ಮುತ್ತುರಾಜ್ ರವರು ರಾಜಕುಮಾರರಾಗಿ ಎಸ್.ಎಲ್.ಸಿಂಹರವರ ಮಾರ್ಗದರ್ಶನದಲ್ಲಿ ಬೇಡರ ಕಣ್ಣಪ್ಪನಿಂದ ಶಬ್ದವೇದಿಯ ಚಲನಚಿತ್ರದವರೆಗೆ ಸುಮಾರು 25ಕ್ಕೂ ಹೆಚ್ಚು ಐತಿಹಾಸಿಕ, ಪೌರಾಣಿಕ, ಹಾಗೂ ಸಾಮಾಜಿಕ ಚಲನಚಿತ್ರಗಳಲ್ಲಿ ನಟಿಸಿ ಯುವಜನತೆಯಲ್ಲಿ ಹಿರಿಯರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡಿದ್ದಾರೆ.
ಇವರ ಚಲನಚಿತ್ರಗಳಲ್ಲಿ ಪ್ರೀತಿ, ಪ್ರೇಮ, ಕೌಟುಂಬಿಕ ಸೌಹಾರ್ದತೆ, ಮಾನವೀಯತೆ, ಮನುಷ್ಯತ್ವದ ಗುಣಗಳನ್ನು ನಾಡಿನ ಜನರು ಪಾಲನೆ ಮಾಡುತ್ತಾ ಬಂದಿದ್ದಾರೆ, ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎಂದು ಕರೆದ ಏಕೈಕ ನಟರೆಂದರೆ ಅದು ನಮ್ಮ ಡಾ.ರಾಜ್ ಕುಮಾರ್ ರವರಾಗಿದ್ದಾರೆ ಎಂಬುದಾಗಿ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಪದ್ಮಭೂಷಣ ಡಾ.ರಾಜಕುಮಾರ್ ಅವರು ಕನ್ನಡ ನಾಡಿನ ಆರಾಧ್ಯ ದೈವ ಅವರಲ್ಲಿರುವ ಸರಳತೆ ವಿನಯತೆ ಉತ್ತಮ ಅಭಿನಯ ಗಾಯನ ಅಭಿಮಾನಿಗಳಲ್ಲಿ ಸ್ಪೂರ್ತಿ ನೀಡಿದೆ ಎಂದರಲ್ಲದೆ,
ಕನ್ನಡದ ಉಪಸಂಸ್ಕೃತಿಗೆ ಒತ್ತುಕೊಟ್ಟು ರಣಧೀರ ಕಂಠೀರವ ಶ್ರೀಕೃಷ್ಣದೇವರಾಯ, ಹಿಮ್ಮಡಿಪುಲಕೇಶಿ, ಮಯೂರ, ಕನಕದಾಸರು, ಸರ್ವಜ್ಞ, ಬಬ್ರುವಾಹನ, ಹಿರಣ್ಯಕಶ್ಯಪ, ಕವಿರತ್ನಕಾಳಿದಾಸ, ಸಂತಕಬೀರ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಜೀವ ತುಂಬುವ ಅನುರಾಗ ಅರಳಿತು, ಧ್ರುವತಾರೆ, ಚಿತ್ರದ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿ ಕನ್ನಡದ ಅಸ್ಮಿತೆಯನ್ನು ಉಳಿಸಿದ್ದಾರೆ.
ಅಷ್ಟೇ ಅಲ್ಲದೆ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕನ್ನಡ ನಾಡು-ನುಡಿಯ ಬೆಳವಣಿಗೆಗೆ ದುಡಿದಿದ್ದಾರೆ ಇವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಸಾಹೇಬ ಫಾಲ್ಕೆ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಕನ್ನಡ ಹಂಪಿ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂಬುದಾಗಿ ಅವರು ಹೇಳಿದರು.
ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರ್ತಿಕೋಟೆ ಮಹಾಸ್ವಾಮಿ ಮಾತನಾಡಿ, ಗಂಧದಗುಡಿ, ಬಂಗಾರದ ಮನುಷ್ಯ, ಚಲನಚಿತ್ರಗಳು ಯುವಕರಿಗೆ ಸ್ಪೂರ್ತಿ ನೀಡಿ, ಈ ನಾಡಿನ ನೆಲಜಲ, ಸಂಪತ್ತು ಕಾಪಾಡುವ ಹಂಬಲ ಹೊಂದಿದ್ದರು. ಹಾಗೆ ಉದ್ಯೋಗದಲ್ಲಿದ್ದ ಯುವಕರು ಕೃಷಿ ಮಾಡಲು ಹಳ್ಳಿಗಳಿಗೆ ಹಿಂದಿರುಗಿದ ಪ್ರಸಂಗಗಳು ಆಗಿನ ಕಾಲಘಟ್ಟದಲ್ಲಿ ನಡೆದಿದೆ.
ಅವರ ಚಲನಚಿತ್ರಗಳಲ್ಲಿ ಧೂಮಪಾನ, ಮಧ್ಯಪಾನ, ಅಶ್ಲೀಲತೆ ದೃಶ್ಯಗಳಿಗೆ ಅವಕಾಶ ನೀಡದೆ ಉತ್ತಮ ಕಥೆಗಳಿಗೆ ಆದ್ಯತೆ ನೀಡುತ್ತಿದ್ದರು, ಇದರಿಂದಲೇ ಜನ ಕುಟುಂಬ ಪರಿವಾರ ಸಮೇತವಾಗಿ ಥಿಯೇಟರ್ ಗಳಿಗೆ ಹೋಗಿ ಅವರ ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದರು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ರಾಮಚಂದ್ರಪ್ಪ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧನಂಜಯ ಕುಮಾರ್, ಕೋಶಾಧ್ಯಕ್ಷರಾದ ಜಿ.ಪ್ರೇಮ್ ಕುಮಾರ್, ನಗರಸಭೆ ಸದಸ್ಯರಾದ ಗಣೇಶ್, ಹೆಚ್.ಕೃಷ್ಣಮೂರ್ತಿ, ಜೆ.ನಿಜಲಿಂಗಪ್ಪ, ಗಡಾರಿ ಕೃಷ್ಣಪ್ಪ, ಐಮಂಗಳ ಹೋಬಳಿ ಅಧ್ಯಕ್ಷರಾದ ಪಿ.ತಿಪ್ಪೇಸ್ವಾಮಿ, ಪ್ರಶಾಂತ್ ಇತರರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend