ಸುಟ್ಟ ಕರ್ನಾರಹಟ್ಟಿ : ತುರುಕಾಳಗದ ವೀರಗಲ್ಲು ಶಾಸನ ಶೋಧ…!!!

Listen to this article

ಸುಟ್ಟ ಕರ್ನಾರಹಟ್ಟಿ : ತುರುಕಾಳಗದ ವೀರಗಲ್ಲು ಶಾಸನ ಶೋಧ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸುಟ್ಟಕರ್ನಾರಹಟ್ಟಿ ಗ್ರಾಮದಲ್ಲಿ ತುರುಕಾಳಗದ ವೀರಗಲ್ಲು ಶಾಸನವನ್ನು ಸಂಶೋಧಕರು ಮತ್ತು ಇತಿಹಾಸ ಉಪನ್ಯಾಸಕರಾದ ಡಾ.ತಿಪ್ಪೇಶ ಹೆಚ್. ಎಂ. ಅವರು ಬೆಳಕಿಗೆ ತಂದಿದ್ದಾರೆ.

ಸ್ಥಳೀಯವಾಗಿ *ಕಲ್ಲಪ್ಪನ ಕುಟ್ರೆ* ಎಂದು ಕರೆಯುವ ಸ್ಥಳದ ಸ್ಪಲ್ಪದೂರದಲ್ಲಿ ಸರ್ವೇ ನಂಬರ್ 87ರ ಪಾಳು ಜಮೀನಲ್ಲಿ ನೆಲಕ್ಕೆ ಅನಾಥವಾಗಿ ಬಿದ್ದಿರುವ ವೀರಗಲ್ಲನ್ನು ಅದೇ ಗ್ರಾಮದವರಾದ ಡಾ.ಪ್ರಹ್ಲಾದ್ ಡಿ.ಎಮ್ ಅವರು ಬಹುದಿನಗಳ ಹಿಂದೆ ಮಾಹಿತಿ ನೀಡಿದ್ದರು. ಆ ಮಾಹಿತಿಯ ಮೇರೆಗೆ ಡಿಸೆಂಬರ್ 15, ಭಾನುವಾರದಂದು ಗ್ರಾಮಕ್ಕೆ ಭೇಟಿನೀಡಿದ ಡಾ.ತಿಪ್ಪೇಶ ಹೆಚ್.ಎಂ ಮತ್ತು ಡಾ.ಮಂಜಣ್ಣ ಕೆ.ಎಮ್. ಅವರುಗಳು ಗ್ರಾಮದಲ್ಲಿ ಪರಿಶೀಲನೆ ನಡೆಸಿ ಈ ತುರುಕಾಳಗದ ವೀರಗಲ್ಲು ಶಾಸನವನ್ನು ಶೋಧಿಸಿದ್ದಾರೆ.

ಮೂರು ಹಂತದ ಫಲಕಗಳನ್ನು ಒಳಗೊಂಡಿರುವ ತುರುಕಾಳಗದ ವೀರಗಲ್ಲು ಶಾಸನವು 2 ಮೀಟರ್ ಉದ್ದ, 1 ಮೀಟರ್ ಅಗಲವಾಗಿದ್ದು, ಸ್ಥಳೀಯವಾಗಿ ಸಿಗುವ ಕಣಶಿಲೆಯಲ್ಲಿ ಕಂಡರಿಸಲಾಗಿದೆ.

ಕೆಳ ಹಂತದ ಫಲಕದಲ್ಲಿ ವೀರನು ತುರುಗಳ ರಕ್ಷಣೆಗಾಗಿ ಶತ್ರುವಿನೊಂದಿಗೆ ಹೋರಾಡುತ್ತಿರುವ ದೃಶ್ಯ ವಿದೆ. ವೀರನು ಬಿಲ್ಲು, ಬಾಣ ಹಿಡಿದು ತುರುಗಳು ಕದಿಯಲು ಬಂದ ಶತೃವಿನ ವಿರುದ್ಧ ಪರಸ್ಪರ ಹೋರಾಟ ನಡೆಸುತ್ತಿರುವ ಚಿತ್ರಣವಿದೆ. ಹೋರಾಟದಲ್ಲಿ ವೀರನ ದೇಹಕ್ಕೆ ಬಾಣಗಳು ನೆಟ್ಟಿದ್ದು, ಅವನ ಹಿಂಭಾಗದಲ್ಲಿ ರಕ್ಷಣೆ ಪಡೆದ ಲಕ್ಷಣವಾಗಿರುವ ಎಂಟು ತುರುಗಳು(ದನಗಳು) ಶತ್ರುವಿನಿಂದ ಬಿಡುಗಡೆ ಹೊಂದಿ ಬೆದರಿ ಹಟ್ಟಿಯ ಕಡೆಗೆ ಓಡುತ್ತಿರುವುದನ್ನು ಶಿಲ್ಪಿಯು ಸೊಗಸಾಗಿ ಚಿತ್ರಿಸಿದ್ದಾನೆ.

ಮಧ್ಯದ ಫಲಕದಲ್ಲಿ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ವೀರನನ್ನು ಸ್ವರ್ಗಕ್ಕೆ ದೇವ ಕನ್ಯೆಯರು ಕೊಂಡೊಯ್ಯತ್ತಿರುವ ಚಿತ್ರಣವಿದೆ.

ವೀರಗಲ್ಲಿನ ಅಗ್ರಭಾಗದ ಫಲಕದಲ್ಲಿ ಹೋರಾಟದಲ್ಲಿ ಮಡಿದ ವೀರ ಮತ್ತು ಅವನ ಮಡದಿಯ ಮಧ್ಯದಲ್ಲಿ ಶಿವಲಿಂಗ ಹಾಗೂ ಮೇಲ್ತುದಿಯಲ್ಲಿ, ಸೂರ್ಯ, ಚಂದ್ರರನ್ನು ಸಂಕೇತಿಸಲಾಗಿದ್ದು ವೀರ ಶಿವ ಸಾಯುಜ್ಯ ಹೊಂದಿ ಕೈಲಾಸವಾಸಿಯಾಗಿರುವುದರ ಸಂಕೇತವಾಗಿದೆ. ಒಟ್ಟಾರೆಯಾಗಿ ತುರುಗಳ ರಕ್ಷಣೆಗಾಗಿ ಶತೃವಿನ ವಿರುದ್ಧ ಹೋರಾಡಿ ಮಡಿದ ವೀರನ ಪರಾಕ್ರಮ ಹಾಗೂ ಸತಿಯ ತ್ಯಾಗ ಬಲಿದಾನದ ಜ್ಞಾಪಕಾರ್ಥವಾಗಿ ತುರುಗೋಳ್ ವೀರಗಲ್ಲು ಶಾಸನವನ್ನು ಹಾಕಿಸಲಾಗಿದೆ.

ಕೋಟ್:1 ಸಂಶೋಧಕರು ಮತ್ತು ಶ್ರೀ ಶಂಕರ್ ಆನಂದ್‌ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕರು, ತುಂಗಭದ್ರ ದಿನಪತ್ರಿಕೆ ವರದಿಗಾರರು ಆಗಿರುವ ಡಾ.ತಿಪ್ಪೇಶ ಹೆಚ್.ಎಂ ಅವರು
ವೀರಗಲ್ಲಿನ ಮಧ್ಯದ ಪಟ್ಟಿಕೆಯ ಮೇಲೆ ಮತ್ತು ಕೆಳಗೆ ಇರುವ ಲಿಪಿ ಮತ್ತು ಶಿಲ್ಪದ ಲಕ್ಷಣಗಳಿಂದ ಇದು ಕ್ರಿ.ಶ.ಸು 13ನೇ ಶತಮಾನದ ಅಂತ್ಯ ಕಾಲಕ್ಕೆ ಸೇರಿರುವ ತುರುಕಾಳಗದ ವೀರಗಲ್ಲು ಶಾಸನ ಇದಾಗಿದೆ. ಈ ತುರುಗೋಳ್ ವೀರಗಲ್ಲಿನಲ್ಲಿರುವ ಲಿಪಿ ಮತ್ತು ಅದು ಒಳಗೊಂಡಿರುವ ಐತಿಹಾಸಿಕ ಮಹತ್ವವನ್ನು ಅರಿಯಲು ತಜ್ಞರ ಸಹಕಾರದೊಂದಿಗೆ ಸೂಕ್ಷ್ಮ ಮತ್ತು ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಈ ಶಾಸನ ಶೋಧನೆಗೆ ಸ್ಥಳೀಯರಾದ ಡಾ.ಸೂರಪ್ಪ, ಡಾ.ಸುರೇಶ್ ಮತ್ತು ತಾಯಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸುಟ್ಟಕರ್ನಾರಹಟ್ಟಿ ಗ್ರಾಮದ ಮುಖಂಡರಾದ ಕಾಟಯ್ಯನವರು ಸಹಕಾರ ನೀಡುವುದರ ಜೊತೆಗೆ ಈ ತುರುಗೋಳ್ ವೀರಗಲ್ಲು ಸ್ಥಳೀಯ ಮಟ್ಟದಲ್ಲಿ ಸಂರಕ್ಷಣೆ ಮಾಡುತ್ತೇವೆ ಎಂದಿದ್ದಾರೆ…

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend