ಹಿರೇ ಕುಂಬಳಕುಂಟೆ ಹಾಲಸ್ವಾಮಿಯ ಮುಳ್ಳು ಗದ್ದುಗೆ ಉತ್ಸವ
ಕೂಡ್ಲಿಗಿ: ತಾಲ್ಲೂಕಿನ ಹಿರೇ ಕುಂಬಳಕುಂಟೆ ಗ್ರಾಮದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 19ನೇ ವರ್ಷದ ಮುಳ್ಳು ಗದ್ದುಗೆ ಉತ್ಸವ ಸೋಮವಾರ ರಾತ್ರಿ ಸಂಭ್ರಮದಿಂದ ಜರುಗಿತು.
ಹಾಲಸ್ವಾಮಿ ಮಠದ ಧಾರ್ಮಿಕ ಪರಂಪರೆಯಂತೆ ಪೂಜಾ ಅನುಷ್ಠಾನ ಕೈಗೊಂಡಿದ್ದ ಶ್ರೀ ಸದ್ಗುರು ಶಿವಯೋಗಿ ಮೌನ ಋಷಿ ಸ್ವಾಮೀಜಿ ಹಾಗೂ ಶ್ರೀ ಸದ್ಗುರು ಶಿವಯೋಗಿ ಅಮೃತೇಶ್ವರ ಸ್ವಾಮೀಜಿ ಮತ್ತು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾ ಸ್ವಾಮೀಜಿ ಗಳು ಅವರು ಸ್ವಾಮಿಯ ಗದ್ದುಗೆಗೆ ಪೂಜೆ ನೆರವೇರಿಸಿ ಮುಳ್ಳಿನ ಮಂಟಪ ಆರೋಹಣ ಮಾಡಿದರು. ಹಾಲಸ್ವಾಮಿ ದೊರೆಯೇ ನಿನಗಾರು ಸರಿಯೇ ಸರಿಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್ ಹರ ಹರ ಮಹಾದೇವ ಎಂಬ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ಉತ್ಸವ ಪ್ರಾರಂಭವಾಯಿತು. ಬಳಿಕ ರಾತ್ರಿ 10.30 ಗಂಟೆಗೆ ಆರಂಭವಾದ ಮುಳ್ಳು ಗದ್ದುಗೆ ಉತ್ಸವ, ಗ್ರಾಮದ ಮುಖ್ಯ ಬೀದಿಯ ಮೂಲಕ ಸಾಗಿ ಸಂಪನ್ನಗೊಂಡಿತು. ನಂದಿಕೋಲು, ಮಂಗಳವಾದ್ಯ, ಡೊಳ್ಳು ಕುಣಿತ ವಾದ್ಯ ವೈಭವ ಉತ್ಸವದ ಮೆರಗನ್ನು ಹೆಚ್ಚಿಸಿದ್ದವು. ಹಿರೇ ಕುಂಬಳಕುಂಟೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಗ್ರಾಮದಲ್ಲಿ ಮಂಗಳವಾರ ಸಂಜೆ ಹಾಲಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030